ಹೊನ್ನಾವರ: ಯಕ್ಷಗಾನ ಕಲಾವಿದ ಯಲಗುಪ್ಪಾ ಸುಬ್ರಹ್ಮಣ್ಯ ಹೆಗಡೆ ಅವರಿಗೆ ಅಭಿನಂದಿಸುವ ‘ಯಲಗುಪ್ಪಾ ಯಕ್ಷಾರ್ಚನೆ’ ಕಾರ್ಯಕ್ರಮ ನವೆಂಬರ್ 9 ರಂದು ಸಂಜೆ 4 ಗಂಟೆಗೆ ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಗೌರವಾಧ್ಯಕ್ಷ ರಾಜು ಭಂಡಾರಿ ಹೇಳಿದರು.
ಅವರು ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಬುಧವಾರ ಕಾರ್ಯಕ್ರಮದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. 30 ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಯಲಗುಪ್ಪಾ ಸುಬ್ರಹ್ಮಣ್ಯ ಹೆಗಡೆ ಅವರು ಪೆರಡೂರು ಮೇಳದ ಶಿವರಂಜನಿ ನೃತ್ಯದ ಮೂಲಕ ಇನ್ನಷ್ಟು ಜನಪ್ರಿಯತೆ ಗಳಿಸಿದರು. ಇವರು ಹರಿವಾಣ ನೃತ್ಯ, ಕೊಡಪಾನ ನೃತ್ಯದ ಹಲವು ಪ್ರಕಾರದ ನೃತ್ಯವನ್ನು ಯಕ್ಷಗಾನದ ವೇದಿಕೆಯ ಮೇಲೆ ಪ್ರದರ್ಶಿಸುವ ಮೂಲಕ ಹೊಸ ಪ್ರಯೋಗಕ್ಕೆ ಕಾರಣರಾದರು. 50 ವರ್ಷ ವಯಸ್ಸಿನ ನಂತರವು ಸ್ತ್ರೀ ವೇಷ ಕಲಾವಿದರಾಗಿ ಅಭಿನಯಿಸುವುದು ಸುಲಭದ ಮಾತಲ್ಲ. ಆದರೆ ಅವರು ಇಂದಿಗೂ ಬಹುಬೇಡಿಕೆಯ ಕಲಾವಿದರಾಗಿದ್ದಾರೆ. ಇವರ ಕಲಾ ಸೇವೆ ಗುರುತಿಸಿ ಯಲಗುಪ್ಪಾ ಯಕ್ಷಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಯಕ್ಷಗಾನ ಅಕಾಡೆಮಿ ಸದಸ್ಯ ವಿದ್ಯಾಧರ ಜಲವಳ್ಳಿ ಮಾತನಾಡಿ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ಅವರು ಯಕ್ಷಗಾನದ ಸ್ತ್ರೀವೇಷದ ಲಾಲಿತ್ಯ, ಒನಪು ವೈಯ್ಯಾರಕ್ಕೆ ಪ್ರೌಢಿಮೆಯನ್ನು ಮೆರೆದವರು. 30 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರಿಗೆ ಅಭಿನಂದಿಸುವ ಕಾರ್ಯ ಆಗಬೇಕಿತ್ತು. ಈಗ ನಡೆಯುತ್ತಿರುವದು ಖುಷಿಯ ಸಂಗತಿ. ಮೊದಲ ಆಯ್ಕೆಯಾಗಿರುವ ಯಲಗುಪ್ಪ ಅವರನ್ನು ಆಯ್ಕೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಅವರಿಂದ ಪ್ರಾರಂಭಗೊಂಡ ಕಾರ್ಯಕ್ರಮ ಉಳಿದೆಲ್ಲ ಕಲಾವಿದರಿಗೂ ಇಂತಹ ಕಾರ್ಯಕ್ರಮದ ಮೂಲಕ ಗೌರವಿಸುವ ಕೆಲಸ ಆಗಲಿ. ಈ ಕಾರ್ಯಕ್ರಮವನ್ನು ಎಲ್ಲ ಅಭಿಮಾನಿಗಳು ಸೇರಿ ಯಶಸ್ವಿಗೊಳಿಸಬೇಕು ಎಂದರು.
ನಾಗರಾಜ ಹೆಗಡೆ ಕಾಸ್ಕಂಡ ಸ್ವಾಗತಿಸಿ, ಪರಿಚಯಿಸಿದರು. ಹಿರಿಯ ಕಲಾವಿದರಾದ ಪರಮೇಶ್ವರ ಭಂಡಾರಿ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಯಕ್ಷಗಾನ ಸಂಗಟಕ ಅಶೋಕ ನಾಯ್ಕ ಜಡ್ಡಿಕೇರಿ, ಹವ್ಯಾಸಿ ಯಕ್ಷಗಾನ ಕಲಾವಿದರಾದ ಬಾಲಕೃಷ್ಣ ಪೈ, ಶ್ರೀನಿವಾಸ ಪೈ, ಗಜಾನನ ಹೆಗಡೆ ಇದ್ದರು.