ಸಿದ್ದಾಪುರ: ಅಡಕೆ ಎಲೆ ಚುಕ್ಕೆ ರೋಗದ ಕುರಿತು ಸರ್ಕಾರದ ಗಮನ ಸೆಳೆದ ಹಿನ್ನೆಲೆಯಲ್ಲಿ ಸಿ.ಪಿ.ಸಿ.ಆರ್.ಐ ಕಾಸರಗೋಡಿನ ವಿಜ್ಞಾನಿಗಳು ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ 10 ಹೆಕ್ಟೇರ್ ಪ್ರದೇಶದಲ್ಲಿ ಸಂಶೋಧನೆ ನಡೆಸಲಿದ್ದಾರೆ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ತಾಲೂಕಿನ ಬೇಡ್ಕಣಿಯ ಕೋಟೆ ಆಂಜನೇಯ ದೇವಾಲಯದ ಸಭಾಭವನದಲ್ಲಿ ಶನಿವಾರ ನಡೆದ ಶಿರಸಿಯ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಕಳೆದ ಮೂರು ವರ್ಷಗಳಿಂದ ಅಡಿಕೆಗೆ ಎಲೆ ಚುಕ್ಕೆ ರೋಗ ಉಲ್ಬಣಿಸಿದ್ದರಿಂದ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಗಮನ ಸೆಳೆದ ಹಿನ್ನೆಲೆಯಲ್ಲಿ ಶಿರಸಿ ತಾಲೂಕಿನ ಮುಂಡಿಗೆಸರ ಮತ್ತು ನೇರ್ಲವಳ್ಳಿ ಗ್ರಾಮಗಳ 5 ಹೆಕ್ಟೇರ್ ಪ್ರದೇಶವನ್ನು ಹಾಗೂ ಸಿದ್ದಾಪುರ ತಾಲೂಕಿನ ಹೀರೆಕೈ ಮತ್ತು ದಾನಮಾವು ಗ್ರಾಮಗಳ 5 ಹೆಕ್ಟೇರ್ ಪ್ರದೇಶವನ್ನು C.P.C.R.I ಕಾಸರಗೋಡ ವಿಜ್ಞಾನಿಗಳು ಆಯ್ಕೆ ಮಾಡಿಕೊಂಡು ಪ್ರಾತ್ಯಕ್ಷಿತವಾಗಿ ಸಂಶೋಧನೆ ನಡೆಸಲಿದ್ದಾರೆ ಎಂದ ಅವರು, ಕೃಷಿ ಮತ್ತು ತೋಟಗಾರಿಕೆ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ. ರೈತರು ಅಡಿಕೆಯೊಂದಕ್ಕೆ ಮಾತ್ರ ಅವಲಂಬಿತರಾಗದೇ ಉಪಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಸರ್ಕಾರ ಕೂಡ ಕೃಷಿ ಹಾಗೂ ತೋಟಗಾರಿಕೆಗೆ ಸಾಕಷ್ಟು ಆದ್ಯತೆ ನೀಡುತ್ತಿದೆ. ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ತ್ಯಾರ್ಸಿ, ಬೇಡ್ಕಣಿ ಹಾಗೂ ಬಿಳಗಿಯ ರೈತರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದ ಸಮಸ್ಯೆಗಳ ಅಧ್ಯಯನ ನಡೆಸಿರುವುದು ಶ್ಲಾಘನೀಯ ಎಂದರು.
ತೋಟಗಾರಿಕಾ ಕಾಲೇಜಿನ ಡೀನ್ ಡಾ.ಸಿ.ಎನ್. ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ, ಕೋಟೆ ಹನುಮಂತ ದೇವಾಲಯ ಟ್ರಸ್ಟ್ ಅಧ್ಯಕ್ಷ ವಿ.ಎನ್.ನಾಯ್ಕ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಬೇಡ್ಕಣಿ ಗ್ರಾಪಂ ಅಧ್ಯಕ್ಷ ಉಲ್ಲಾಸ್ ಗೌಡರ್, ಬಿಳಗಿ ಗ್ರಾಪಂ ಅಧ್ಯಕ್ಷ ರಾಜು ನಾಯ್ಕ, ಮನಮನೆ ಗ್ರಾಪಂ ಅಧ್ಯಕ್ಷ ನಾಗರಾಜ ಕುಂಬ್ಳೆ, ಬೇಡ್ಕಣಿ ಸೊಸೈಟಿ ಅಧ್ಯಕ್ಷ ಪ್ರಶಾಂತ ಕುಂಬ್ರಿಗದ್ದೆ, ತೋಟಗಾರಿಕೆ ಸಹಾಯಕ ನಿರ್ದೇಶಕ ಅರುಣ ಎಚ್.ಜಿ, ಸಹಾಯಕ ಕೃಷಿ ನಿರ್ದೇಶಕಿ ಸುಮಾ ಎಸ್.ಎಂ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆರಿಯಪ್ಪ ನಾಯ್ಕ, ರೈತ ಸಂಘದ ತಾಲೂಕಾ ಅಧ್ಯಕ್ಷೆ ರಾಧಾ ಸೀತಾರಾಮ ನಾಯ್ಕ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಉಪಸ್ಥಿತರಿದ್ದರು. ಕಾಲೇಜಿನ ಸಹ ಪ್ರಾಧ್ಯಾಪಕ ಲಕ್ಷ್ಮಣ ರೆಡ್ಡಿ ಸ್ವಾಗತಿಸಿದರು.