Slide
Slide
Slide
previous arrow
next arrow

ಪರಿಸರ ಪಾಠ ಆಲಿಸಿದ ಸಚಿವ ಸತೀಶ ಜಾರಕಿಹೊಳಿ

300x250 AD

ರಾಜ್ಯದ ಪ್ರಸ್ತುತ ಬರ ಸ್ಥಿತಿ – ಜಲ ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದ ಶಿವಾನಂದ ಕಳವೆ

ಶಿರಸಿ: ಸಭೆ, ಸಮಾರಂಭ ಹಾಗೂ ಕಾರ್ಯಕ್ರಮಗಳ ಉದ್ಘಾಟನೆಯ ಒತ್ತಡದಲ್ಲಿರುವ ಸಚಿವರು ಉಪನ್ಯಾಸ ಕೇಳಲು ಕೂರುವ ಸಂದರ್ಭ ಇದೆಯೇ? ಇಂಥ ಒಂದು ಅಪುರೂಪದ ಘಟನೆಗೆ ಇಲ್ಲಿನ ಕಳವೆ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರ ಸಾಕ್ಷಿಯಾಗಿದೆ. ಪೂರ್ವ ನಿರ್ಧಾರಿತ ಕಾರ್ಯಕ್ರಮದ ಹೊರತಾಗಿ ನಿಸರ್ಗ ಜ್ಞಾನ ಕೇಂದ್ರ ವೀಕ್ಷಣೆಗೆ ಆಗಮಿಸಿದ ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪರಿಸರ ಉಪನ್ಯಾಸ ಮಾಡುವಂತೆ ಪರಿಸರ ಬರಹಗಾರ ಶಿವಾನಂದ ಕಳವೆಯವರಲ್ಲಿ ಕೋರಿದ್ದು, ರಾಜ್ಯದ ಪ್ರಸ್ತುತ ಬರ ಸ್ಥಿತಿ ಹಾಗೂ ಜಲ ಸಂರಕ್ಷಣೆ ಕುರಿತು ಸುಮಾರು ಒಂದು ಗಂಟೆ ಕಳವೆಯವರ ಮಾತುಗಳನ್ನು ಆಸಕ್ತಿಯಿಂದ ಆಲಿಸಿ, ಅಚ್ಚರಿ ಮೂಡಿಸಿದರು.

ಶಿರಸಿಯ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಸಚಿವರನ್ನು ಶಾಸಕ ಭೀಮಣ್ಣ ನಾಯ್ಕ ಹಾಗೂ ಯುವ ಮುಖಂಡ ದೀಪಕ ದೊಡ್ಡೂರು ಕಳವೆಗೆ ಕರೆತಂದರು. ಮಕ್ಕಳಿಗೆ ಪರಿಸರ ಶಿಕ್ಷಣ ಕಾರ್ಯಕ್ರಮ, ಜಲ ಸಂರಕ್ಷಣೆ ಜಾಗೃತಿ ಮೂಡಿಸುವ ದಶಕಗಳ ಕಾರ್ಯಗಳ ವಿವರ ಪಡೆದ ಸಚಿವರು, ಸಂತಸ ವ್ಯಕ್ತಪಡಿಸಿದರು. ಕರ್ನಾಟಕ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿಯ ಈ ಕೇಂದ್ರಕ್ಕೆ ಇನ್ನಷ್ಟು ಮೂಲಭೂತ ಸೌಕರ್ಯ ಕಲ್ಪಿಸಲು ತಾವು ಅಗತ್ಯ ಸಹಾಯ ನೀಡುವುದಾಗಿ ಘೋಷಿಸಿದರು.

ಇಂದು ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರ ಪೀಡಿತವಾಗಿವೆ. ಇಂಥ ಸಂದರ್ಭದಲ್ಲಿ ಭವಿಷ್ಯದಲ್ಲಿ ರಾಜ್ಯ ಬರ ಪರಿಸ್ಥಿತಿ ಗೆಲ್ಲಲು ಕೆರೆ ಪುನಶ್ಚೇತನ ಮಹತ್ವವನ್ನು ಕಳವೆ ಸಚಿವರಿಗೆ ವಿವರಿಸಿದರು. ಕೆರೆ ಹೂಳು ತೆಗೆಯುವ ಸಂದರ್ಭದಲ್ಲಿ ಆಳಕ್ಕೆ ಹೂಳು ತೆಗೆದು ಹೆಚ್ಚು ನೀರು ನಿಲ್ಲುವಂತೆ ಮಾಡಬೇಕು. ಇಂದು ಕೆರೆ ಹೂಳು ತೆಗೆಯಲು ಮಂಜೂರಾದ ಹಣದಲ್ಲಿ ಶೇಕಡಾ 10ರಷ್ಟು ಹಣ ಮಾತ್ರ ಹೂಳು ತೆಗೆಯುವ ಕಾರ್ಯಕ್ಕೆ ವಿನಿಯೋಗಿಸಿ, ಇನ್ನುಳಿದ ಹಣ ಕೆರೆ ಸೌಂದರ್ಯಿಕರಣ, ಕಾಲುವೆ, ಕಲ್ಲು ಕಟ್ಟುವ ಕಾರ್ಯಕ್ಕೆ ವಿನಿಯೋಗವಾಗುತ್ತಿದೆ. ಮೊದಲು ಕೆರೆಯ ಹೂಳು ಸಂಪೂರ್ಣ ತೆಗೆಯುವುದು ಮುಖ್ಯ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕೃಷಿ ಪರಿಸರದಲ್ಲಿ ಮರ ಬೆಳೆಸುವ ಅಗತ್ಯವಿದೆ. ಇದನ್ನು 1984ರ ಎಂಡಿ ಸತೀಶ್ಚಂದ್ರನ ವರದಿ ಹೇಳಿದೆ. ಈಗ ಮರ ಕಾಯ್ದೆಯ ತಿದ್ದುಪಡಿ ಮೂಲಕ ರಾಜ್ಯದಲ್ಲಿ ಮರ ಬೆಳೆಸಲು ಹೆಚ್ಚಿನ ಅವಕಾಶ ದೊರಕಿದೆ. ಮರ ಬೆಳೆಸುವುದು ಕೃಷಿ, ಕೃಷಿಕರ ದೊಡ್ಡ ಲಾಭವಾಗುವಂತೆ ಕಾರ್ಯಕ್ರಮಗಳನ್ನು ಸರಕಾರ ರೂಪಿಸಬೇಕು. ಬೆಳೆದವರಿಗೆ ಉತ್ತಮ ಬೆಲೆ ಸಿಕ್ಕರೆ ಪರಿಸರ ಸಂರಕ್ಷಣೆ ಜೊತೆಗೆ ಹಸಿರು ಅಭಿವೃದ್ಧಿಯೂ ಸಾಧ್ಯ. ಈ ಹಿಂದೆ ಆರಂಭವಾಗಿದ್ದ ಕೃಷಿ ಹೊಂಡ ನಿರ್ಮಾಣ, ಕೃಷಿ ಅರಣ್ಯ ಅಭಿವೃದ್ಧಿ ಚಟುವಟಿಕೆ ಪುನಃ ಮಹತ್ವ ಪಡೆಯಬೇಕು ಎಂದರು.

300x250 AD

ಕಬ್ಬಿನ ಕ್ಷೇತ್ರಗಳಲ್ಲಿ ಕಬ್ಬಿನ ಗರಿಗಳನ್ನು ಸುಡುವ ಕ್ರಮ ಬದಲಿಸಿ, ಮಣ್ಣಿಗೆ ಸೇರಿಸಿ ಮಣ್ಣಿಗೆ ಸಾವಯವ ಹೆಚ್ಚಳಕ್ಕೆ ಒತ್ತು ನೀಡುವ ಮೂಲಕ ಕಬ್ಬಿನ ಬೆಳೆಯ ನೀರಿನ ಬಳಕೆ ಮಿತಗೊಳಿಸಬಹುದು. ಇದಕ್ಕೆ ಬೀದರ್ ಜಿಲ್ಲೆಯ ರೈತ ಮಾದರಿ. ಅಧಿಕ ನೀರಾವರಿಯ ಮೂಲಕ ಲಕ್ಷಾಂತರ ಎಕರೆ ಭೂಮಿ ಸವುಳು ಜವುಳು ಸಮಸ್ಯೆಯಿಂದ ಬೆಳಗಾವಿ, ರಾಯಚೂರು, ಬಾಗಲಕೋಟೆ ಜಿಲ್ಲೆಯಲ್ಲಿ ಹಾಳಾಗಿದೆ. ನೀರಿನ ಮಿತ ಬಳಕೆ, ಮರ ಅಭಿವೃದ್ದಿ ಮೂಲಕ ಇದಕ್ಕೆ ಪರಿಹಾರ ಸಾಧ್ಯವಿದೆ. ಜಿಲ್ಲೆಯ ಹಳಿಯಾಳ ಪ್ರದೇಶದಲ್ಲಿ ಕೆರೆಗಳ ಹೂಳನ್ನು ಆಳಕ್ಕೆ ತೆಗೆಯುವ ಮೂಲಕ ಜಲ ಸಂರಕ್ಷಣೆಯ ಉತ್ತಮ ಕಾರ್ಯ ನಡೆದಿದೆ ಎಂದರು.

ರಾಜ್ಯದಲ್ಲಿ 39,173, ಕೆರೆಗಳು ಇವೆ. ವಿಕೇಂದ್ರೀಕೃತ ನೀರಾವರಿಯ ಅತ್ಯುತ್ತಮ ಈ ವ್ಯವಸ್ಥೆ ಬಿದ್ದ ಹನಿಯನ್ನು ಬಿದ್ದಲ್ಲಿ ಉಳಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಕೆರೆಗಳಿಗೆ ಮರುಜೀವ ನೀಡುವ ಕಾರ್ಯ ಎಲ್ಲೆಡೆ ನಡೆಯಬೇಕು. ಮಲೆನಾಡಿನಲ್ಲಿ ಕೆರೆಗಳ ಗಾತ್ರ ಚಿಕ್ಕದು, ಒರತೆ ಕೆರೆಯೆಂಬ ಇವು ಯಾವ ನೀರಾವರಿ ಯೋಜನೆಗಳಿಲ್ಲದ ಇಲ್ಲಿನ ತೋಟ, ನದಿ ಉಳಿಸಲು ನೆರವಾಗುತ್ತಿವೆ. ಪಶ್ಚಿಮ ಘಟ್ಟದ ಈ ಪ್ರದೇಶದಲ್ಲಿ ನದಿಗಳು ಜನಿಸಿವೆ. ಇಲ್ಲಿನ ಕೆರೆ ಉಳಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡಬೇಕೆಂದು ಕಳವೆ ಹೇಳಿದರು.

ಶಾಸಕರಾದ ಭೀಮಣ್ಣ ನಾಯ್ಕ, ಸತೀಶ ಸೈಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕತ, ಕಾಂಗ್ರೇಸ್ ಧುರೀಣರಾದ ಸಿ.ಎಫ್.ನಾಯ್ಕ, ಬಸವರಾಜ ದೊಡ್ಮನಿ, ಬಿ. ಶಿವಾಜಿ, ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು, ಶಿರಸಿ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ, ಉಪ ವಲಯ ಅರಣ್ಯಾಧಿಕಾರಿ ಎಮ್‌. ಆರ್.ನಾಯ್ಕ, ಕಳವೆ ಗ್ರಾಮದ ಹಿರಿಯರಾದ ಮಂಜುನಾಥ ಭಟ್ಟ, ಈರಾ ನಾರಾಯಣ ಗೌಡ, ಶ್ರೀಧರ ಭಟ್ಟ, ನಾಗರಾಜ ಭಟ್ಟ, ಮಹೇಶ ಗೌಡ ಸೇರಿದಂತೆ ಗ್ರಾಮದ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top