ಶಿರಸಿ: ಶಿರಸಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ (ಜಮಾ-ಖರ್ಚು) ಒಪ್ಪಿಸುವ ಸಭೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ನಮ್ಮ ಅವಧಿಯಲ್ಲಿ ನಾವು ಪ್ರತೀ ಸಮ್ಮೇಳನದ ನಂತರ ಅದೇ ಸ್ಥಳದಲ್ಲಿ ಲೆಕ್ಕಪತ್ರ ಒಪ್ಪಿಸುವ ಶಿಸ್ತನ್ನು ರೂಢಿಸಿಕೊಂಡು ಬಂದಿದ್ದೇವೆ. ಸಮ್ಮೇಳನವನ್ನಷ್ಟೇ ಯಶಸ್ಸು ಮಾಡಿದರೆ ಸಾಲದು. ಅದರ ಜೊತೆಗೆ ಆರ್ಥಿಕ ಶಿಸ್ತು ಹಾಗೂ ಪಾರದರ್ಶಕತೆ ಕೂಡಾ ಸಂಘಟನೆಯ ಯಶಸ್ಸಾಗಿರುತ್ತದೆ. ಆ ನಿಟ್ಟಿನಲ್ಲಿ ಜಿಲ್ಲಾ ಕಸಾಪ ನಮ್ಮ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಪ್ರತಿಯೊಂದು ವ್ಯವಹಾರ ಪಾರದರ್ಶಕವಾಗಿದೆ ಎಂದರು.
ಶಿರಸಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ಎಲ್ಲರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಗೊಂಡಿದ್ದು ಅಭಿಮಾನದ ಸಂಗತಿ. ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಶಾಸಕರಾದ ಭೀಮಣ್ಣ ನಾಯ್ಕರಾದಿಯಾಗಿ ತಾಲೂಕಿನ ಪ್ರತಿಯೊಂದು ಜನ ಪ್ರತಿನಿಧಿಗಳು, ತಾಲೂಕು ಆಡಳಿತ, ನಗರಾಡಳಿತ, ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು, ಬರಹಗಾರರು, ಮಾಧ್ಯಮದವರು, ಶಿಕ್ಷಕರ ಸಂಘ, ನೌಕರರ ಸಂಘ, ಕಸಾಪ ತಾಲೂಕು, ಜಿಲ್ಲಾ ಪದಾಧಿಕಾರಿಗಳು ಕನ್ನಡ ಪರ ಸಂಘಟನೆ ಹಾಗೂ ಸ್ಥಳೀಯ ಎಲ್ಲ ಸಂಘ ಸಂಸ್ಥೆಯವರು ಕೂಡ ಸಮ್ಮೇಳನದ ಯಶಸ್ಸಿಗಾಗಿ ತೊಡಗಿಸಿಕೊಂಡಿದ್ದು ಪ್ರತಿಯೊಬ್ಬರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಶಾಸಕ ಭೀಮಣ್ಣ ನಾಯ್ಕರವರು ಧನ ಸಹಾಯ ನೀಡುವ ಜೊತೆಗೆ, ತಮ್ಮ ವಸತಿ ಗೃಹಗಳನ್ನು ನೀಡಿ ಸಹಕರಿಸಿದ್ದಾರೆ. ಸ್ಕ್ವಾಡ್ ವೇಸ್ ಮುಖ್ಯಸ್ಥ ಡಾ. ವೆಂಕಟೇಶ ನಾಯ್ಕ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದವರಿಗೆ ಬ್ಯಾಗುಗಳನ್ನು ನೀಡಿ ಸಹಕರಿಸಿದ್ದಾರೆ. ಶಿಕ್ಷಕರ ಕಾರ್ಯ ಮರೆಯಲಾಗದ್ದು. ಇಲ್ಲಿ ಪ್ರತಿಯೊಬ್ಬರ ಸಹಕಾರ ಸ್ಮರಣೀಯ ಎಂದರು.
ಕೇಂದ್ರ ಸಾಹಿತ್ಯ ಪರಿಷತ್ತಿನಿಂದ ಬಂದ ಅನುದಾನ ಹಾಗೂ ಸ್ಥಳೀಯವಾಗಿ ಸಂಗ್ರಹಿಸಿದ ದೇಣಿಗೆ ಸೇರಿ ಜಿಲ್ಲಾ ಸಾಹಿತ್ಯ ಸಮ್ಮೇಳಕ್ಕಾಗಿ ಒಟ್ಟು 10, 92,954 ರೂ. ಸಂಗ್ರಹಿಸಲಾಗಿದೆ. ಸಮ್ಮೇಳನದ ಒಟ್ಟು ಖರ್ಚು 12,35,884 ರೂ.ಗಳಾಗಿದೆ. 1,42,930 ರೂಪಾಯಿಗಳಷ್ಟು ಹೆಚ್ಚುವರಿ ಖರ್ಚು ನಮಗೆ ಬಂದಿರುತ್ತದೆ. ಹೆಚ್ಚುವರಿ ಬಂದಿರುವ ಖರ್ಚನ್ನು ಮುಂಬರುವ ಅನುದಾನದಲ್ಲಿ ಅಥವಾ ಪರಿಷತ್ತಿನಲ್ಲಿರುವ ಆರ್ಥಿಕ ವ್ಯವಸ್ಥೆಯಲ್ಲಿ ಸರಿದೂಗಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕರು ಸಮ್ಮೇಳನಕ್ಕೆ ದಾನಿಗಳು ಹಾಗೂ ಇಲಾಖೆಯವರು ನೀಡಿದ ಹಣಕಾಸಿನ ಮಾಹಿತಿಯನ್ನು ಹಾಗೂ ಖರ್ಚು ಮಾಡಿದ ಪ್ರತಿಯೊಂದು ವಿವರಗಳನ್ನು ಬಿಲ್ ಹಾಗೂ ಓಚರ್ ಸಹಿತ ಸಭೆಯ ಮುಂದೆ ಮಂಡಿಸಿದರು. ದಾನಿಗಳಿಂದ ಸಂಗ್ರಹಿಸಿದ ಪ್ರತಿಯೊಂದರ ಮಾಹಿತಿ ಹಾಗೂ ಮತ್ತು ವೋಚರಗಳನ್ನ ಯಾರು ಬೇಕಾದರೂ ಕೂಡ ಪರಿಶೀಲಿಸಬಹುದು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರು ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯತನವರು ಸಮ್ಮೇಳನಕ್ಕೆ ಹಣ ನೀಡಿರುವ ಮಾಹಿತಿ ಇತ್ತು ಎಂದು ಪ್ರಶ್ನೆ ಮಾಡಿದಾಗ ನಮಗೆ ಜಿಲ್ಲಾ ಪಂಚಾಯತ ಹಾಗೂ ಲೋಕೋಪಯೋಗಿಯಿಂದ ಯಾರೂ ದೇಣಿಗೆ ನೀಡಿಲ್ಲ. ರಶೀದಿ ಪುಸ್ತಕದಲ್ಲಿಯೂ ಅದು ದಾಖಲಾಗಿಲ್ಲ. ಅವರು ಯಾರ ಹತ್ತಿರ ಕೊಟ್ಟಿರುವರೋ ತಿಳಿಯದು. ಅದು ನಮ್ಮ ಖಾತೆಗೆ ತಲುಪಿರುವುದಿಲ್ಲ ಎಂದು ಬಿ.ಎನ್. ವಾಸರೆ ಸ್ಪಷ್ಟಪಡಿಸಿದರು.
ತಹಶೀಲ್ದಾರ ಕಾರ್ಯಾಲಯದ ಮಹಾಂತೇಶ ಗಾಣಿಗೇರ, ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಆನೆಹೊಸೂರ್, ಜಿಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿ ಡಾ. ವೆಂಕಟೇಶ ನಾಯ್ಕ, ಶಿರಸಿ ತಾಲೂಕು ಕಸಾಪ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ, ವಸಂತ ಕೋಣಸಾಲಿ ಮುಂಡಗೋಡ, ಪ್ರಮೋದ್ ನಾಯ್ಕ್, ಕುಮಟಾ, ಸುಬ್ರಹ್ಮಣ್ಯ ಭಟ್, ಯಲ್ಲಾಪುರ, ಕಸಾಪ ಶಿರಸಿ ಘಟಕದ ಗೌರವ ಕಾರ್ಯದರ್ಶಿಗಳಾದ ಶ್ರೀನಿವಾಸ್ ನಾಯ್ಕ್, ವಾಸುದೇವ್ ಶಾನಭಾಗ, ಪದಾಧಿಕಾರಿಗಳಾದ ಬಂಗಾರಪ್ಪ, ಶಿವಾನಂದ ಚಲವಾದಿ, ಪ್ರಮುಖರಾದ ರವಿ ಹೆಗಡೆ ಗಡಿಹಳ್ಳಿ, ಸುಭಾಷ್ ಕಾನಡೆ ಮುಂತಾದವರಿದ್ದರು.