ಶಿರಸಿ: ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಬಲಪಡಿಸುವತ್ತ ಗಮನಹರಿಸಬೇಕು. ಪ್ರತಿಯೊಬ್ಬ ನಾಗರಿಕ ತನ್ನ ದುಡಿಮೆಯ ಸ್ವಲ್ಪ ಭಾಗವನ್ನಾದರೂ ಸಮಾಜ ಸೇವೆಗೆ ವಿನಿಯೋಗಿಸಿದರೆ ಶಾಲೆ ಸಮಾಜ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂದು ಸಂಕಲ್ಪ ಟ್ರಸ್ಟ್ ಅಧ್ಯಕ್ಷರಾದ ಕುಮಾರ್ ಪಟಗಾರ ಅಭಿಪ್ರಾಯಪಟ್ಟರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಡನಕೇರಿಯಲ್ಲಿನಡೆದ 76 ನೇ ಗಣರಾಜ್ಯೋತ್ಸವದ ಧ್ವಜಾರೋಹಣದಲ್ಲಿ ಭಾಗವಹಿಸಿ ನಂತರ ನಡೆದ ಸಾಂಸ್ಕೃತಿಕ ಸಂಭ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದರು. ಮುಂಜಾನೆ ಧ್ವಜಾರೋಹಣ ನೆರವೇರಿಸಿದ ಹಾಗೂ ಸಾಂಸ್ಕೃತಿಕ ಸಂಭ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷರಾದ ಅಣ್ಣಪ್ಪ ನಾಯ್ಕ ಶಾಲೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ಎಂದರು.
ವೇದಿಕೆಯಲ್ಲಿ ದಾನಿಗಳಾದ ಶಿವಾನಂದ ಭಟ್, ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗಣಪತಿ ದ್ಯಾವ ನಾಯ್ಕ, ಕಾರ್ಯದರ್ಶಿ ಮಧುಕೇಶ್ವರ್ ಮಡಿವಾಳ, ಹಲಗದ್ದೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಂತಲಾ ಚನ್ನಯ್ಯ, ಉಪಾಧ್ಯಕ್ಷೆ ರೇಣುಕಾ ತಳವಾರ್, ಮಾಡನಕೇರಿ ಗ್ರಾಮ ಪಂಚಾಯತ್ ಸದಸ್ಯರಾದ ಸದಾನಂದ ನಾಯ್ಕ, ಸಂಕಲ್ಪ ಟ್ರಸ್ಟ್ ನ ಕಾರ್ಯದರ್ಶಿ ಅಕ್ಷಯ್ ಅಂಬಿಗೇರ್, ಎಸ್ಡಿಎಂಸಿ ಉಪಾಧ್ಯಕ್ಷೆ ರೇಖಾ ಶಿವಕುಮಾರ್ ಗೌಡರ್, ಪಂಚಾಯತ್ ಕಾರ್ಯದರ್ಶಿ ವೀರಪ್ಪ ಚೆನ್ನಯ್ಯ, ಮುಖ್ಯಾಧ್ಯಾಪಕಿ ಎಚ್ಪಿ ಗೀತಾ ಹಾಗೂ ಹಿರಿಯ ಶಿಕ್ಷಕರಾದ ಎನ್.ಎಸ್. ಭಾಗ್ವತ್ ಉಪಸ್ಥಿತರಿದ್ದರು.
ಶಾಲೆಗೆ ಬಣ್ಣಕ್ಕಾಗಿ ರೂ. 25,000 ಧನ ಸಹಾಯ ಮಾಡಿದ ಸಂಕಲ್ಪ ಟ್ರಸ್ಟ್ ನ ಅಧ್ಯಕ್ಷರಾದ ಕುಮಾರ ಪಟಗಾರ ಹಾಗೂ ಕಾರ್ಯದರ್ಶಿ ಅಕ್ಷಯ್ ಅಂಬಿಗೇರ್ ಅವರನ್ನು ಸನ್ಮಾನಿಸಲಾಯಿತು. ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟದಲ್ಲಿ ಸಾಧನೆ ಮಾಡುತ್ತಿರುವ ಪೂರ್ವ ವಿದ್ಯಾರ್ಥಿಗಳಾದ ದರ್ಶನ್ ನಾಯ್ಕ, ಶರತ್ ನಾಯ್ಕ, ಸಂಕೇತ್ ನಾಯ್ಕ, ಬಾಲಚಂದ್ರ ನಾಯ್ಕ ಹಾಗೂ ಅರವಿಂದ್ರ ನಾಯ್ಕ ಅವರನ್ನು ಎಸ್ಡಿಎಮ್ಸಿ ವತಿಯಿಂದ ಗೌರವಿಸಲಾಯಿತು.ಪೂರ್ವ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳನ್ನು ಸನ್ಮಾನಿಸುವ ಮೂಲಕ ಗುರುವಂದನೆ ಸಲ್ಲಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿವಿಧ ಹಂತದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕುಮಾರಿ ಭವ್ಯ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕರಾದ ಎನ್.ಎಸ್. ಭಾಗ್ವತ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದರ್ಶನ್ ಶೆಟ್ಟಿ ನಿರ್ವಹಿಸಿ ವಂದಿಸಿದರು. ಸೀತಾ ಕೊಡಿಯಾ ಸಹಕರಿಸಿದರು.
ಶಾಲಾ ವಿದ್ಯಾರ್ಥಿಗಳಿಂದ ಡೊಳ್ಳು ಕುಣಿತ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಾಡನಕೇರಿ ಹಾಗೂ ಮೆಣಸಿನಕಟ್ಟಾ ಅಂಗನವಾಡಿಯ ಮಕ್ಕಳು ಹಾಗೂ ಪೂರ್ವ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದು ವಿಶೇಷವಾಗಿತ್ತು. 400 ಕಿಂತಲೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ದಾನಿಗಳ ಸಹಕಾರದಿಂದ ಎಸ್ಡಿಎಂಸಿಯವರು ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಿದ್ದರು. ಅತ್ಯಂತ ವಿಜ್ರಂಭಣೆಯಿಂದ ನಡೆದ ಗಣರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ಸಂಭ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.