ಹಳಿಯಾಳ:ಹಳೆಯ ಬಸ್ಸುಗಳಲ್ಲಿ ಪ್ರಯಾಣಿಸುವಂತಹ ಪ್ರಯಾಣಿಕರು ಅವ್ಯಸ್ಥತೆಯ ಕಾರಣಕ್ಕೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ . ಆದ್ದರಿಂದ 2030ರ ಹೊತ್ತಿಗೆ 35,000 ಹೊಸ ಇಲೆಕ್ಟ್ರಾನಿಕ್ ಬಸ್ಗಳನ್ನು ಖರೀದಿಸುವ ಉದ್ದೇಶ ಸರಕಾರಕ್ಕಿದೆ ಎಂದು ರಾಜ್ಯ ಸಾರಿಗೆ ಸಚಿವ ಶ್ರೀ ರಾಮುಲು ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸಾರಿಗೆ ನೌಕರರ 2016ರ ವೇತನ ಪಟ್ಟಿಯನ್ನು ಆದಷ್ಟು ಬೇಗ ಪರಿಷ್ಕರಣೆ ಮಾಡಲಾಗುವುದು. ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರತ ವೇಳೆಯಲ್ಲಿ ಮರಣ ಹೊಂದಿದ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಇನ್ಶೂರೆನ್ಸ್ ನೀಡಲಾಗುವುದು. ಇಲಾಖೆಯ ಸಿಬ್ಬಂದಿ ಕೂಡ ಸುರಕ್ಷಿತ ಭಾವನೆಯಿಂದ ತಮ್ಮ ಕೆಲಸವನ್ನು ನಿರ್ವಹಿಸಬೇಕು ಎಂದರು.
ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, 5 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ನೂತನ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಕಾಂಕ್ರಿಟ್ ಪ್ಲಾಟ್ಫಾರ್ಮ್ ವ್ಯವಸ್ಥೆ ಇಲ್ಲ. ಆದಷ್ಟು ಬೇಗ 2 ಕೋಟಿ 15 ಲಕ್ಷ ರೂಪಾಯಿ ಮಂಜೂರು ಮಾಡಲು ಬೇಡಿಕೆ ಇಡಲಾಗಿದೆ. ಇದನ್ನು ತಾವು ಗಮನಿಸಿ ಆದಷ್ಟು ಬೇಗ ಕಾಮಗಾರಿಗೆ ಅನುದಾನ ಮಂಜೂರಿ ಮಾಡಬೇಕು ಎಂದು ಸಾರಿಗೆ ಸಚಿವರಿಗೆ ಮನವಿ ಮಾಡಿದರು. ಹಳೆಯ ಬಸ್ಸುಗಳಲ್ಲಿ ಪ್ರಯಾಣ ಮಾಡುವುದು ತೀರ ಕಷ್ಟ. ಇದನ್ನು ತಾವು ಗಮನಿಸಬೇಕು. ಸಿಬ್ಬಂದಿಗಳ ಕುರಿತು ಚಿಂತನೆ ಮಾಡಬೇಕು. ಯಾವುದೇ ವ್ಯವಸ್ಥೆಯಾಗಲಿ ಅದು ಸರಿಯಾಗಿ ನಡೆಯಬೇಕೆಂದರೆ ಮೂಲಭೂತ ಸೌಕರ್ಯಗಳು ಅತಿ ಅವಶ್ಯಕ ಎಂದರು.
ಈ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಬಸವರಾಜ್ ಕೆಲಗಾರ್, ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ, ನಿರ್ದೇಶಕ ಸಂತೋಷಕುಮಾರ್ ಪಾಟೀಲ್, ಸಿದ್ದಲಿಂಗೇಶ್ವರ ಮಠದ, ಉಪಾಧ್ಯಕ್ಷ ಸುವರ್ಣ ಮಾದರ್, ಸಾರಿಗೆ ಇಲಾಖೆಯ ಸಿಬ್ಬಂದಿ ವರ್ಗದವರು ಮತ್ತು ಪುರಸಭೆ ಸದಸ್ಯರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
2030ರ ಹೊತ್ತಿಗೆ 35000 ಇ- ಬಸ್: ಸಚಿವ ಶ್ರೀರಾಮುಲು
![](https://euttarakannada.in/wp-content/uploads/2022/12/10kar1-730x438.jpg?v=1670824465)