ಸಿದ್ದಾಪುರ: ಮಂಗಳವಾರ ತಾಲೂಕಿನ ಕಾಳೇನಳ್ಳಿ ಸಮೀಪ ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಎನ್ನುವಾತ ಆತ್ಮಹತ್ಯೆಗೂ ಮುನ್ನ ಹರಿಬಿಟ್ಟ ವಿಡಿಯೋದಲ್ಲಿ ಅಪ್ರಾಪ್ತ ಯುವತಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುವ ಕುರಿತು ಬಹಿರಂಗಪಡಿಸಿದ್ದು, ಅದರಲ್ಲಿ ಕೆಲವು ಯುವಕರ ಜೊತೆಗೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಗೂ ಮುಖಂಡರ ಕುರಿತು ಆರೋಪಿಸಿದ್ದಾನೆ. ಆ ಎಲ್ಲ ವ್ಯಕ್ತಿಗಳನ್ನು ಒಳಗೊಂಡು ಪ್ರಕರಣ ದಾಖಲಿಸಿ ಸಮರ್ಪಕ ತನಿಖೆ ನಡೆಸಬೇಕು. ಕಾಂಗ್ರೆಸ್ ನಾಯಕರು ಸ್ಥಳೀಯ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣ ಗಮನಹರಿಸಿ ಬೇರೆ ತಾಲೂಕಿನ ಪೋಲಿಸ್ ಅಧಿಕಾರಿಗಳಿಂದ ತನಿಖೆ ನಡೆಸಲು ಕ್ರಮವಹಿಸಬೇಕು. ಈ ರೀತಿಯ ಮಹಿಳಾ ದೌರ್ಜನ್ಯವನ್ನು ಮತ್ತು ಸ್ಥಳೀಯ ಅಧಿಕಾರಿಗಳನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಳ್ಳುವದನ್ನು ಭಾರತೀಯ ಜನತಾ ಪಕ್ಷ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಹೇಳಿದರು.
ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಡುತ್ತದೆ ಎನ್ನುವದನ್ನು ಸಂತೋಷ ನಾಯ್ಕ ಆತ್ಮಹತ್ಯೆ ಪ್ರಕರಣ ಸಾಬೀತುಪಡಿಸಿದೆ. ಸರ್ಕಾರಿ ವಸತಿಗೃಹ ಸೇರಿದಂತೆ ಸರ್ಕಾರಿ ವ್ಯವಸ್ಥೆಯನ್ನು ಕಾಂಗ್ರೆಸ್ ಮುಖಂಡರು ದುರ್ಬಳಕೆ ಮಾಡಿಕೊಳ್ಳುವದು ಸೇರಿದಂತೆ ಮಹಿಳೆಯರ ದೌರ್ಜನ್ಯವೂ ನಡೆಯುತ್ತಿದೆ. 18 ವರ್ಷದ ಒಳಗಿನ ಯುವತಿಯರನ್ನು ಕಾಮುಕ ಕೃತ್ಯಕ್ಕೆ ಬಳಸಿಕೊಳ್ಳುವದು ನಡೆಯುತ್ತಿದೆ. ಈ ಕುರಿತು ಫೇಕ್ ಐಡಿ ಮಾಡಿಕೊಂಡು ಇವೆಲ್ಲವನ್ನು ತಿಳಿದುಕೊಂಡ ಸಂತೋಷ ನಾಯ್ಕ ಎನ್ನುವಾತನನ್ನು ಬೆದರಿಸಿ, ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಗಿದೆ. ಅವನಿಂದ ಲ್ಯಾಪ ಟಾಪ್ ಹಾಗೂ ಮೊಬೈಲ್ ನಲ್ಲಿರುವ ಮಾಹಿತಿಗಳನ್ನು ಕಿತ್ತುಕೊಂಡಿದ್ದರೂ ಆತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಡಿರುವ ವಿಡಿಯೋದಲ್ಲಿ ಈ ಜಾಲದಲ್ಲಿರುವ ವ್ಯಕ್ತಿಗಳ ಹೆಸರನ್ನು, ನಗ್ನ ಪೋಟೊಗಳನ್ನು ದಾಖಲಿಸಿದ್ದಲ್ಲದೇ, ಡೆತ್ ನೋಟ್ನಲ್ಲಿ ಈ ಗ್ಯಾಂಗ್ ನ ವ್ಯಕ್ತಿಗಳ ಮೊಬೈಲ್ ನಂಬರ್ ದಾಖಲಿಸಿದ್ದಾನೆ. ಈ ಕೃತ್ಯ ಮಾಡಿದ್ದು ತನ್ನ ತಪ್ಪು ಎಂದು ಕೂಡ ಹೇಳಿದ್ದಾನೆ. ಎಫ್.ಐ.ಆರ್.ನಲ್ಲಿ ಮೂವರು ವ್ಯಕ್ತಿಗಳ ಮಾತ್ರ ಉಲ್ಲೇಖವಿದ್ದು ಈ ಪ್ರಕರಣದಲ್ಲಿ ಕಾಂಗ್ರೆಸ್ನ ಪ್ರಭಾವಿ ಮುಖಂಡರು ಇರುವ ಎಲ್ಲ ದಾಖಲೆಗಳಿದ್ದೂ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆಯಿದೆ. ಇವೆಲ್ಲವಕ್ಕೂ ಯಾರು ಕಾರಣಿಕರ್ತರೋ ಅವರನ್ನೆಲ್ಲ ಬಂಧಿಸಿ,ತನಿಖೆ ನಡೆಸಬೇಕು.ಇಲ್ಲವಾದರೆ ಬಿಜೆಪಿ ಪ್ರತಿಭಟನೆ ನಡೆಸುತ್ತದೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಮಾತನಾಡಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ ನಾಯ್ಕ ವಿಡಿಯೋದಲ್ಲಿ, ಡೆತ್ ನೋಟ್ನಲ್ಲಿ ಹೆಸರಿಸಿರುವ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದುರ್ಬಳಕೆ ಮಾಡಿಕೊಂಡ ವ್ಯಕ್ತಿಗಳನ್ನು ಫೋಕ್ಸೋ ಕಾನೂನಿನಡಿ ಬಂಧಿಸಬೇಕು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹೆಸರು ಕೂಡ ಇದ್ದು ಅವರ ಮೇಲೆ ಕೊಲೆ ಕೇಸ್ ದಾಖಲಿಸಬೇಕು. ಕಾಂಗ್ರೆಸ್ ಕೈಗೊಂಬೆಯಾದ ಸ್ಥಳೀಯ ಪೊಲೀಸರ ಬದಲಾಗಿ ಹೊರಗಿನ ಅಧಿಕಾರಿಗಳಿಂದ ತನಿಖೆಯಾಗಬೇಕು. ಕಾಂಗ್ರೆಸ್ನ ದುರಾಕ್ರಮಣ ಮಿತಿಮೀರಿದ್ದು ಆ ಪಕ್ಷದ ಶಾಸಕರಿದ್ದೂ ಅವರಿಗೆ ಇವೆಲ್ಲ ಗಮನದಲ್ಲಿಲ್ಲವೇ?. ನಾವು ಇದಕ್ಕೆ ರಾಜಕೀಯ ಬಣ್ಣ ಕೊಡುತ್ತಿಲ್ಲ. ಮಾನವೀಯತೆ ದೃಷ್ಟಿಯಿಂದ ಹೋರಾಟಕ್ಕೆ ಮುಂದಾಗುತ್ತಿದ್ದೇವೆ. ಇಂಥ ಕೆಟ್ಟ ಜಾಲದಿಂದ ಮಹಿಳೆಯರಿಗೆ ತೊಂದರೆಯಾಗುವದನ್ನು ನಿಲ್ಲಿಸಬೇಕಿದೆ. ಈ ಪ್ರಕರಣದಲ್ಲಿ ಈಗ ಹಾಕಿರುವ ಎಫ್.ಐ.ಆರ್.ಬದಲಾಗಿ, ಆರೋಪಿಗಳೆಲ್ಲರನ್ನು ಸೇರಿಸಿ ಎಫ್.ಐ.ಆರ್.ಹಾಕಿ ಬಂಧಿಸಬೇಕು. ಪೊಲೀಸರು ಹಾರಿಕೆ ಉತ್ತರ ಕೊಟ್ಟರೆ ಸುಮ್ಮನಾಗುವದಿಲ್ಲ. ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸಬೇಕು. ನಾವು ಪೊಲಿಸ್ ಠಾಣೆ ಎದುರು ಪ್ರತಿಭಟಿಸುತ್ತೇವೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ.,ಪ್ರಧಾನ ಕಾರ್ಯದರ್ಶಿಗಳಾದ ಎಸ್.ಕೆ.ಮೇಸ್ತ, ತೋಟಪ್ಪ ನಾಯ್ಕ ಹಾಗೂ ಇನ್ನಿತರ ಪ್ರಮುಖರಿದ್ದರು.