Slide
Slide
Slide
previous arrow
next arrow

ಪಡಿತರ ಚೀಟಿ ತಿದ್ದುಪಡಿಗೆ ಸರ್ವರ್ ಸಮಸ್ಯೆ: ಜನರ ಪರದಾಟ

300x250 AD

ಕಾರವಾರ: ತಹಶೀಲ್ದಾರ್ ಕಚೇರಿಗೆ ಪಡಿತರ ಚೀಟಿ ತಿದ್ದುಪಡಿ ಮಾಡಿಸಲು ಆಗಮಿಸುವ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಕಂಪ್ಯೂಟರ್‌ನಲ್ಲಿ ಸರ್ವರ್ ಬ್ಯುಸಿ (ತಾಂತ್ರಿಕ ದೋಷ) ಸಮಸ್ಯೆ ಕಾಡುತ್ತಿದೆ. ಕಳೆದ ಒಂದೂವರೆ ತಿಂಗಳಿಂದ ಜಿಪಿಎಸ್ ಸರ್ವರ್ ಸಮಸ್ಯೆಯಿಂದಾಗಿ ಗ್ರಾಮಾಂತರ ಭಾಗದ ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ತಾಲ್ಲೂಕು ಕಚೇರಿಗೆ ಬಂದರೂ, ತಿದ್ದುಪಡಿ ಕಾರ್ಯ ಪೂರ್ಣವಾಗದೇ ನಿರಾಸೆಯಿಂದ ವಾಪಸ್ಸಾಗುವಂತಾಗಿದೆ.
ಸರ್ಕಾರ ವಿವಿಧ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಮತ್ತು ಜನರಿಗೆ ಅವಶ್ಯವಿರುವ ದಾಖಲಾತಿಗಳನ್ನು ಪೂರೈಸಲು ಇದೀಗ ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಆ ಮೂಲಕವೇ ಸರ್ಕಾರದ ವಿವಿಧ ಸೇವೆಗಳನ್ನು ನೀಡುತ್ತದೆ. ಅದರಲ್ಲಿ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯಿಂದಲೂ ಪಡಿತರಕ್ಕೆ ಸಂಬಂಧಿಸಿದಂತೆ ಹೊಸ ಅರ್ಜಿ ಸ್ವೀಕಾರ, ಹೊಸ ಹೆಸರು ಸೇರ್ಪಡೆ, ಹೆಸರು ಡಿಲಿಟ್ ಮಾಡುವುದು, ವಿಳಾಸ ಬದಲಾವಣೆ, ನ್ಯಾಯಬೆಲೆ ಅಂಗಡಿ ಬದಲಾವಣೆ ಸೇರಿದಂತೆ ಇತ್ಯಾದಿ ಸೇವೆಗಳನ್ನು ಒದಗಿಸಲಾಗುತ್ತದೆ. ಆದರೆ ಕಳೆದ ಒಂದುವರೆ ತಿಂಗಳಿಂದ ಕಾರವಾರ ಜನತೆಗೆ ಈ ಸೇವೆಗಳು ಧಕ್ಕದಂತಾಗಿದೆ.
ನಿತ್ಯವೂ ತಹಶೀಲ್ದಾರ್ ಕಚೇರಿಗೆ ನೂರಾರು ಜನ ಅಲೆದಾಡುತ್ತಿದ್ದರೂ ದಿನಕ್ಕೊಂದು ಅರ್ಜಿಗಳು ವಿಲೇವಾರಿಯಾಗದಂತಾಗಿದೆ. ಅಧಿಕಾರಿಗಳನ್ನು ಕೇಳಿದರೆ ಸರ್ವರ್ ಸಮಸ್ಯೆ ಕಾರಣ ನೀಡಿ ಅಸಹಾಯಕತೆ ತೋಡಿಕೊಳ್ಳುತ್ತಿದ್ದು, ನಿತ್ಯ ಕೆಲಸ ಕಾರ್ಯ ಬಿಟ್ಟು ದಿನವಿಡಿ ನಿಂತರೂ ಸೇವೆ ಪಡೆಯಲು ಸಾಧ್ಯವಾಗದ ಸ್ಥಿತಿ ಇದೆ.
ಪಡಿತರ ಆನ್ಲೈನ್ ಸೇವೆ ಒದಗಿಸಲು ಎನ್‌ಐಸಿಗೆ ತಂತ್ರಾಂಶದ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ದಿನವೊಂದಕ್ಕೆ 70 ಅರ್ಜಿಗಳವರೆಗೆ ವಿಲೇವಾರಿ ಆಗುತ್ತಿತ್ತು. ಆದರೆ ಇದೀಗ ಒಂದು- ಎರಡು ಅರ್ಜಿ ಮಾತ್ರ ವಿಲೇವಾರಿಯಾಗುತ್ತಿದೆ. ಇದರಿಂದ ಜನಸಾಮಾನ್ಯರು ನಿತ್ಯವೂ ಪರದಾಡಬೇಕಾಗಿದೆ ಎಂಬ ದೂರು ಕೇಳಿಬಂದಿದೆ.

300x250 AD
Share This
300x250 AD
300x250 AD
300x250 AD
Back to top