ಕಾನೂನು ದುರ್ಬಳಕೆ ಆಗದಿರಲಿ: ರವೀಂದ್ರ ನಾಯ್ಕ
ಶಿರಸಿ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಧೀಕೃತ ಹಾಗೂ ನಿಯಮಗಳನ್ನು ಉಲ್ಲಂಘಿಸಿ, ನಿರ್ಮಾಣವಾಗುತ್ತಿರುವ ವಸತಿ, ವಾಣಿಜ್ಯ ಇತರೆ ಕಟ್ಟಡಗಳ ಕಾಮಗಾರಿಗಳನ್ನು ನಿರ್ಬಂಧಿಸುವುದು ಹಾಗೂ ಸರ್ಕಾರ, ಸಾರ್ವಜನಿಕ ಸ್ವತ್ತಿನಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ಸುಪ್ರೀಂ ಕೊರ್ಟನ ನಿದೇರ್ಶನದ ಪ್ರಕಾರ ಗೌರವಯುಕ್ತ ಪ್ರಕ್ರಿಯೆಯಲ್ಲಿ ನೆಲ ಸಮಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಸಚಿವಾಲಯದ ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರು ಹಾಗೂ ಪದನಿಮಿತ್ತ ಉಪ ಕಾರ್ಯದಶಿಯಾದ ಡಾ.ಎನ್ ನೋವಾಶ್ ಕುಮರ್ ಮೇ.13 ರಂದು ಸರ್ಕಾರದ ಪರವಾಗಿ ಸುತ್ತೋಲೆ ಹೊರಡಿಸಿದ್ದಾರೆ ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹಾಗೂ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸುತ್ತಿರುವ ಕಟ್ಟಡಗಳನ್ನು ನಿರ್ಭಂಧಿಸಲು ಹಾಗೂ ಸಾರ್ವಜನಿಕ ಸ್ವತ್ತುಗಳಾದ ಸರ್ಕಾರ, ಸಾರ್ವಜನಿಕ ಸ್ವತ್ತಿನಲ್ಲಿ ಹಾಗೂ ಕೆರೆ, ಕುಂಟೆ, ಕಾಲುವೆ ಮತ್ತಿತರ ಸಾರ್ವಜನಿಕ ಹಿತಾಸಕ್ತಿಯುಳ್ಳ ಪ್ರದೇಶದಲ್ಲಿ ಕಟ್ಟಡಗಳು ನಿರ್ಮಾಣವಾಗಿದಿದ್ದರೆ ಅವುಗಳನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ಮಾರ್ಗಸೂಚಿಗಳನ್ವಯ ನೆಲ ಸಮಗೊಳಿಸಬೇಕೆಂದು ಈ ಮೂಲಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಸೂಚಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದು ಅವರು ಹೇಳಿದರು.
ನೆಲಸಮ ಮಾಡುವ ಪೂರ್ವದಲ್ಲಿ ಕಟ್ಟಡ ಪರವಾನಿಗೆ, ಅನುಮೋದಿತ ನಕ್ಷೇ ಉಲ್ಲಂಘನೆ, ಸ್ಥಳ ಪರಿಶೀಲನೆ, ನೋಟಿಸ್ ನೀಡುವುದು, ಅವಶ್ಯವಿದ್ದಲ್ಲಿ ನೆಲಸಮಗೊಳಿಸುವ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆ ಪೋಲಿಸರ ನೆರವು ಪಡೆಯುವುದು, ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಟ್ಟಡಗಳ ನಿರ್ಮಾಣದ ನಿಯಂತ್ರಣ ಮಾದರಿ ಉಪವಿಧಿ ಅನುಸರಿಸುವ, ಸರ್ಕಾರ ಮತ್ತು ಸಾರ್ವಜನಿಕ ಸ್ವತ್ತು ಎಂದು ನಿಗದಿಗೊಳಿಸುವ ಮುಂತಾದ 16 ಅಂಶಗಳನ್ನು ಮಾನದಂಡಗಳು ಸುತ್ತೋಲೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದು ಅವರು ತಿಳಿಸಿದರು.
ಕಾನೂನು ದುರ್ಬಳಕೆ ಆಗದಿರಲಿ:
ಸರ್ಕಾರ, ಸಾರ್ವಜನಿಕ ಸ್ವತ್ತಿನಲ್ಲಿ ಇರುವ ಕಟ್ಟಡಕ್ಕೆ ಸಂಬಂಧಿಸಿ ಹಾಗೂ ಅನಧೀಕೃತ ನಿಯಮ ಉಲ್ಲಂಘಿಸಿ ಕಟ್ಟಡ ಕಾಮಗಾರಿ ನಿರ್ಮಿಸಿತ್ತಿರುವ ಮತ್ತು ನಿರ್ಮಿಸಿರುವವರ ಮೇಲೆ ಕ್ರಮ ಜರುಗಿಸುವಾಗ ಕಾನೂನು ದುರ್ಬಳಕೆ ಮತ್ತು ಭ್ರಷ್ಟಾಚಾರವಾಗದಿರಲಿ ಎಂದು ರವೀಂದ್ರ ನಾಯ್ಕ ತಿಳಿಸಿದರು.