Slide
Slide
Slide
previous arrow
next arrow

ಬಸ್ ಸಮಸ್ಯೆಯ ಪರಿಹರಿಸುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸಿನಿಂದ ಪ್ರತಿಭಟನೆ

300x250 AD

ಸಿದ್ದಾಪುರ: ತಾಲೂಕಿನ ಹಸುವಂತೆಯಲ್ಲಿ ಶಾಲಾ ಮಕ್ಕಳಿಗೆ ಉಂಟಾಗುವ ಬಸ್ ಸಮಸ್ಯೆಯ ಪರಿಹರಿಸುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸಿನಿಂದ ಪ್ರತಿಭಟನೆ ನಡೆಸಲಾಯಿತು. ಕೆಲ ಸಮಯ ರಸ್ತೆ ತಡೆಯನ್ನು ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಭರವಸೆ ನೀಡಿದ ನಂತರಲ್ಲಿ ಪ್ರತಿಭಟನೆ ಕೈಬಿಡಲಾಯಿತು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಹೋಗಲು ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ಪಾಸ್ ನೀಡಿ ಬಸ್ ಬಿಡದೆ ಇದ್ದಲ್ಲಿ ಏನು ಪ್ರಯೋಜನ.ಸಮಯಕ್ಕೆ ಸರಿಯಾಗಿ ಬಿಡಲಾಗದಿದ್ದಲ್ಲಿ ಬಸ್ ಪಾಸನ್ನು ರದ್ದುಗೊಳಿಸಿಬಿಡಿ. ನಿಮಗೆ ಬರುವ ಆದಾಯ ಮುಖ್ಯವಾಗಿದ್ದಲ್ಲಿ ಬಸ್ ಪಾಸ್ ರದ್ದುಗೊಳಿಸಿ, ಎಲ್ಲಾ ವಿದ್ಯಾರ್ಥಿಗಳಿಗೆ ಟಿಕೆಟ್ ಮಾಡಿಬಿಡಿ.ಜನರ ಕಷ್ಟ ಆಲಿಸಲು ನಮ್ಮ ಜಿಲ್ಲೆಯಲ್ಲಿ ಎಂಎಲ್‌ಎ, ಎಂಪಿಗಳು ಇದ್ದು ಇಲ್ಲದಂತಾಗಿದ್ದಾರೆ. ತಾಲೂಕ ಪಂಚಾಯತ್ ಜಿಲ್ಲಾ ಪಂಚಾಯತ್ ವ್ಯವಸ್ಥೆ ಇಲ್ಲವಾಗಿದೆ ಆಡಳಿತರೂಢ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡಿದೆ. ಜನರ ಧ್ವನಿಯನ್ನು ಅಡಗಿಸಿಬಿಟ್ಟಿದೆ. ಜನರು ತಮ್ಮ ಸಂಕಷ್ಟಗಳನ್ನು ಯಾರ ಬಳಿ ಹೇಳಿಕೊಳ್ಳಬೇಕಾಗಿದೆ ಎಂದು ತಿಳಿಯದಂತಾಗಿದೆ.

ಈಗಿನ ಈ 40% ಸರ್ಕಾರ ಮಾಡಿದ್ದೆ ದರ್ಬಾರ್ ಆಗಿದೆ. ಪ್ರತಿದಿನ ಬೆಲೆ ಏರಿಕೆಯಲ್ಲಿ ತೊಡಗಿದ್ದಾರೆ. ಬಿಜೆಪಿ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನಾವು ಅಚ್ಚೆ ದಿನ್ ತರುತ್ತೇವೆ ಅಂತ ಹೇಳಿದ್ದರು. ಆದರೆ ಈಗ ರಸ್ತೆಗಳು ಸರಿ ಇಲ್ಲ ರೇಷನ್ ಕಾರ್ಡ್ ಸಿಗುತ್ತಿಲ್ಲ, ಬಸ್ ಪಾಸಿದ್ದು ಮಕ್ಕಳಿಗೆ ಓಡಾಡಲು ಆಗುತ್ತಿಲ್ಲ. ಮನಮೋಹನ್ ಸಿಂಗ್ ನಡೆಸಿದಂತ ಆಡಳಿತ ಕೊಡಿ ಸಾಕು. ನಿಮ್ಮ ಧರ್ಮದ ರಾಜಕೀಯ ಹಾಗೂ ಜನರಲ್ಲಿ ಕಿಚ್ಚು ಹಚ್ಚುವುದು ಕೈಬಿಡಿ. ಬೇರೆ ದೇಶದಿಂದ ಹಣ ತಂದು ಸರ್ಕಾರ ನಡೆಸಲು ಸಾಧ್ಯವಾಗದೆ ಬಡ ಜನರ ನಿತ್ಯ ಬಳಕೆಯ ಆಹಾರ ಪದಾರ್ಥಗಳಾದ ಅನ್ನ ಮೊಸರು ಮಜ್ಜಿಗೆ ಹಾಲಿನ ಮೇಲೆ ಟ್ಯಾಕ್ಸ್ ಹಾಕುತ್ತಿರುವ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆರೋಪಿಸಿದರು.

ತಾ.ಪಂ ನಿಕಟಪೂರ್ವ ಸದಸ್ಯ ನಾಸೀರ್ ವಲ್ಲಿಖಾನ್, ಕವಂಚೂರು ಗ್ರಾ.ಪಂ ಅಧ್ಯಕ್ಷ ಜಿ.ಟಿ.ನಾಯ್ಕ ಗೋಳ್ಗೋಡ್, ಸದಸ್ಯರಾದ ಚಂದ್ರಕಾಂತ ನಾಯ್ಕ ಕಲ್ಲೂರ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಪ್ರಶಾಂತ್ ನಾಯ್ಕ ಹೊಸೂರ್ ಮೊದಲಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಪ್ರಮುಖರು ಹಾಗೂ ಸ್ಥಳೀಯ ಶಾಲಾ- ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

300x250 AD

ಈಡೇರದ ಭರವಸೆ: ಹಿಂದೆ ನಾವು ಕೆ.ಎಸ್.ಆರ್.ಟಿ.ಸಿ ಡಿಸಿಯವರಿಗೆ ಬಸ್ಸಿನ ಸಮಸ್ಯೆ ಕುರಿತು ಮನವಿ ಮಾಡಿದ್ದೆವು. ಬಸ್ಸಿನ ಸಮಸ್ಯೆ ಇದೆ. ಪ್ರತಿನಿತ್ಯ ಹಸ್ವಂತೆ, ಹೊಸಳ್ಳಿ, ಮನಮನೆ ಭಾಗದಿಂದ ನೂರಾರು ಮಕ್ಕಳು ಶಾಲಾ ಕಾಲೇಜಿಗೆ ಸಾಗರ ಕಡೆ ಹೋಗುತ್ತಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಿಗ್ಗೆ 8.15ಕ್ಕೆ ಒಂದು ಬಸ್ ಬರುತ್ತಿದೆ. ಇದು ವಿದ್ಯಾರ್ಥಿಗಳಿಗೆ ಸಾಕಾಗುತ್ತಿಲ್ಲ. ಬೆಳಿಗ್ಗೆ 8.30 ಹಾಗೂ 8.45ಕ್ಕೆ ಬಿಡಬೇಕೆಂದು ರಸ್ತೆ ತಡೆ ಮಾಡಿ ಮನವಿ ಮಾಡಿದ್ದೆವು. ಆಗ ಸ್ಥಳಕ್ಕೆ ಬಂದ ಸಾರಿಗೆ ಅಧಿಕಾರಿಗಳು ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಈ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೂ ತರಲಾಗಿತ್ತು. ಆದರೆ ಈವರೆಗೂ ಭರವಸೆ ಈಡೇರಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ ಭೇಟಿ: ಪ್ರತಿಭಟನೆಯ ಸ್ಥಳಕ್ಕೆ ಸಿದ್ದಾಪುರ ಸಾರಿಗೆ ಬಸ್ ನಿಲ್ದಾಣದ ನಿಯಂತ್ರಕ ಆರ್.ಟಿ.ನಾಯ್ಕ ಭೇಟಿ ನೀಡಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಪ್ರತಿಭಟನಾ ನಿರತರು ಸ್ಥಳಕ್ಕೆ ಕೆ.ಎಸ್.ಆರ್.ಟಿ.ಸಿ ಡಿಸಿ ಅವರೇ ಬಂದು ಸಮಸ್ಯೆ ಬಗೆಹರಿಸಬೇಕೆಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಂತೋಷ್ ಭಂಡಾರಿ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಡಿಪೋ ಮ್ಯಾನೇಜರ್ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.

Share This
300x250 AD
300x250 AD
300x250 AD
Back to top