ಅಂಕೋಲಾ: ಜ.20ರಂದು ನಡೆಯುವ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಹೊನ್ನಮ್ಮ ನಾಯಕ ಅವರನ್ನು ಕರ್ನಾಟಕ ಸಂಘ ಅಂಕೋಲಾ ಹೊಸ ವರ್ಷದ ದಿನದಂದು ಅವರ ಮನೆಗೆ ತೆರಳಿ ಗೌರವ ಸಮರ್ಪಿಸಿ ಅಭಿನಂದಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ರಾಜೀವ ನಾಯಕ ಸಮ್ಮೇಳನಾಧ್ಯಕ್ಷತೆಗೆ ಹೊನ್ನಮ್ಮ ನಾಯಕ ಅತ್ಯಂತ ಸೂಕ್ತ ವ್ಯಕ್ತಿ ಅದರಲ್ಲೂ ವಿಶೇಷವಾಗಿ ಮಹಿಳಾ ಸಾಹಿತಿಯೋರ್ವಳನ್ನು ಆಯ್ಕೆ ಮಾಡಿರುವುದು ಕರ್ನಾಟಕ ಸಂಘಕ್ಕೆ ಮಾತ್ರವಲ್ಲ, ಸಾಹಿತ್ಯ ಲೋಕಕ್ಕೆ ಹೆಮ್ಮೆಯ ಸಂಗತಿ. ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಲಿ ಎಂದು ಹೇಳಿ ಶುಭ ಕೋರಿದರು.
ಮತ್ತೋರ್ವ ಹಿರಿಯ ಸಾಹಿತಿ ಎನ್.ವಿ.ನಾಯಕ ಭಾವಿಕೇರಿ ಮಾತನಾಡಿ, ಹೊನ್ನಮ್ಮ ನಾಯಕರ ಆಯ್ಕೆಯ ಕುರಿತು ಸಂತಸ ವ್ಯಕ್ತಪಡಿಸುತ್ತಾ, ವಿಶೇಷವಾಗಿ ಈ ಹಿಂದೆ ಆಯ್ಕೆಯಾದ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದವರೆಲ್ಲರೂ ಕರ್ನಾಟಕ ಸಂಘದ ಮೂಲದಿಂದಲೇ ಬಂದವರು ಎಂಬುದು ಹೆಮ್ಮೆಯ ಸಂಗತಿಯಾಗಿದೆ ಶ್ರೀಮತಿ ಹೊನ್ನಮ್ಮ ನಾಯಕರವರು ಕೂಡ ಹಾಲಿ ಕರ್ನಾಟಕ ಸಂಘದ ಸಕ್ರಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದು ಅವರ ಆಯ್ಕೆ ಕರ್ನಾಟಕ ಸಂಘಕ್ಕೆ ಖುಷಿ ತಂದಿದೆ ಎಂದು ತಿಳಿಸುತ್ತ ಕಾರ್ಯಕ್ರಮದ ಯಶಸ್ಸಿಗೆ ಶುಭಕೋರಿದರು.
ಮತ್ತೋರ್ವ ಸಾಹಿತಿ ಬಿ.ಎಡ್. ಕಾಲೇಜು ಕಾರವಾರದ ಪ್ರಾಚಾರ್ಯ ಡಾ.ಶಿವಾನಂದ ನಾಯಕ ಮಾತನಾಡಿ, ಸಾಹಿತ್ಯ ಸಮ್ಮೇಳನಕ್ಕೆ ಈಗ ಸರಕಾರದ ಅನುದಾನವೂ ದೊರೆಯುವುದರಿಂದ ಸಮ್ಮೇಳನಗಳು ಚೆನ್ನಾಗಿ ನಡೆಸಲು ಸಾಧ್ಯವಾಗಿದೆ. ಹೊನ್ನಮ್ಮ ನಾಯಕ ಅವರು ನನಗೆ ಬಹಳ ಆಪ್ತರಾಗಿದ್ದು, ಸಮ್ಮೇಳನಾಧ್ಯಕ್ಷತೆಗೆ ನಿರ್ವಿವಾದ ಸಾಹಿತಿಯಾಗಿದ್ದಾರೆ. ಒಂದು ರೀತಿಯಲ್ಲಿ ನಮ್ಮ ಬೋಳೆ ಊರಿನವರೇ ಸಮ್ಮೇಳನಾಧ್ಯಕ್ಷರಾದ ಹಾಗೆ ಅನಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಂತರ ಮಾತನಾಡಿದ ಸಮ್ಮೇಳನಾಧ್ಯಕ್ಷೆ ಹೊನ್ನಮ್ಮ ನಾಯಕ ಕರ್ನಾಟಕ ಸಂಘದ ಎಲ್ಲ ಆಡಳಿತ ಮಂಡಳಿಯ ಸದಸ್ಯರು ಬಂದು ನನ್ನನ್ನು ಗೌರವಿಸಿ ಅಭಿನಂದಿಸಿರುವುದು ಖುಷಿ ತಂದಿದೆ. ನೀವೆಲ್ಲರೂ ನನ್ನ ಜೊತೆ ಇದ್ದು ನನಗೆ ಕಾರ್ಯಕ್ರಮದಲ್ಲಿ ಬಲ ತುಂಬೇಕು ಎಂದು ಹೇಳಿ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.
ಪ್ರಾರಂಭದಲ್ಲಿ ಹಿರಿಯ ಸಾಹಿತಿ ನಾಗೇಂದ್ರ ತೊರ್ಕೆ, ರವೀಂದ್ರ ಕೇಣಿ, ಲಲಿತಾ ನಾಯ್ಕ, ಅವರ ಹಿರಿತನದಲ್ಲಿ ಸಾಹಿತಿ ಹೊನ್ನಮ್ಮ ನಾಯಕರಿಗೆ ಶಾಲು ಹೊದಿಸಿ, ಫಲ-ಪುಷ್ಪ ನೀಡಿ ಗೌರವ ಸಮರ್ಪಿಸಲಾಯಿತು. ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪ್ರಭಾಕರ ಬಂಟ, ಕಾರ್ಯದರ್ಶಿ ಅರವಿಂದ ನಾಯಕ, ಡಾ.ಅರ್ಚನಾ ನಾಯಕ, ಖಜಾಂಚಿ ಎನ್.ಬಿ. ನಾಯಕ ಸೂರ್ವೆ, ರಾಜೇಶ ನಾಯಕ ಸೂರ್ವೆ, ಪ್ರಕಾಶ ಕುಂಜಿ, ಹೊನ್ನಮ್ಮ ನಾಯಕರ ಪತಿ ನಿವೃತ್ತ ಪ್ರಾಚಾರ್ಯ ಎಚ್.ಎಲ್. ನಾಯಕ, ಅವರ ಮಗ ಸುಜೀತ್ ನಾಯಕ, ಸೊಸೆ ಹೃದಯ ನಾಯಕ ಹಾಗೂ ಹೊನ್ನಮ್ಮ ನಾಯಕರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಸಹ ಕಾರ್ಯದರ್ಶಿ ವಾಸುದೇವ ನಾಯಕ ಎಲ್ಲರನ್ನೂ ವಂದಿಸಿದರು.
ಹೊನ್ನಮ್ಮ ನಾಯಕರಿಗೆ ಕರ್ನಾಟಕ ಸಂಘದಿಂದ ಗೌರವ ಸಮರ್ಪಣೆ
![](https://euttarakannada.in/wp-content/uploads/2023/01/02kar17-730x438.jpeg?v=1672716899)