ಸಿದ್ದಾಪುರ: ಸುವರ್ಣ ಸಂಭ್ರಮದಲ್ಲಿನ ಉಡುಪಿ ಯಕ್ಷಗಾನ ಕಲಾ ರಂಗವು ಸುಮಾರು ಐವತ್ತೈದು ವರ್ಷಗಳ ಕಾಲ ಯಕ್ಷಗಾನ ಸೇವೆ ಸಲ್ಲಿಸಿದ ತಾಲೂಕಿನ ಬೊಗ್ರಿಮಕ್ಕಿಯ ನಾರಾಯಣ ಜಿ. ಹೆಗಡೆ ಅವರಿಗೆ ಯಕ್ಷಗಾನ ಕಲಾ ರಂಗ ಸುವರ್ಣ ಪುರಸ್ಕಾರ ಪ್ರದಾನ ಮಾಡಲಾಯಿತು.
ಉಡುಪಿಯಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಐವತ್ತು ಹಿರಿಯ ಕಲಾವಿದರನ್ನು ಆಯ್ಕೆ ಮಾಡಿ ತಲಾ ಐವತ್ತು ಸಾವಿರ ರೂ. ನಗದಿನೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿರಸಿ, ಸಾಲಿಗ್ರಾಮ ಮೇಳದ ವ್ಯವಸ್ಥಾಪಕರಾಗಿಯೂ ೧೬ ವರ್ಷಗಳಿಗೂ ಅಧಿಕ ಕಾಲ ಅನನ್ಯ ಸೇವೆ ಸಲ್ಲಿಸಿದ ಎನ್.ಜಿ.ಹೆಗಡೆ ಅವರು ಕೌರವ, ಮಾಗಧ, ಇಂದ್ರಜಿತು, ಅರ್ಜುನ ಸೇರಿದಂತೆ ಅನೇಕ ಪಾತ್ರಗಳನ್ನೂ ನಿರ್ವಹಿಸಿ ಜನ ಮಾನದಲ್ಲಿ ನೆಲೆಯೂರಿದವರು ಎಂಬುದು ಉಲ್ಲೇಖನೀಯ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಶಿವರಾಮ ತಲ್ಲೂರಾಯ ಪ್ರಶಸ್ತಿ ಪ್ರದಾನ ಮಾಡಿದರು. ಅಧ್ಯಕ್ಷ ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ ಇತರರು ಇದ್ದರು.