ಅಂಕೋಲಾ: ತಾಲೂಕಿನ ಬೇಲೆಕೇರಿ ಗ್ರಾಮದಿಂದ ಬೇಲೆಕೇರಿ ಕ್ರಾಸ್ಗೆ ಹೋಗುವ ರಸ್ತೆಯಂಚಿನ ಅಪಾಯಕಾರಿ ಗಿಡ-ಮರಗಳ ಟೊಂಗೆಗಳನ್ನು ಹಾಗೂ ಮುಳ್ಳಿನ ಪೊದೆಗಳನ್ನು ಊರ ನಾಗರಿಕರು ಹಾಗೂ ಶ್ರೀಜೈನಬೀರ ಯುವಕ ಸಂಘದ ಸದಸ್ಯರು ಕತ್ತರಿಸಿ, ವಾಹನ ಸವಾರರಿಗೆ ರಸ್ತೆ ಸರಿಯಾಗಿ ಕಾಣುವಂತೆ ಮಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಸತತವಾಗಿ ಅಪಘಾತಗಳು ಸಂಭವಿಸುತ್ತಿದ್ದು, ಕಳೆದ 15 ದಿವಸಗಳ ಹಿಂದೆ ಒಬ್ಬ ಯುವಕ ಮೃತಪಟ್ಟಿರುತ್ತಾನೆ. ಮೊನ್ನೆ ಒಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ. ಈ ಎಲ್ಲ ಅವಘಡಗಳಿಗೆ ರಸ್ತೆಯಂಚಿನಲ್ಲಿ ಬೆಳದಿರುವ ಗಿಡ-ಮರಗಳು ಹಾಗೂ ಮುಳ್ಳಿನ ಪೊದೆಗಳು ಎಂದು ಗಮನಿಸಿದ ಸ್ಥಳೀಯರು ಸ್ವಚ್ಛತಾ ಕಾರ್ಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಯುವಕ ಸಂಘದ ಸದಸ್ಯರಾದ ಉಮಾಕಾಂತ ನಾಯಕ, ಮಂಜುನಾಥ ವಿ. ನಾಯಕ, ಭರತ್ ಆರ್.ನಾಯಕ, ಪ್ರಮುಖರಾದ ಕೆ.ಆರ್. ನಾಯಕ ಬೇಲೆಕೇರಿ, ಮಾಜಿ ತಾ.ಪಂ. ಸದಸ್ಯ ಸಂಜೀವ ಕುಚನಾಡ, ಗ್ರಾ.ಪಂ. ಸದಸ್ಯ ರಾಜೇಶ ಆರ್. ನಾಯಕ, ಸೋಮಾ ಗೌಡ, ಧರ್ಮಾ ಗೌಡ, ಲಕ್ಷ್ಮಣ ಬಿ. ನಾಯಕ, ಮಂಜು ಬಾನಾವಳಿಕರ, ರವಿ ಎಸ್. ನಾಯಕ, ರಾಜೇಶ ಶಿವಪ್ಪ ನಾಯಕ, ನಿತ್ಯಾನಂದ ವಿ. ನಾಯಕ, ದೇವರಾಯ ಮಾಸ್ತರ, ಗಣಪತಿ ರಾಮಾ ನಾಯಕ ಇನ್ನಿತರರು ಸಹಕರಿಸಿದರು.
ಬೇಲೆಕೇರಿ ರಸ್ತೆಯಂಚಿಗೆ ಸ್ವಚ್ಛತಾ ಕಾರ್ಯ
