• Slide
    Slide
    Slide
    previous arrow
    next arrow
  • ವರ್ಷಕ್ಕೂ ಮುನ್ನ ಡಿಸಿ ವರ್ಗಾವಣೆ ಖಂಡನೀಯ: ಮಾಧವ ನಾಯಕ

    300x250 AD

    ಕಾರವಾರ: ಅವಧಿಗೂ ಮುನ್ನ ಜಿಲ್ಲಾಧಿಕಾರಿಗಳನ್ನ ವರ್ಗಾವಣೆ ಮಾಡಿರುವುದು ಸರಿಯಲ್ಲ. ತಾವು ಹೇಳಿದಂತೆ ನಡೆಯದಿದ್ದಾಗ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ ನೀಡುವುದು ಜನಪ್ರತಿನಿಧಿಗಳಿಗೂ ತರವಲ್ಲ. ಇಂಥ ವರ್ಗಾವಣೆಗಳ ವಿರುದ್ಧ ಸಂಘಟನೆಗಳು, ಜನರು ಎದ್ದು ನಿಲ್ಲಬೇಕಿದೆ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಕರೆನೀಡಿದ್ದಾರೆ.

    ಉತ್ತರ ಕನ್ನಡ ಭೌಗೋಳಿಕ ಹಾಗೂ ಸಾಂಸ್ಕೃತಿಕವಾಗಿ ಬಹು ವಿಸ್ತಾರದ ಜಿಲ್ಲೆ. ಇಲ್ಲಿಗೆ ಬರುವ ಜಿಲ್ಲಾಧಿಕಾರಿಗೆ ಜಿಲ್ಲೆಯನ್ನ ಅರಿತುಕೊಳ್ಳಲು ಕನಿಷ್ಠ ಐದಾರು ತಿಂಗಳು ಬೇಕಾಗುತ್ತದೆ. ಹೀಗಿರುವಾಗ ಒಂದು ವರ್ಷ ಕೂಡ ಕರ್ತವ್ಯ ಸಲ್ಲಿಸಲು ಬಿಡದೇ ಪ್ರಭುಲಿಂಗ ಕವಳಿಕಟ್ಟಿ ಅವರನ್ನ ವರ್ಗಾವಣೆ ಮಾಡಿರುವುದು ದುರುದ್ದೇಶಪೂರ್ವಕ ಹಾಗೂ ರಾಜಕೀಯಪ್ರೇರಿತ ಎಂದೆನಿಸುತ್ತದೆ ಎಂದಿದ್ದಾರೆ.

    ನ್ಯಾಯಬದ್ಧವಲ್ಲದ ಕೆಲಸ ಮಾಡಿಕೊಡಲು ಒಪ್ಪದಾಗ ಜಿಲ್ಲಾಧಿಕಾರಿಗಳ ಮೇಲೆ ಹೀಗೆ ವರ್ಗಾವಣೆಯೆಂಬ ಪ್ರಹಾರ ಮಾಡಲಾಗುತ್ತಿದೆ. ಹಾಗಿದ್ದರೆ ಕಾನೂನು ಚೌಕಟ್ಟಿನಲ್ಲಿ ಆಗದ್ದು ಯಾವ ಅಧಿಕಾರಿಯಾದರೂ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಇಲ್ಲಿ ಬರುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ನೆರೆ ಹಾನಿ ಉಂಟಾಗುತ್ತಿದೆ. ಸಾವು- ನೋವುಗಳಾಗುತ್ತಿದ್ದು, ಮೀನುಗಾರರು ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಹೀಗಿರುವಾಗ ಏಕಾಏಕಿ ಹೀಗೆ ಜಿಲ್ಲಾಧಿಕಾರಿಯವರನ್ನ ವರ್ಗಾವಣೆ ಮಾಡಿದ್ದು ಸರಿಯಲ್ಲ ಎಂದಿದ್ದಾರೆ.

    300x250 AD

    ಜನಪ್ರತಿನಿಧಿಗಳು ಹೀಗೆ ಏಕಾಧಿಪತ್ಯದ ಆಡಳಿತ ಮಾಡುತ್ತಾರೆಂದರೆ ಜನರು ಸುಮ್ಮನಿರುವುದು ಅವರಿಗೆ ಇನ್ನಷ್ಟು ಬಲ ನೀಡಿದಂತೆ ಹಾಗೂ ಪ್ರಜೆಗಳು ತಮ್ಮ ಬಲಹೀನತೆಯನ್ನ ತೋರ್ಪಡಿಸಿಕೊಂಡoತೆ. ಪಕ್ಷ, ವ್ಯಕ್ತಿ ಯಾರೇ ಇರಲಿ, ಜನಪರ ಅಧಿಕಾರಿಗಳ ಇಂಥ ವಾಮಮಾರ್ಗದ ವರ್ಗಾವಣೆಯನ್ನ ಎಲ್ಲರೂ ಖಂಡಿಸಬೇಕಿದೆ. ಅಧಿಕಾರಿಗಳಿಗೆ ವರ್ಗಾವಣೆ ಸಹಜ. ಆದರೆ ಕನಿಷ್ಠ ಅವಧಿಗಾದರೂ ಅವರಿಗೆ ಆಡಳಿತ ನಡೆಸಲು ಸ್ವತಂತ್ರವಾಗಿ ಬಿಡಬೇಕು ಎಂದಿದ್ದಾರೆ.

    ಇoಥ ವರ್ಗಾವಣೆಯ ಸಮಯದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳನ್ನ ಎದುರು ಹಾಕಿಕೊಳ್ಳಲು ಹೋಗುವುದಿಲ್ಲ. ಈ ಸಂದರ್ಭದಲ್ಲಿ ಸಂಘಟನೆಗಳು, ಸಾರ್ವಜನಿಕರು ಅಧಿಕಾರಿಗಳ ಬೆಂಬಲಕ್ಕೆ ನಿಲ್ಲಬೇಕಿದೆ. ಈಗ ವರ್ಗವಾಗಿ ಜಿಲ್ಲೆಗೆ ಬರುವವರು ಒಳ್ಳೆಯವರಲ್ಲ ಎಂಬುದು ಇದರ ಅರ್ಥವಲ್ಲ. ಆದರೆ ಯಾವುದೇ ಜಿಲ್ಲಾಧಿಕಾರಿಗೆ ಕನಿಷ್ಠ ಎರಡು ವರ್ಷವಾದರೂ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು. ಲೋಪದೋಷಗಳಿದ್ದಲ್ಲಿ ಬೇಕಿದ್ದರೆ ವರ್ಗಾವಣೆ ಮಾಡಲಿ, ಆದರೆ ಜನಪರ ಅಧಿಕಾರಿಗಳಿಗಲ್ಲ ಎಂದಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top