Slide
Slide
Slide
previous arrow
next arrow

ರೈತ ಸಂಘಟನೆಗಳ ಜೊತೆ ಚರ್ಚಿಸಿ ಪ್ರಬಲ ಹೋರಾಟ: ಶಾಂತಕುಮಾರ್ ಎಚ್ಚರಿಕೆ

300x250 AD

ಹಳಿಯಾಳ: ರಾಜ್ಯದಲ್ಲಿ ದಿನೇ ದಿನೇ ಕಬ್ಬು ಬೆಳೆಗಾರರ ಸಮಸ್ಯೆ ಬಿಕ್ಕಟ್ಟು ಮತ್ತಷ್ಟು ಮುಂದುವರೆದಿದೆ. ರೈತ ಸಂಘಟನೆಗಳ ಗಡುವು ಮುಗಿದಿದ್ದರೂ ಸರ್ಕಾರ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ. ಈ ಬಗ್ಗೆ ನಾಳೆ ರಾಜ್ಯದ ಇತರೆ ರೈತ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿ ಚರ್ಚಿಸಿ ಪ್ರಬಲ ಹೋರಾಟ ರೂಪಿಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ವಿಕಾಸಸೌಧದ ನಾಲ್ಕನೇ ಮಹಡಿಯಲ್ಲಿ ರಾಜ್ಯ ಸರ್ಕಾರದ ಕಬ್ಬು ಖರೀದಿ ನಿಯಂತ್ರಣ ಮಂಡಳಿ ಸಭೆ ನಡೆಯಿತು. ಸಭೆಯಲ್ಲಿ, ಕಬ್ಬು ದರ ನಿಗದಿ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರ ನಿಗದಿ ಆದೇಶಕ್ಕೆ ಅನುಮೋದನೆ ನೀಡುವಂತೆ ಸಕ್ಕರೆ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಸಭೆಯಲ್ಲಿ ಮಂಡಿಸಿದಾಗ ರೈತ ಪ್ರತಿನಿಧಿಗಳು ಒಕ್ಕೂರಲಿನಿಂದ ಅನುಮೋದನೆಗೆ ವಿರೋಧ ವ್ಯಕ್ತಪಡಿಸಿದರು. ಕಬ್ಬಿನ ಉತ್ಪಾದನಾ ವೆಚ್ಚ ಏರಿಕೆಯಾಗಿರುವ ಕಾರಣ ರಾಜ್ಯ ಸಲಹಾ ಬೆಲೆ ಹೆಚ್ಚುವರಿಯಾಗಿ ನಿಗದಿ ಮಾಡಬೇಕು ಎಂದರು. ಆಗ ಸಕ್ಕರೆ ಸಚಿವರು ಒಂದು ವಾರದ ಒಳಗಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಂಡಳಿ ಸಭೆ ನಡೆಸಿ ರೈತರಿಗೆ ಉತ್ತಮ ದರ ನೀಡೋಣ ಎಂದರು.
ಆದರೆ ಶಾಂತಕುಮಾರ್, ತಾವು ಪದೇ ಪದೇ ಸಭೆ ನಡೆಸಿ ದರ ನಿಗದಿ ಮುಂದೂಡುವುದು ಸರಿಯಲ್ಲ. ನಾಳೆ ರಾಜ್ಯದ ಇತರೆ ರೈತ ಸಂಘಟನೆಗಳ ಸಭೆ ನಡೆಸಿ ತೀರ್ಮಾನ ಕೈಗೊಂಡು ಸಂಘಟಿತ ಪ್ರಬಲ ಹೋರಾಟ ನಡೆಸುವ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು. ಸಚಿವರು, ಮುಖ್ಯಮಂತ್ರಿಯವರು ಉತ್ತಮ ದರ ನಿಗದಿಗೆ ಒಪ್ಪಿದ್ದಾರೆ. ಒಂದು ವಾರದೊಳಗೆ ತೀರ್ಮಾನ ಕೈಗೊಳ್ಳಲು ಅವಕಾಶ ಕೊಡಿ ಎಂದರು. ಕಟಾವು, ಸಾಗಾಣಿಕೆ ವೆಚ್ಚ, ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿ, ಸಕ್ಕರೆ ಇಳುವರಿ, ತೂಕದಲ್ಲಿ ಮೋಸ ತಪ್ಪಿಸುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳ ಸಹಯೋಗದೊಂದಿಗೆ ಕಬ್ಬು ಅಭಿವೃದ್ಧಿ ಆಯುಕ್ತರು ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಸಚಿವರು ಸೂಚನೆ ನೀಡಿದರು.
ಸಕ್ಕರೆ ಕಬ್ಬು ಉದ್ದಿಮೆಯನ್ನು ಗಣಕೀಕರಣ ಮಾಡಲು ಸಭೆ ಒಪ್ಪಿತು. ನಾಲ್ಕು ತಿಂಗಳ ಹಿಂದೆ ದ್ವಿಪಕ್ಷೀಯ ಒಪ್ಪಂದ ಪತ್ರ, ಹಣ ಪಾವತಿಗಳ ಬಗ್ಗೆ ಗಣಕೀಕರಣ ಮಾಡಲು ಶಾಂತಕುಮಾರ್ ಒತ್ತಾಯ ಮಾಡಿದರು.
ಕಬ್ಬು ಅಭಿವೃದ್ಧಿ ಆಯುಕ್ತ ಶಿವಾನಂದ ಕಲಕೇರಿ ಹಾಗೂ ಮಂಡಳಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top