Slide
Slide
Slide
previous arrow
next arrow

ಉಚಿತ ಅಸ್ಥಿಸಾಂದ್ರತಾ ಪರೀಕ್ಷಣಾ ಶಿಬಿರ ಸಂಪನ್ನ

300x250 AD

ಕುಮಟಾ: ಹೆರವಟ್ಟಾದಲ್ಲಿರುವ ಶ್ರೀಸಮರ್ಥ ಶ್ರೀಧರ ಪಂಚಕರ್ಮ ಚಿಕಿತ್ಸಾ ಕೇಂದ್ರದಲ್ಲಿ ಉಚಿತ ಅಸ್ಥಿಸಾಂದ್ರತಾ ಪರೀಕ್ಷಣಾ ಶಿಬಿರ ಯಶಸ್ವಿಯಾಗಿ ಜರುಗಿತು. ಮುಂಬೈನ ಪ್ರತಿಷ್ಠಿತ ಶ್ರೀ ದೂತಪಾಪೇಶ್ವರ ಲಿ. (ಎಸ್.ಡಿ.ಎಲ್.) ತನ್ನ 150ನೆಯ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಹಮ್ಮಿಕೊಂಡ ಈ ತಪಾಸಣಾ ಶಿಬಿರದ ಆತಿಥ್ಯವನ್ನು ವೈದ್ಯ ಸಾಹಿತಿ ಡಾ.ಎಂ.ಎಸ್.ಅವಧಾನಿ ವಹಿಸಿದ್ದರು.

ಶಿಬಿರವನ್ನು ಚಿತ್ರಿಗಿ ಸ್ಟೂಡೆಂಟ್ ವೆಲ್‌ಫೇರ್ ಟ್ರಸ್ಟ್ನ ಟ್ರಸ್ಟಿ ಸುರೇಶ್ ಭಟ್ ಉದ್ಘಾಟಿಸಿ ಅಪರೂಪದ ಈ ಪರೀಕ್ಷಣಾ ಶಿಬಿರದ ಆಯೋಜನೆ ನಮ್ಮ ಭಾಗದಲ್ಲಿ ನಡೆಯುತ್ತಿರುವುದು ವಿಶೇಷವಾಗಿದ್ದು, ಅದಕ್ಕಾಗಿ ಡಾ.ಅವಧಾನಿ ಅಭಿನಂದನಾರ್ಹರು ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಎನ್.ಆರ್.ಗಜು ಮಾತನಾಡಿ, ಭಾರತೀಯ ಪುರಾತನ ವೈದ್ಯ ವಿಜ್ಞಾನವಾದ ಆಯುರ್ವೇದವು ಅತ್ಯಂತ ಪ್ರಸಿದ್ಧವಾದ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳಲ್ಲಿ ಒಂದಾಗಿದ್ದು ಇದು ಯುಗಗಳಿಂದ ಇಲ್ಲಿಯವರೆಗೆ ಉಳಿದುಕೊಂಡಿದೆ. ಹಲವು ಕಾರಣಗಳಿಂದ ಆಯುರ್ವೇದವು ಆಲೋಪತಿಗಿಂತ ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ಆಸ್ಟಿಯೋಪೊರೋಸಿಸ್ ಸಂಪೂರ್ಣ ಅಸ್ಥಿಪಂಜರದ ಮೇಲೆ ಪರಿಣಾಮ ಬೀರುವ ಒಂದು ವ್ಯವಸ್ಥಿತ ಅಸ್ವಸ್ಥತೆಯಾಗಿದೆ. ಇದು ಕಡಿಮೆ ಮೂಳೆ ಸಾಂದ್ರತೆ ಮತ್ತು ಅಸ್ಥಿಪಂಜರದ ಮೈಕ್ರೋ ಆರ್ಕಿಟೆಕ್ಚರಲ್ ಕ್ಷೀಣತೆಯಿಂದ ಗುಣಲಕ್ಷಣಗಳನ್ನು ಹೊಂದಿರುವ ಚಯಾಪಚಯ ಮೂಳೆ ಕಾಯಿಲೆಯಾಗಿದ್ದು, ಇದು ವರ್ಧಿತ ಮೂಳೆಯ ದುರ್ಬಲತೆಗೆ ಮತ್ತು ಪರಿಣಾಮವಾಗಿ ಮುರಿತದ ಅಪಾಯದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆರ್ಯುವೇದದಲ್ಲಿ ಇದು ಅಸ್ಥಿ-ಮಜ್ಜಾಕ್ಷಯದೊಂದಿಗೆ ಪರಸ್ಪರ ಸಂಬಂಧ ಹೊಂದಿದೆ ಎಂದು ಡಾ.ಎಂ.ಎಸ್.ಅವಧಾನಿಯವರು ಪರೀಕ್ಷೆಗೊಳಪಟ್ಟವರಿಗೆ ಚಿಕಿತ್ಸಾ ವಿಧಾನ ತಿಳಿಸುತ್ತಾ ಪರಿಹಾರೋಪಾಯವನ್ನು ಸೂಚಿಸಿದರು.

300x250 AD

ಹಿರಿಯ ನಿವೃತ್ತ ವಿಜ್ಞಾನ ಶಿಕ್ಷಕ ಪಿ.ಜಿ.ಭಟ್ಟ ಕಡತೋಕಾ ಶುಭಕೋರಿದರು. ಶ್ರೀ ದೂತಪಾಪೇಶ್ವರ ಲಿ. ಮುಂಬೈನ ಮೆಡಿಕಲ್ ಪ್ರತಿನಿಧಿ ದೀಪಕ್ ಭಂಡಾರಿ ಆಹ್ವಾನಿತರನ್ನು ಸ್ವಾಗತಿಸಿ ಪರಿಚಯಿಸಿದರು. ಶ್ರೀಧರ ಸಮರ್ಥ ಪಂಚಕರ್ಮ ಕೇಂದ್ರದ ಮಂಜುನಾಥ ಮಡಿವಾಳ ನಿರೂಪಿಸಿದರು. ಮಂಜು ಕೊನೆಯಲ್ಲಿ ವಂದಿಸಿದರು. ದೂತಪಾಪೇಶ್ವರ ಲಿಮಿಟೆಡ್‌ನ ಮ್ಯಾನೇಜರ್ ದಿನೇಶ್ ಪೂಜಾರಿ, ಟೆಕ್ನೀಶಿಯನ್ ಕಿಶನ್ ಪರೀಕ್ಷಣಾ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶ್ರೀ ಸಮರ್ಥ ಶ್ರೀಧರ ಪಂಚಕರ್ಮ ಚಿಕಿತ್ಸಾ ಕೇಂದ್ರದ ಆಡಳಿತಾಧಿಕಾರಿ ಡಾ. ಸಂಧ್ಯಾ ಅವಧಾನಿ ಹಾಗೂ ಅಲ್ಲಿಯ ಸಿಬ್ಬಂದಿ ವರ್ಗದವರು ಸಂಪೂರ್ಣ ಸಹಕರಿಸುವ ಮೂಲಕ ಒಟ್ಟೂ 214 ಜನರು ತಪಾಸಣಾರ್ಥಿಗಳಾಗಿ ಪ್ರಯೋಜನ ಪಡೆದರು.

Share This
300x250 AD
300x250 AD
300x250 AD
Back to top