Slide
Slide
Slide
previous arrow
next arrow

ಅಕ್ರಮವಾಗಿ ಬಂಧಿಸಿಟ್ಟ 22 ಜಾನುವಾರುಗಳ ರಕ್ಷಣೆ

300x250 AD

ದಾಂಡೇಲಿ: ಅಕ್ರಮವಾಗಿ ಕಟ್ಟಿಟ್ಟಿದ್ದ 22 ಜಾನುವಾರುಗಳನ್ನು ಹಿಂದೂಪರ ಸಂಘಟನೆಗಳ ಆಗ್ರಹ ಹಾಗೂ ಪೋಲಿಸರ ಸಹಕಾರದಿಂದ ರಕ್ಷಣೆ ಮಾಡಿದ ಘಟನೆ ನಗರದ 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಹತ್ತಿರ ಭಾನುವಾರ ರಾತ್ರಿ ನಡೆದಿದೆ.

ಬಕ್ರೀದ್ ಹಬ್ಬದ ನಿಮಿತ್ತ ಕುರ್ಬಾನಿಗಾಗಿ ಎಂದು ಅನುಮಾನಿಸಿ ಅನಧಿಕೃತವಾಗಿ ಗೋವುಗಳನ್ನು ಹಾಗೂ ಸಣ್ಣ ಕರುಗಳನ್ನು 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಹತ್ತಿರ ಖಾಲಿ ಜಾಗದಲ್ಲಿ ಕಟ್ಟಿ ಇಟ್ಟಿರಬಹುದೆಂದು ಹಿಂದೂಪರ ಸಂಘಟನೆಯವರು ಪೋಲಿಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೋಲಿಸರು ಸ್ಥಳಕ್ಕೆ ಭೇಟಿ‌ ನೀಡಿ ಅಕ್ರಮ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮವನ್ನು ಕೈಗೊಂಡಿದ್ದಾರೆ.

ಆರಂಭದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗೋವುಗಳ ರಕ್ಷಣೆಗೆ ಆಗ್ರಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಅಕ್ರಮವಾಗಿ ಕಟ್ಟಿಟ್ಟಿದ್ದ ಜಾನುವಾರುಗಳನ್ನು ನಮಗೊಮ್ಮೆ ನೋಡಲು ಬಿಡಿ ಎಂದು ಪೊಲೀಸರಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಿ.ಪಿ.ಐ ಭೀಮಣ್ಣ ಎಂ.ಸೂರಿ ಅವರು ಇಲ್ಲಿ ಅಕ್ರಮವಾಗಿ ಕಟ್ಟಿರುವ ಜಾನುವಾರುಗಳನ್ನು ವಧೆ ಮಾಡಲು ಅವಕಾಶವಿಲ್ಲ. ಪಶು ವೈದ್ಯರನ್ನು ಕರೆಸಿ ಎಲ್ಲಾ ಜಾನುವಾರುಗಳನ್ನು ಪರಿಶೀಲಿಸಿ, ಅವರಿಂದ ವರದಿಯನ್ನು ಪಡೆದುಕೊಳ್ಳಲಾಗುವುದು. ಎಲ್ಲ ಜಾನುವಾರುಗಳ ಬಗ್ಗೆ ಅಗತ್ಯ ದಾಖಲಾತಿಗಳನ್ನು ಪಡೆದುಕೊಂಡು ಅವುಗಳ ರಕ್ಷಣೆಗೆ ಅಗತ್ಯ ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು. ಆನಂತರ ಪಶು ವೈದ್ಯರು ಸ್ಥಳಕ್ಕೆ ಬಂದು ಜಾನುವಾರುಗಳ ವಯಸ್ಸು, ಆರೋಗ್ಯದ ಸ್ಥಿತಿಯನ್ನು ಪರಿಶೀಲಿಸಿದರು.

ಅಕ್ರಮವಾಗಿ ಕಟ್ಟಿಟ್ಟಿದ್ದ 22 ಜಾನುವಾರುಗಳ ಪೈಕಿ ಒಟ್ಟು 5 ಕರುಗಳನ್ನು ಹಳಿಯಾಳ ತಾಲೂಕಿನ ದುಸಗಿಯ ಗೋಶಾಲೆಗೆ ರವಾನಿಸಲಾಯಿತು. ಉಳಿದ ಒಂದು ಕೋಣ ಸೇರಿ 17 ಜಾನುವಾರಗಳ ಬಗ್ಗೆ 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಹತ್ತಿರದ ನಿವಾಸಿಗಳಾದ ಮಹ್ಮದ್ ಗೌಸ ಉಮರ ಕೊಟ್ಟಾನ್ ಹಾಗೂ ಉಮರ ಮಹ್ಮದ್ ಅಕ್ಬರ‌ ಕೊಟ್ಟಾನ್ ಅವರಿಗೆ ಅಧಿಕೃತ ದಾಖಲೆಗಳನ್ನು ಹಾಜರು ಪಡಿಸಬೇಕೆಂದು ನೋಟಿಸ್‌ ನೀಡಲಾಗಿದೆ.

17 ಜಾನುವಾರುಗಳನ್ನು ಯಾವುದೇ ಕಾರಣಕ್ಕೂ ವಧೆ ಮಾಡದೆ ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ನೀಡಿ, ಪೊಲೀಸರ ಸಮಕ್ಷಮದಲ್ಲೇ ಅದರ ಜೀವಕ್ಕೆ ಹಾನಿಯಾಗದ ರೀತಿಯಲ್ಲಿ ರೈತರಿಗೆ ಮಾರಾಟ ಮಾಡುವುದು ಇಲ್ಲವೇ ಗೋಶಾಲೆಗೆ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಪಿಐ ಭೀಮಣ್ಣ ಎಂ. ಸೂರಿ ಅವರು ಮಾಧ್ಯಮಕ್ಕೆ‌ ಮಾಹಿತಿಯನ್ನು ನೀಡಿದ್ದಾರೆ.

ಇದಕ್ಕೂ‌ಮುನ್ನ ಕೆಲ ಗಂಟೆಗಳ‌ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೋಲಿಸರು ಬಿಗಿ ಬಂದೊಬಸ್ತ್ ಮಾಡಿದ್ದರು. ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಪೋಲಿಸರ ನಡುವೆ ಮಾತಿನ ಚಕಮಕಿ‌ ನಡೆಯಿತು. ಪೊಲೀಸರೊಂದಿಗೆ ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷರಾದ ವಾಸುದೇವ ಪ್ರಭು, ಮುಖಂಡರಾದ ರೋಶನ್ ನೇತ್ರಾವಳಿ, ಗುರು ಮಠಪತಿ, ಬುದ್ಧಿವಂತ ಗೌಡ ಪಾಟೀಲ್ ಅವರು ಯಾವುದೇ ಕಾರಣಕ್ಕೂ ಜಾನುವಾರುಗಳನ್ನು ವಧೆ ಮಾಡುವಂತಿಲ್ಲ. ಅವುಗಳ ಜೀವದ ರಕ್ಷಣೆಗೆ ಅಗತ್ಯ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

300x250 AD

ನಂತರ ಮಾಧ್ಯಮದ ಜೊತೆ ಮಾತನಾಡಿದ ಹಿಂದೂ ಸಮಾಜದ ಮುಖಂಡರಾದ ರೋಶನ್ ನೇತ್ರಾವಳಿ ಅವರು 05 ಕರು ಹಾಗೂ 17 ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಇದಕ್ಕೆ ಪೊಲೀಸರು ನೇರ ಕಾರಣರಾಗುತ್ತಾರೆ. ಇವುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಸಂಪೂರ್ಣ ಜವಾಬ್ದಾರಿ ಪೋಲಿಸ್ ಇಲಾಖೆಯದಾಗಿದ್ದು, ಗೋಶಾಲೆಗೆ ಕಳುಹಿಸಿ ಉಳಿದಿರುವ 17 ಜಾನುವಾರುಗಳ ಬಗ್ಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಚಿತ್ರ ಸಹಿತ ಸೂಕ್ತ ದಾಖಲಾತಿಗಳೊಂದಿಗೆ, ಯಾರಿಗೆ ಮತ್ತು ಎಲ್ಲಿಗೆ ನೀಡಲಾಯಿತು ಎನ್ನುವುದರ ಬಗ್ಗೆಯೂ ಸೂಕ್ತ ದಾಖಲಾತಿಯೊಂದಿಗೆ ಮಾಹಿತಿಯನ್ನು ನೀಡಬೇಕು. ಒಂದು ವೇಳೆ ಇವುಗಳ ರಕ್ಷಣೆಗೆ ಅಗತ್ಯ ಕ್ರಮವನ್ನು ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

ಇಷ್ಟಾದರೂ ಯಾವುದೇ ರೀತಿಯ ಶಾಂತಿ ಕದಡದೆ ಪರಸ್ಪರ ಸಮನ್ವಯತೆಯಿಂದ ಸಮಸ್ಯೆಯೊಂದು ತಕ್ಕ‌ಮಟ್ಟಿಗೆ ಬಗೆಹರಿದಂತಾಗಿದೆ. ಮುಖಂಡರಾದ ಇಕ್ಬಾಲ್ ಶೇಖ ಅವರ ನೇತೃತ್ವದಲ್ಲಿ ಅಷ್ಪಾಕ್ ಶೇಖ, ರಫೀಕ್ ಹುದ್ದಾರ್, ಉಸ್ಮಾನ್ ಮುನ್ನ ವಹಾಬ್, ದಾದಾಪೀರ್‌ ನದೀಮುಲ್ಲಾ ಮೊದಲಾದವರ ಸಮ್ಮುಖದಲ್ಲಿ ಮುಸ್ಲಿಂ ಧರ್ಮ ಬಾಂಧವರು ಪೊಲೀಸರ ಸೂಚನೆಗೆ ಗೌರವವನ್ನು ನೀಡಿ, ಪೊಲೀಸರ ಸೂಚನೆಯನ್ನು ಪಾಲಿಸಿದರು.

ಸ್ಥಳದಲ್ಲಿ ದಾಂಡೇಲಿ ಸಿಪಿಐ ಭೀಮಣ್ಣ.ಎಂ.ಸೂರಿ, ಹಳಿಯಾಳ‌ ಸಿಪಿಐ ಜಯಪಾಲ್ ಪಾಟೀಲ್, ಪಿಎಸ್ಐಗಳಾದ ಐ.ಆರ್.ಗಡ್ಡೆಕರ, ಕೃಷ್ಣ ಅರಕೇರಿ, ಜಗದೀಶ, ರವೀಂದ್ರ ಬಿರದಾರ್, ಅಮೀನ್ ಅತ್ತಾರ್, ರಾಜಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸ್ಥಳಕ್ಕೆ ಪ್ರಭಾರಿ ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ ಅವರು ಭೇಟಿ ನೀಡಿದರು.

ಉಳಿದ 17 ಜಾನುವಾರುಗಳ ಜೀವದ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಸಂಪೂರ್ಣ ಜವಾಬ್ದಾರಿ ಪೊಲೀಸ್ ಇಲಾಖೆಯದ್ದಾಗಿದ್ದು, ಇದರಲ್ಲಿ ವಿಫಲವಾದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕರಾದ ಸುನಿಲ್ ಹೆಗಡೆ ಅವರು ಪೊಲೀಸರಿಗೆ ಎಚ್ಚರಿಕೆಯನ್ನು ನೀಡಿದರು.

Share This
300x250 AD
300x250 AD
300x250 AD
Back to top