ಕಾರವಾರ: ಉತ್ತರಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವ ಕುರಿತು ಆರೋಗ್ಯ ಸಚಿವ ಡಾ.ಸುಧಾಕರವರು ಸದನದಲ್ಲಿ ಸ್ಪಷ್ಟ ಉತ್ತರ ನೀಡದಿರುವುದು ನಮ್ಮ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬುದು ಗಗನ ಕುಸುಮದಂತಾಗಿದೆ ಎಂದು ಮಾಜಿ ಶಾಸಕ ಸತೀಶ ಸೈಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಒಕ್ಕೊರಲಿನ ಹೋರಾಟ ನಡೆಯುತ್ತಿದ್ದು, ವಿಧಾನಸಭೆಯಲ್ಲಿ ಇದಕ್ಕೆ ಆರೋಗ್ಯ ಸಚಿವರು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರ ನೀಡಿರುವುದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿ ಕೊಡುತ್ತದೆ ಎಂದು ತಿಳಿಸಿದ್ದಾರೆ. ಆರೋಗ್ಯ ಸಚಿವರು, ಮುಖ್ಯಮಂತ್ರಿಗಳ ಹಾಗೂ ಆರ್ಥಿಕ ಇಲಾಖೆಯ ಮುಖ್ಯಸ್ಥರ ಸ್ಪಷ್ಟ ನಿರ್ಣಯ ಪಡೆಯದೇ ಸದನದಲ್ಲಿ ಉತ್ತರ ನೀಡಬೇಕಿತ್ತು. ಅದರಲ್ಲೂ ಅವರು ತಮ್ಮ ಭಾಷಣದಲ್ಲಿ ‘ಇದು ಸದನದಲ್ಲಿ ನೀಡುತ್ತಿರುವ ಮಾತು, ಹೊರಗೆಲ್ಲೂ ಅಲ್ಲ’ ಎಂದು ನುಡಿದಿರುವ ನುಡಿ ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಹಾಗಾದರೆ ಸಂವಿಧಾನಬದ್ಧ ಸಚಿವರುಗಳು ಸದನದ ಹೊರಗೆ ನೀಡುವ ಆಶ್ವಾಸನೆಗಳು ನಂಬಲರ್ಹವಲ್ಲವೇ? ಅಥವಾ ಉತ್ತರಕನ್ನಡದ ಎಲ್ಲಾ ಶಾಸಕರನ್ನು ನಂಬಿಸಲು ಆರೋಗ್ಯ ಸಚಿವರು ಈ ಮಾತು ಎತ್ತಿದರೆ ಎಂಬ ಜಿಜ್ಞಾಸೆ ಮೂಡುತ್ತಿದೆ. ಒಂದಾನು ವೇಳೆ ಆರೋಗ್ಯ ಸಚಿವರ ಉತ್ತರದ ಮಧ್ಯೆ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವ ಕುರಿತು ಭರವಸೆಯ ಉತ್ತರ ಕೊಟ್ಟಿದ್ದರೆ ನಮ್ಮ ಇಡೀ ಜಿಲ್ಲೆಗೆ ಜಿಲ್ಲೆಯೇ ಸಂತೋಷದಿಂದ ಹುಚ್ಚೆದ್ದು ಕುಣಿದಾಡುತ್ತಿತ್ತು. ಆದರೆ ಹಾಗೆ ಆಗಲಿಲ್ಲ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಲಾಟಿ ಆಸ್ಪತ್ರೆ ಅಗತ್ಯವಾಗಿ ಬೇಕಾಗಿದೆ. ಜಿಲ್ಲೆಯಲ್ಲಿ ಎಲ್ಲಿ ಬೇಕಾದರೂ ಸ್ಥಾಪನೆ ಆಗಲಿ ಎಲ್ಲರೂ ಸಂತೋಷದಿಂದ ಸ್ವಾಗತಿಸುತ್ತಾರೆ. ಒಂದಾನುವೇಳೆ ಸ್ಥಳದ ಅಭಾವ ಇದ್ದರೆ, ಈಗಿರುವ ಕಾರವಾರ ಕಾರಾಗೃಹವನ್ನು ಬೇಲೂರು ಗ್ರಾಮದಲ್ಲಿರುವ ಸರಕಾರಿ ಜಮೀನಿಗೆ ಸ್ಥಳಾಂತರಿಸಿ, ಕ್ರಿಮ್ಸ್ ಆಸ್ಪತ್ರೆ ಪಕ್ಕದಲ್ಲಿರುವ ಕಾರಾಗೃಹದ ವಿಶಾಲವಾದ ಜಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬಹುದು. ಅಥವಾ ಕ್ರಿಮ್ಸ್ ಆಸ್ಪತ್ರೆ ಮುಂದಿರುವ ಇನ್ಸ್ಪೆಕ್ಷನ್ ಬಂಗ್ಲೋ ಮತ್ತು ಅದಕ್ಕೆ ಹೊಂದಿಕೊAಡಿರುವ ಅಕ್ಕಪಕ್ಕದ ಜಾಗವನ್ನು ಸೇರಿಸಿ ನಮ್ಮ ಯೋಜನೆ ಸಂಪೂರ್ಣ ಗೊಲಿಸಬಹುದು. ಅಥವಾ ಕುಮಟಾದಲ್ಲಿ ನಾನು ಬಿ.ಆರ್.ಶೆಟ್ಟಿ ಅವರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ತೋರಿಸಿದ ನನ್ನ ಸ್ವಂತ ಜಾಗದಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬಹುದು. ಒಂದುವೇಳೆ ಕಾರವಾರದ ಕಾರಾಗೃಹ ಇರುವಲ್ಲಿ ಯೋಜನೆ ಪೂರ್ಣ ಗೊಳಿಸುವುದಾದರೆ , ಇದಕ್ಕೂ ಪೂರ್ವದಲ್ಲಿ ಜಾಂಬಾ ಬೇಲೂರು ರಸ್ತೆ ನಿರ್ಮಿಸಿ ಆ ಮೂಲಕ ಕಾರಾಗೃಹವನ್ನು ಬೇಲೂರಿನಲ್ಲಿ ನಿರ್ಮಿಸುವುದಕ್ಕೆ ಇರುವ ತಾಂತ್ರಿಕ ಸಮಸ್ಯೆಯನ್ನು ಪರಿಹಾರ ಮಾಡ ಬೇಕಾಗುತ್ತದೆ. ಈ ಕುರಿತು ಎಲ್ಲಾ ವಿವರಗಳನ್ನು ಈ ಹಿಂದೆಯೇ ಸರಕಾರಕ್ಕೆ ತಾನು ಸಲ್ಲಿಸಿದ್ದು ಇದ್ದಿರುತ್ತದೆ.
ಆದ್ದರಿಂದ ಮಾನ್ಯ ಆರೋಗ್ಯ ಸಚಿವರ ಆಶ್ವಾಸನೆಯು ಕೂಡಲೇ ಆರ್ಥಿಕ ಇಲಾಖೆಯಿಂದ ಅನುಮೋದನೆಗೊಂಡು, ಮಂತ್ರಿ ಮಂಡಲದಲ್ಲಿ ಮಂಜೂರಿ ಪಡೆದು ಅನುಷ್ಟಾನ ಗೊಳಿಸುವಲ್ಲಿ ಉತ್ತರ ಕನ್ನಡದ ಎಲ್ಲಾ ಜನಪ್ರತಿನಿದಿಗಳು ಸರಕಾರಕ್ಕೆ ಒತ್ತಡ ಹೇರಬೇಕೆಂದು ಸೈಲ್ ಆಗ್ರಹಿಸಿಸುವ ಜೊತೆಗೆ ಈ ಪ್ರಯತ್ನಕ್ಕೆ ತನ್ನ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಗಗನ ಕುಸುಮದಂತೆ: ಸತೀಶ ಸೈಲ್
![](https://euttarakannada.in/wp-content/uploads/2022/09/23kar21-1-730x438.jpg?v=1664020976)