• Slide
    Slide
    Slide
    previous arrow
    next arrow
  • ಮನಸೆಳೆದ ಜನನಿ ಮ್ಯೂಸಿಕ್ ಸಂಸ್ಥೆಯ ‘ಶ್ರೀಕೃಷ್ಣಗಾನಾಮೃತ’

    300x250 AD

    ಶಿರಸಿ: ಮಲೆನಾಡಿನಲ್ಲಿ ಸಾಂಸ್ಕೃತಿಕ ವಾತಾವರಣ ಇನ್ನಷ್ಟು ಸಮೃದ್ಧಗೊಳಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಅಭಿಪ್ರಾಯಪಟ್ಟರು.
    ನಗರದ ಜನನಿ ಮ್ಯೂಸಿಕ್ ಸಂಸ್ಥೆ ಭಾನುವಾರ ಸಂಜೆ ಆಯೋಜಿಸಿದ್ದ ಶ್ರೀಕೃಷ್ಣಗಾನಾಮೃತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮಲೆನಾಡಿನಲ್ಲಿ ಶಾಸ್ತ್ರೀಯ ಸಂಗೀತ, ನಾಟ್ಯ, ಜಾನಪದ ಕಲೆ ಹೀಗೆ ಎಲ್ಲ ಕಲಾ ವಿಭಾಗಗಳಲ್ಲೂ ಸಾಕಷ್ಟು ಪ್ರತಿಭೆಗಳಿವೆ. ಈ ಪ್ರತಿಭೆಗಳಿಗೆ ಸೂಕ್ತ, ತರಬೇತಿ, ಮಾರ್ಗದರ್ಶನ ಜತೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚುವ ರೀತಿಯ ಕಾರ್ಯಕ್ರಮ ಈ ಭಾಗದಲ್ಲಿ ಇನ್ನಷ್ಟು ಸಂಘಟಿಸುವ ಅಗತ್ಯವಿದೆ. ಸರಕಾರದ ಸಹಕಾರದಲ್ಲಿ ಜತೆಯಲ್ಲಿ ಸಂಘ-ಸಂಸ್ಥೆ, ಕಲಾಪೋಷಕರ ಪ್ರೋತ್ಸಾಹ ಇದಕ್ಕೆ ಅಗತ್ಯವಿರುತ್ತದೆ. ಈ ಮೂಲಕ ಮಲೆನಾಡಿನ ಕಲೆ, ಸಂಸ್ಕೃತಿ, ಶಾಸ್ತ್ರೀಯತೆಯನ್ನು ಗಟ್ಟಿಗೊಳಿಸುವ ಕಾರ್ಯಕ್ರಮ ನಡೆಯಬೇಕು ಎಂದರು.

    ಕೆಎಂಎಫ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಗೋಮಾತೆಯಾಗಿಸಿದ ಗೋಪಾಲಕನು ಜನಸಾಮಾನ್ಯರ ಬದುಕಿಗೆ ಆದರ್ಶನಾದರೆ, ಶ್ರೀಕೃಷ್ಣ ಪ್ರಾಪಂಚಿಕರಿಗೆ ಆದರ್ಶನಾದನು. ರಾಮ ರಾಜಕಾರಣಕ್ಕೆ ಆದರ್ಶವಾದರೆ ಕೃಷ್ಣ ಪ್ರೀತಿ, ವಿಶ್ವಾಸಕ್ಕೆ ಆದರ್ಶ ಮಾದರಿ ಎಂದರು.

    ಕೆರೆಮನೆ ಇಡಗುಂಜಿ ಮೇಳದ ಕಾರ್ಯದರ್ಶಿ ರಾಜೇಶ್ವರಿ ಹೆಗಡೆ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಕಲೆ ಮುಖ್ಯ. ಸಂಗೀತದ ಲಯ, ಸ್ವರ ಇಟ್ಟುಕೊಂಡು ಮುನ್ನಡೆಯಬೇಕು ಎಂದ ಅವರು ಸಂಘಟನೆ ಸುಲಭವಲ್ಲ. ಎರಡು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತದ ಜ್ಞಾನ ನೀಡುತ್ತಾ, ವಿಭಿನ್ನ ಕಾರ್ಯಕ್ರಮ ಸಂಘಟಿಸುತ್ತಾ ಬಂದಿರುವ ಜನನಿ ಮ್ಯೂಸಿಕ್ ಸಂಸ್ಥೆ ಕಾರ್ಯ ಮೆಚ್ಚುವಂತದ್ದು ಎಂದರು.
    ಅಡಕೆ ವರ್ತಕ ಶಂಕರ ಹೆಗಡೆ ಮಾತನಾಡಿ, ಯುವಸಮೂಹ ಕಲೆಯ ಕಲಿಕೆಯಲ್ಲಿ ಆಸಕ್ತಿ ಹಾಗು ಶ್ರದ್ಧೆಯಿಂದ ತೊಡಗಿಕೊಳ್ಳಬೇಕು. ಆಗ ಈ ಕ್ಷೇತ್ರದಲ್ಲೂ ಸಾಧನೆಗೈಯಬಹುದು ಎಂದರು.

    300x250 AD

    ಪತ್ರಕರ್ತ ಕೃಷ್ಣಮೂರ್ತಿ ಕೆರೆಗದ್ದೆ ಮಾತನಾಡಿ, ಮನಸ್ಸಿನ ಅಂತರಾಳದ ನೋವನ್ನು ಮರೆಸುವಂತಹ, ಬೇಸರವನ್ನು ಅರ್ಥಪೂರ್ಣವಾಗಿ ದೂರವಾಗಿಸುವ ಶಕ್ತಿಯಿರುವ, ಭಾವನೆಗಳನ್ನು ಉತ್ತೇಜಿಸಿ ಆಪ್ತ ಭಾವ ಮೂಡಿಸುವ ಸಂಗೀತ ಕಲೆಯತ್ತ ಯುವ ಸಮೂಹ ಇನ್ನಷ್ಟು ಆಸಕ್ತಿ ತೋರಲಿ ಎಂದರು.
    ಈ ವೇಳೆ ವಿದುಷಿ ರೇಖಾ ದಿನೇಶ ಮುಂತಾದವರು ಉಪಸ್ಥಿತರಿದ್ದರು. ಜನನಿ ಮ್ಯೂಸಿಕ್ ಸಂಸ್ಥೆಯ ಕಾರ್ಯದರ್ಶಿ ದಿನೇಶ ಹೆಗಡೆ ಸ್ವಾಗತಿಸಿದರು. ಡಾ. ಪೂರ್ಣಿಮಾ ವಂದಿಸಿದರು. ರೂಪಾ ಹೆಗಡೆ ನಿರೂಪಿಸಿದರು.

    ಭಕ್ತಿಬಾವ ಮೂಡಿಸಿದ ಗಾಯನ:
    ಶ್ರೀಕೃಷ್ಣ ಗಾನಾಮೃತ ಕಾರ್ಯಕ್ರಮ ಆರೇಳು ತಾಸುಗಳ ಕಾಲ ನಡೆಯಿತು. ಸಂಸ್ಥೆಯ ಹಿರಿಯ ಕಿರಿಯ ಕಲಾವಿದರುಗಳಿಂದ ಕಾರ್ಯಕ್ರಮ ವೈವಿಧ್ಯ ಪ್ರಸ್ತುತಗೊಂಡಿತು. ವಿಷ್ಣು ಸ್ತೋತ್ರಂ, ಅಚ್ಚುತಂ ಕೇಶವಂ, ಶ್ರೀ ಕೃಷ್ಣ ಗೋವಿಂದ ಹರೇ ಮುರಾರಿ, ಬಾಜೇರೇ ಮುರಲಿಯಾ, ಸಾಮಾನ್ಯವಲ್ಲ ಹರಿಸೇವೆ, ತಿರುಪತಿ ವೆಂಕಟರಮಣ,ಹುಟ್ಟಿದೆಳು ದಿವಸದಲಿ, ದೃಷ್ಟಿ ನಿನ್ನ ಪಾದದಲ್ಲಿ, ಓ ಪಾಂಡುರಂಗ ಪ್ರಭೋ ವಿಠಲ, ರಾಜಬೀದಿಯೊಳಗಿಂದ, ನಾನೇನ ಮಾಡಿದೆನೋ, ಒಲಿದೆ ಯಾತಕಮ್ಮ ಲಕುಮಿ, ಇಷ್ಟು ದಿನ ಈ ವೈಕುಂಠ, ಜಯ ಜನಾರ್ಧನ ಕೃಷ್ಣ ಹೀಗೆ ವೈವಿಧ್ಯ ಹಾಡುಗಳನ್ನು ಸಾದರಪಡಿಸಿದರು.
    ಇದಕ್ಕೂ ಮೊದಲು ಸಮರ್ಥ ಹೆಗಡೆ ತಂಗಾರಮನೆ ಇವರಿಂದ ಕೃಷ್ಣಾಷ್ಟಮಿಯ ಪ್ರಯುಕ್ತ ಕೊಳಲು ವಾದನ ನಡೆಯಿತು. ನಂತರ ವಿದುಷಿ ರೇಖಾ ದಿನೇಶ್ ಗಾಯನ ಕಾರ್ಯಕ್ರಮದಲ್ಲಿ ಪ್ರಾರಂಭಿಕವಾಗಿ ರಾಗ್ ಜೋಗ್‌ನಲ್ಲಿ ಮಧ್ಯ ಲಯ ಝಪ್ತಾಲದಲ್ಲಿ ತನಮನ ಧನಸಬ, ಬಂದಿಶ್ ಅನ್ನು ಪ್ರಾರಂಭಿಸಿ ನಂತರ ದೃತ್ ಏಕಕಾಲದಲ್ಲಿ ತುಮಹೋ ನಾಥ ಬಂದಿಷನ್ನು ಹಾಗೂ ಕೊನೆಯಲ್ಲಿ ತರಾನ ಪ್ರಸ್ತುತಪಡಿಸಿದರು.
    ಆನಂತರ ಬೇಂದ್ರೆಯವರ ವಿರಚಿತ ಟೊಂಕದ ಮ್ಯಾಲೆ ಕೈಯ ಇಟ್ಟಾನ ವಿಠಲನ ಭಜನ್, ಜೊತೆ ಜೊತೆಯಲ್ಲಿ ಏನಿದು ಕೌತುಕ ಮತ್ತು ಹರಿಕುಣಿ ದಾನಮ್ಮ ಹಾಡುಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಕೊನೆಗೆ ಭೈರವಿಯಲ್ಲಿ ತಂಬೂರಿ ಮೀಟಿದವ ದಾಸರ ಪದದೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಿದರು. ತಬಲಾದಲ್ಲಿ ಡಾ.ಉದಯ್ ಕುಲಕರ್ಣಿ ಗೋವಾ, ಹಾರ್ಮೋನಿಯಂನಲ್ಲಿ ಸತೀಶ್ ಭಟ್ಟ, ಸಮರ್ಥ ಹೆಗಡೆ ರಿದಂ ಪ್ಯಾಡ್ ಮತ್ತು ತಾಳದಲ್ಲಿ ಕಿರಣ್ ಹೆಗಡೆ ಕಾನಗೋಡ ಸಹಕಾರ ನೀಡಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top