Slide
Slide
Slide
previous arrow
next arrow

ದೇವರ ಪ್ರಾರ್ಥನೆಯಿಂದ ಮನಸ್ಸಿನ ಸ್ಥಿರತೆ ಸಾಧ್ಯ; ಸ್ವರ್ಣವಲ್ಲೀ ಶ್ರೀ

300x250 AD

ಭಗವಂತನ ಕೃಪೆಗೆ ದೀರ್ಘ ಕಾಲ್ ಪ್ರಾರ್ಥನೆ ಅಗತ್ಯ | ಚಾತುರ್ಮಾಸ್ಯ ನಿಮಿತ್ತ ಭಕ್ತಾದಿಗಳ ವಿಶೇಷ ಸೇವೆ |

ಶಿರಸಿ: ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವುದು ಬಹಳ ಮುಖ್ಯವಾದದ್ದು. ಇದರಿಂದ ಮನಸ್ಸಿನ ಸ್ಥಿರತೆ ಸಾಧ್ಯವಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶಿಷ್ಯರನ್ನು ಕುರಿತು ನುಡಿದರು. ಶ್ರೀಮಠದಲ್ಲಿ ತಮ್ಮ 34 ನೇ ಹಾಗೂ ಕಿರಿಯ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳವರ ಪ್ರಥಮ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀ ಮಠದ ಶಿಷ್ಯರಾದ ಶಿರಸಿ ಸೀಮೆಯ ತೆರಕನಹಳ್ಳಿ ಹಾಗೂ ತುಂಡುಗ್ರಾಮ ಭಾಗಿಯ ಸಮಸ್ತ ಶಿಷ್ಯ ಭಕ್ತರು ಶ್ರದ್ಧಾ ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿ, ಉಭಯ ಶ್ರೀಗಳವರ ಆಶೀರ್ವಾದವನ್ನು ಪಡೆದರು.
ಪ್ರಾರ್ಥನೆಯನ್ನು ದೀರ್ಘಕಾಲದವರೆಗೆ ಮಾಡಬೇಕು. ಭಗವಂತನು ನಾವು ಕೇಳಿದ್ದನ್ನು ಕೊಡಲು ದೀರ್ಘ ಕಾಲದ ಪ್ರಾರ್ಥನೆ ಅಗತ್ಯ. ಹಿರಿಯರು ಹೇಳಿದ ಹಾಗೆ ಕಾಲ ಬರಬೇಕು ಎನ್ನುವ ಹಾಗೆ ಎಲ್ಲದಕ್ಕೂ ಕಾಲ ಬರಬೇಕು. ದೇವರಲ್ಲಿ ಪ್ರಾರ್ಥನೆಯೂ ಕೂಡ ಹಾಗೆ. ದೇವರಿಗೆ ಭಕ್ತನ ಪ್ರಾರ್ಥನೆಯನ್ನು ಈಡೇರಿಸಬೇಕು ಎಂಬ ಮನಸ್ಸು ಬರಬೇಕು ಎಂದು ಪ್ರಾರ್ಥನೆಯ ಮಹತ್ವದ ಕುರಿತು ತಿಳಿಸಿದರು.
ದೀರ್ಘ ಕಾಲದ ಪ್ರಾರ್ಥನೆಯನ್ನು ಯಾಕೆ ಮಾಡಬೇಕು ಎಂದು ವಿವರಿಸಿದ ಶ್ರೀಗಳು, ಅನೇಕ ದಿವಸಗಳ ಕಾಲ ಪ್ರಾರ್ಥನೆಯನ್ನು ಮಾಡಬೇಕು. ಪ್ರಾರ್ಥನೆಯ ಮರ್ಮವನ್ನು ನಾವು ಅರಿತುಕೊಂಡರೆ ಪ್ರಾರ್ಥನೆಯನ್ನು ಯಾಕೆ ಮಾಡಬೇಕು ಎಂಬುದು ತಿಳಿಯುತ್ತದೆ ಎಂದರು.
ನಮ್ಮ ಮನಸ್ಸನ್ನು ಸ್ಥಿರಗೊಳಿಸುವುದಕ್ಕೋಸ್ಕರ. ಮನಸ್ಸನ್ನು ಸ್ಥಿರವಾಗಿ ಇಟ್ಟು ಕೊಳ್ಳದೇ ಪ್ರಾರ್ಥನೆಯನ್ನು ಮಾಡಿದರೆ ಆ ಪ್ರಾರ್ಥನೆ ಫಲಿಸುವುದಿಲ್ಲ. ನಮ್ಮ ಮನಸ್ಸು ದೇವರಲ್ಲಿ ಸ್ಥಿರವಾಗಿರದೇ ಬೇರೆಲ್ಲೋ ಇರುತ್ತದೆ. ಕೆಲವೊಮ್ಮೆ ದೇವರಲ್ಲಿ ಸಂಶಯದ ಭಾವಗಳು ಬರುತ್ತಿರುತ್ತವೆ. ಈ ರೀತಿಯಾದ ಪ್ರಾರ್ಥನೆಯನ್ನು ದೇವರು ಸ್ವೀಕರಿಸುವುದಿಲ್ಲ.
ಭಗವಂತನ ಸಾಮ್ರಾಜ್ಯದಲ್ಲಿ ವಿಶಿಷ್ಟವಾದ ಒಂದು ನಿಯಮವಿದೆ. ಯಾವನು ಮನಸ್ಸು ಕೊಟ್ಟು ಮಾಡುತ್ತಾನೋ ಅವನ ಪ್ರಾರ್ಥನೆ ಬೇಗ ಹೋಗಿ ತಲುಪುತ್ತದೆ. ಮನಸ್ಸನ್ನು ಸ್ವಲ್ಪ ಕಡಿಮೆ ಕೊಟ್ಟರೆ ಸ್ವಲ್ಪ ತಡವಾಗಿ ತಲುಪುತ್ತದೆ. ಮನಸ್ಸನ್ನು ಕೊಡದೇ ಇದ್ದರೆ ತಲುಪುವುದೇ ಇಲ್ಲ. ಭಕ್ತಿ – ಶ್ರದ್ಧೆ ಬರಬೇಕು ಹಾಗೂ ನಿಶ್ಚಲತೆ ಬರಬೇಕು ಎಂದರೆ ದೀರ್ಘ ಕಾಲದ ಪ್ರಾರ್ಥನೆ ಅಗತ್ಯ. ಈ ರೀತಿಯಾಗಿ ದೀರ್ಘಕಾಲದವರೆಗೆ ಪರ್ಥನೆಯನ್ನು ಮಾಡಿದರೆ ಮುಂದೆ – ಮುಂದೆ ಹೋದ ಹಾಗೆ ದೇವರಲ್ಲಿ ಇನ್ನಷ್ಟು ಭಕ್ತಿ – ಶ್ರದ್ಧೆ ಬೆಳೆದು ಭಕ್ತನಲ್ಲಿ ವ್ಯಾಕುಲತೆ ಎಂಬ ಭಾವ ಬರುತ್ತದೆ. ದೇವರನ್ನು ನೆನೆದಾಗ ಭಕ್ತನ ಕಣ್ಣಿನಲ್ಲಿ ಸಹಜವಾಗಿ ನೀರು ಬರುತ್ತದೆ, ಸಹಜವಾಗಿ ಗಂಟಲು ಕಟ್ಟಿ ಬರುತ್ತದೆ. ಕೃತವಾಗಿ ಬರುವುದು ಅಲ್ಲ. ಇವು ವ್ಯಾಕುಲತೆಯ ಲಕ್ಷಣಗಳು. ಭಕ್ತಿಯ ಪರಿಪಕ್ವ ಸ್ಥಿತಿಯಾದ ವ್ಯಾಕುಲತೆಯಿಂದ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿದಾಗ ಖಂಡಿತ ನೆರವೇರುತ್ತದೆ ಎಂದು ಬಹಳ ಗಟ್ಟಿಯಾಗಿ ಹೇಳಿದರು.
ನಮ್ಮದೇ ಆದ ಪ್ರಾರಬ್ಧ ಕರ್ಮಗಳು ಹೀಗೆ ಇನ್ನೂ ಅನೇಕ ಅಡೆತಡೆಗಳು ಇವೆ. ಇವುಗಳನ್ನು ದಾಟಲು ದೀರ್ಘಕಾಲದ ಪ್ರಾರ್ಥನೆ ಅಗತ್ಯ. ಸರಿಯಾದ ಪ್ರಾರ್ಥನೆಯನ್ನು ದೇವರಲ್ಲಿ ಸಲ್ಲಿಸಬೇಕು. ಧರ್ಮಕ್ಕೆ ವಿರುದ್ಧವಾದ, ಅಗ್ರಹದಿಂದ ಕೂಡಿದ್ದು, ಕಾಮ – ಕ್ರೋಧ – ಲೋಭ – ಮೋಹ – ಮದ – ಮಾತ್ಸರ್ಯ ಎಂಬ ಅರಿಷಡ್ವೈರಿಗಳಿಂದ ಕೂಡಿದ್ದು ಇಂತಹ ಪ್ರಾರ್ಥನೆಯನ್ನು ದೇವರಲ್ಲಿ ಸಲ್ಲಿಸಿದರೆ ಅದು ಭಗವಂತನ ಕಡೆಯಿಂದ ನೆರವೇರುವುದಿಲ್ಲ ಎಂದರು.
ಸೀಮೆಯ ಮಾತೆಯರು ಮತ್ತು ಮಹನೀಯರು ಶ್ರೀಮಠಕ್ಕೆ ಆಗಮಿಸಿ ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿದರು. ಬೆಳಿಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆಯನ್ನು ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನವನ್ನು ಕೈಗೊಂಡರು. ಈ ಸಂದರ್ಭದಲ್ಲಿ ಸೀಮೆಯ ಪ್ರಮುಖರು ಗಣಪತಿ ಹೆಗಡೆ ಹೊಸಬಾಳೆ, ಗೋಪಾಲಕೃಷ್ಣ ಹೆಗಡೆ ಮೆಣಸಿಕೇರಿ ಇದ್ದರು. ಆರ್. ಎಸ್ ಹೆಗಡೆ ಭೈರುಂಬೆ ನಿರ್ವಹಿಸಿದರು.

300x250 AD

ಅತ್ಯಂತ ಶ್ರದ್ಧೆಯಿಂದ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿದರೆ ಮನಸ್ಸಿನ ಭಾರ ಕಮ್ಮಿ ಆಗುತ್ತದೆ. ಮನಸ್ಸು ನಿರಾಳವಾಗುತ್ತದೆ.
-ಸ್ವರ್ಣವಲ್ಲೀ ಶ್ರೀ

Share This
300x250 AD
300x250 AD
300x250 AD
Back to top