ಶಿರಸಿ : ಹೆಗ್ಗರಣಿ ಹೊಸ್ತೋಟ (ಕಡೇಮನೆ) ದಲ್ಲಿ ಕುಟುಂಬದ ಕುಡಿ ಚಿ. ಶ್ರೇಯಸ್ನಿಗೆ ನೀಡಲಾದ ಬ್ರಹ್ಮೋಪದೇಶ ಕುರಿತಾಗಿ ಏರ್ಪಡಿಸಲಾಗಿದ್ದ ಯಕ್ಷಗಾನ ಹಿಮ್ಮೇಳ ವೈಭವ ಯಕ್ಷ ಕಲಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಕಡೆಮನೆಯ ಮಹೇಶ ಭಟ್ ಹಾಗೂ ಅಮೃತಾ ದಂಪತಿಗಳ ಪುತ್ರ ಶ್ರೇಯಸ್ ನಿಗೆ ಧಾರ್ಮಿಕ ವಿಧಿ ವಿಧಾನದಂತೆ ಬ್ರಹ್ಮೋಪದೇಶ ನೀಡಲಾಯಿತು. ಆ ಪ್ರಯುಕ್ತ ಮನೆಯಂಗಳದಲ್ಲಿ ಸಂಘಟಿಸಲಾಗಿದ್ದ ಖ್ಯಾತ ಮೂವರು ಖ್ಯಾತ ನಾಮ ಭಾಗವತಿಕೆ ಎರಡು ಮದ್ದಲೆ ವಾದನ ಹಾಗೂ ಚಂಡೆವಾದನಗಳು ಸೇರಿ ಯಕ್ಷಲೋಕವನ್ನೇ ಸೃಷ್ಟಿಸಿತು.
ಮೂವರು ಭಾಗವತರು ಸೇರಿ ಪೌರಾಣಿಕ ಪ್ರಸಂಗದ ಹಾಡುಗಳನ್ನು ಪ್ರಸ್ತುತಗೊಳಿಸಿದ್ದು ವಿಶೇಷತೆ. ಭಾಗವತಿಕೆಯಲ್ಲಿ ಹಿಲ್ಲೂರು ರಾಮಕೃಷ್ಣ ಹೆಗಡೆ, ಗಜಾನನ ಭಟ್ಟ ತುಳಗೇರಿ ಹಾಗೂ ಬಹುಮುಖ ಕಲಾವಿದ ರವಿ ಮೂರೂರು ಪಾಲ್ಗೊಂಡರು. ಗಾನವೈವಿಧ್ಯದ ಹಂತದಂತೆ ಆರಂಭಿಕವಾಗಿ ಮೂವರೂ ಭಾಗವತರು ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಳಿಸಿದರು. ನಂತರ ಪೀಠಿಕೆ ಪದ್ಯ, ಸಂಭಾಷಣೆ ಪದ್ಯ, ಶೃಂಗಾರ ರಸದ ಪದ್ಯಗಳನ್ನು ವೈಯಕ್ತಿಕವಾಗಿ ಹಾಡಿ ಕಲಾಭಿಮಾನಿಗಳ ಕರತಾಡನಕ್ಕೆ ಮೆರಗು ತಂದರು. ತದನಂತರದಲ್ಲಿ ಹಾಸ್ಯ ರಸದವಾಗಿ ಭಾಗವತರುಗಳು ದ್ವಂದ್ವವಾಗಿ ಹಾಡುತ್ತ ಹಾಸ್ಯ ಲೋಕಕ್ಕೆ ಕರೆದೊಯ್ದರು. ನಂತರ ವೀರರಸದ ಪದ್ಯಗಳನ್ನು ಹಾಡುತ್ತ ಕೆಲವೊಂದು ಪ್ರೇಕ್ಷಕರ ಅಪೇಕ್ಷೆಯ ಜನಪ್ರಿಯ ಹಾಡುಗಳನ್ನೂ ಹಾಡಿ ಗಾನವೈಭವಕ್ಕೆ ಮೆರುಗು ತಂದರು. ಕೊನೆಯಲ್ಲಿ ಮಂಗಲ ಪದ್ಯದೊಂದಿಗೆ ಒಟ್ಟಾರೆ ಗಾನವೈಭವವನ್ನು ಸಮಾಪ್ತಿಗೊಳಿಸಿದರು. ಪ್ರತಿಯೊಂದು ಹಾಡಿಗೆ ಹಾಗೂ ದ್ವಂದ್ವ ಗಾಯನದಲ್ಲಿ ಮದ್ದಲೆ ವಾದನದಲ್ಲಿ ನಾದಶಂಕರ ಹಿರಿಯ ಮದ್ದಲೆ ವಾದಕ ಶಂಕರ ಭಾಗವತ ಯಲ್ಲಾಪುರ ಹಾಗೂ ಯುವ ಮದ್ದಲೆ ವಾದಕ ಅನಿರುದ್ಧ ವರ್ಗಾಸರ ಮತ್ತು ಚಂಡೆಯಲ್ಲಿ ಗಣೇಶ ಗಾಂವ್ಕರ್ ಹಳವಳ್ಳಿ ವೈವಿಧ್ಯಮಯವಾಗಿ ವಾದನಗಳನ್ನು ನುಡಿಸುತ್ತ ಯಕ್ಷ ರಸದೂಟ ಬಡಿಸಿದರು. ಮಹಿಳಾ ಯುವ ಭಾಗವತಿಕೆಯ ಅಭಿಜ್ಞಾ ಗಾನವೈಭವದಲ್ಲಿ ಪಾಲ್ಗೊಂಡು ಹಾಡಿದಳು.
ಕಡೇಮನೆಯ ಪ್ರತಿಭಾನ್ವಿತ ಕುವರಿಯರಾದ ತೇಜಸ್ವಿನಿ ಹಾಗೂ ಕವನಾ ಭಟ್ಟರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಹಿಮ್ಮೇಳ ವೈಭವವನ್ನು ಕುಟುಂಬದ ಹಿರಿಯ ರಮೇಶ ವಿ. ಭಟ್ಟ ಸ್ವಾಗತಿಸಿದರು. ರಮ್ಯಾ ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಮಹೇಶ ಭಟ್ಟ ಕಡೆಮನೆ ಕಲಾವಿದರನ್ನು ಗೌರವಿಸಿ ವಂದಿಸಿದರು.