Slide
Slide
Slide
previous arrow
next arrow

ಜನಸಾಮಾನ್ಯರಿಗೆ ತಲುಪುವಂಥ ಸಾಹಿತ್ಯ ನಿರ್ಮಾಣವಾಗಲಿ: ಜಸ್ಟಿಸ್ ಎನ್. ಕುಮಾರ್

300x250 AD

ಕೇವಲ ಪಂಡಿತವರ್ಗಕ್ಕೆ ಮಾತ್ರವಲ್ಲದೆ ಜನಸಾಮಾನ್ಯರಿಗೂ ತಲುಪುವಂಥ ಸಾಹಿತ್ಯ ನಿರ್ಮಾಣ ಇಂದಿನ ಅಗತ್ಯ. ಸಾಹಿತಿಗಳು ಸಮಾಜದ ಬಗ್ಗೆ ಯೋಚನೆ ಮಾಡಬೇಕು. ಅತ್ಯಂತ ಸರಳವಾದ ಕನ್ನಡದಲ್ಲಿ ಕೃತಿಗಳನ್ನು ರಚಿಸಿ ಅದನ್ನು ಸಮಾಜದ ತಳಮಟ್ಟದವರೆಗೂ ತಲುಪಿಸುವ ಕೆಲಸ ಆಗಬೇಕು. ಇದರಿಂದ ಭಾರತೀಯ ಪ್ರಜ್ಞೆಯನ್ನು ಮೂಡಿಸಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ತಿಳಿಸಿದರು.

ಬೆಂಗಳೂರಿನ ಸಂಸ್ಕೃತ ಭಾರತಿ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿದ್ದ ಆದಿಕವಿ ಪುರಸ್ಕಾರ ಹಾಗೂ ವಾಗ್ದೇವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಭಾರತೀಯತೆ, ರಾಮರಾಜ್ಯ, ಸಂಸ್ಕೃತಿ ಇತ್ಯಾದಿ ಪದಪ್ರಯೋಗವನ್ನು ಮಾಡುತ್ತೇವೆ. ಆದರೆ ಅವುಗಳ ಅರ್ಥವೇ ಬಹುತೇಕರಿಗೆ ತಿಳಿದಿರುವುದಿಲ್ಲ. ಅಂಥ ಪದಗಳ ಪರಿಚಯವನ್ನು ಜನಸಾಮಾನ್ಯರಿಗೂ ಮಾಡಿಕೊಟ್ಟರೆ ಭಾರತೀಯಪ್ರಜ್ಞೆಯನ್ನು ಜಾಗೃತಗೊಳಿಸಲು ಸಾಧ್ಯ. ಅಂಥ ಕಾರ್ಯವನ್ನು ಇವತ್ತಿನ ಸಾಹಿತಿಗಳು ಮತ್ತು ಅಭಾಸಾಪದಂಥ ಸಂಘಟನೆಗಳು ಮಾಡಬೇಕಿದೆ. ಟಿವಿ, ಮೊಬೈಲ್, ಕಂಪ್ಯೂಟರ್ ಮೊದಲಾದ ಮಾಧ್ಯಮಗಳು ಆಧುನಿಕ ಜಗತ್ತನ್ನು ಆಳುತ್ತಿವೆ. ಅವುಗಳ ಬಳಕೆಯನ್ನು ದೂರುವ ಬದಲು ಆ ಎಲ್ಲ ಮಾಧ್ಯಮಗಳನ್ನು ಬಳಸಿಕೊಂಡು ಭಾರತೀಯ ಚಿಂತನೆಯನ್ನು ಪಸರಿಸುವ ಕೆಲಸ ಆಗಬೇಕು ಎಂದರು.

ಇಂದು ಕನ್ನಡವನ್ನು ಕನ್ನಡ ಹೋರಾಟಗಾರರಿಂದ ರಕ್ಷಿಸಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜದ ಶಾಂತಿಯನ್ನು ಕದಡುವ ಅಂಥವರನ್ನು ಮೌನವಾಗಿ ಸಹಿಸುತ್ತಿರುವ ಪ್ರಜ್ಞಾವಂತರೂ ಇದಕ್ಕೆ ಹೊಣೆಯಾಗುತ್ತಾರೆ. ವಾಲ್ಮೀಕಿಯನ್ನು ಒಪ್ಪಿಕೊಳ್ಳುವ ಜನ ರಾಮನನ್ನು ವಿರೋಧಿಸುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಸರಿಯಾದ ತಿಳಿವಳಿಕೆಯನ್ನು ನೀಡುವ ಅಗತ್ಯವಿದೆ ಎಂದು ತಿಳಿಸಿದರು.

ಕನ್ನಡದ ಇತಿಹಾಸದ ಬಗ್ಗೆ ಹಲವು ಗೊಂದಲಗಳಿವೆ. ಯಾರಿಗೂ ಈ ಕುರಿತು ಸ್ಪಷ್ಟತೆ ಇಲ್ಲ. ಏಕೆಂದರೆ ನಮ್ಮ ಇತಿಹಾಸವನ್ನು ಬರೆದವರು ಪರಕೀಯರು. ಸುಳ್ಳಿನ ವಿಜೃಂಭಣೆಯಿಂದ ನೈಜ ಇತಿಹಾಸ ಮರೆಯಾಗಿದೆ. ಸತ್ಯ ಚರಿತ್ರೆಯನ್ನು ಪುನಾರಚಿಸುವ ಕೆಲಸವನ್ನು ಸಾಹಿತಿಗಳು ಕೈಗೊಳ್ಳಬೇಕು ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಿರಿಯ ಮತ್ತು ಕಿರಿಯ ಸಾಹಿತಿಗಳಿಬ್ಬರನ್ನು ಗುರುತಿಸಿ ಆದಿಕವಿ ಮತ್ತು ವಾಗ್ದೇವಿ ಪ್ರಶಸ್ತಿಯನ್ನು ನೀಡುತ್ತಿದೆ. ಇಂದು ಶಸ್ತ್ರಾಸ್ತ್ರಗಳ ದಾಳಿಗಿಂತ ಬೌದ್ಧಿಕ ದಾಳಿ ದೇಶವನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಬೌದ್ಧಿಕ ಕ್ಷತ್ರಿಯರನ್ನು ತಯಾರು ಮಾಡುವ ಕೆಲಸವನ್ನು ಸಾಹಿತ್ಯ ಪರಿಷದ್  ಮಾಡುತ್ತಿದೆ ಎಂದು ಅಭಾಸಾಪ ರಾಜ್ಯ ಉಪಾಧ್ಯಕ್ಷ, ವಿಸ್ತಾರ ನ್ಯೂಸ್ ನ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ತಿಳಿಸಿದರು. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಸಾಹಿತಿ ಡಾ. ಸಂಗಮೇಶ ಸವದತ್ತಿಮಠ ಅವರಿಗೆ 2023ನೇ ಸಾಲಿನ ಆದಿಕವಿ ಪುರಸ್ಕಾರ ಹಾಗೂ ವಿದ್ವಾಂಸ ಎಸ್. ಕಾರ್ತಿಕ್ ಅವರಿಗೆ ವಾಗ್ದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಸಂಗಮೇಶ ಸವದತ್ತಿಮಠ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರಿ ಸ್ಮಿತಾ ಪ್ರಶಸ್ತಿಯನ್ನು ಸ್ವೀಕರಿಸಿದರು.

300x250 AD

ವಾಲ್ಮೀಕಿ ಮಹರ್ಷಿಗಳು ಬರೀ ರಾಮನ ಕಥೆಯನ್ನು ಬರೆಯಲಿಲ್ಲ, ಬದಲಾಗಿ ರಾಮಾಯಣದ ಮೂಲಕ ಭಾರತದ ಸಾಂಸ್ಕೃತಿಕ ಸಂವಿಧಾನವನ್ನೇ ರೂಪಿಸಿದ್ದಾರೆ. ಅವರ ರಾಮಾಯಣ ಮಹಾಕಾವ್ಯ ನೂರಾರು ಜನರಿಗೆ ರಾಮಾಯಣ ರಚಿಸಲು ಪ್ರೇರಣೆ ನೀಡಿದೆ. ಅಸಂಖ್ಯ ಕವಿಗಳಿಗೆ, ಲೇಖಕರಿಗೆ ಸ್ಫೂರ್ತಿ ನೀಡಿದೆ. ಅಂಥ ಕವಿಯ ಹೆಸರಿನಲ್ಲಿ ಪ್ರಶಸ್ತಿ ದೊರೆತಿರುವುದಕ್ಕೆ ಸಂತೋಷವಾಗುತ್ತಿದೆ. ಭಾರತೀಯ ಸಂಸ್ಕೃತಿಯ ಸಂವರ್ಧನೆಯ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವ ಅಭಾಸಾಪ ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸಲು ಸಿದ್ಧ ಎಂದು ಡಾ. ಸಂಗಮೇಶ ಸವದತ್ತಿಮಠ ತಮ್ಮ ಸಂದೇಶದ ಮೂಲಕ ತಿಳಿಸಿದರು.

ಒಳ್ಳೆಯ ಕೆಲಸವನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕು. ಅಭಾಸಾಪ ನಾಡಿನ ಶ್ರೇಷ್ಠ ಸಾಹಿತಿಗಳನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸ ಮಾಡುತ್ತಿದೆ. ಈ ಉತ್ತಮ ಕಾರ್ಯದಲ್ಲಿ ನಮ್ಮ ಅಳಿಲು ಸೇವೆ ಸಲ್ಲಿಸಲು ಅವಕಾಶವಾದುದಕ್ಕೆ ಸಂತಸವಾಗುತ್ತಿದೆ ಎಂದು ವಾಗ್ದೇವಿ ಪ್ರಶಸ್ತಿ ಪೋಷಕ, ವಾಗ್ದೇವಿ ಶಿಕ್ಷಣ ಸಮೂಹದ ಅಧ್ಯಕ್ಷ ಕೆ. ಹರೀಶ್ ತಿಳಿಸಿದರು.

ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಸಾಹಿತ್ಯದ ಪಾತ್ರ ಮಹತ್ತ್ವದ್ದು. ಸಾಹಿತ್ಯಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸಂತಸದ ಸಂಗತಿ. ಈ ಕಾರ್ಯದಲ್ಲಿ ನಮ್ಮನ್ನು ಜೋಡಿಸಿಕೊಂಡಿದ್ದಕ್ಕೆ ಧನ್ಯವಾದ ಎಂದು ಆದಿಕವಿ ಪುರಸ್ಕಾರದ ಪೋಷಕ, ಉದ್ಯಮಿ ಎಸ್. ಜಯರಾಮ್ ಹೇಳಿದರು.

ಅಭಾಸಾಪ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ್ ಮೈಸೂರು ನಿರೂಪಿಸಿದರು. ಶ್ರೀಕಂಠ ಬಾಳಗಂಚಿ ವಂದಿಸಿದರು. ಅಭಾಸಾಪ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಬೆಂಗಳೂರು ಮಹಾನಗರ ಅಧ್ಯಕ್ಷ ಎಂ.ಎಸ್. ನರಸಿಂಹಮೂರ್ತಿ, ಕವಿ ಭ.ರಾ. ವಿಜಯಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top