ಶಿರಸಿ: ಶಿರಸಿಯ ವೆಂಕಟೇಶ ಮಾದೇವ ವೈದ್ಯ ಎನ್ನುವವರು ದಿನಾಂಕ: 12/07/1990 ರಂದು ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರೊಂದನ್ನು ನೀಡಿ ಒಬ್ಬ ಬಿ.ಕೆ.ರಾ. ರಾವ್ ಬೆಂಗಳೂರು ಎನ್ನುವವರು ತನಗೆ ಉನ್ನತ ಅಧಿಕಾರಿಗಳ ಪರಿಚಯವಿದೆ ಅವರಿಗೆ ಮೀನುಗಾರಿಕೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ರೂ.200/- ಪಡೆದುಕೊಂಡು ಮೊಸ ಮಾಡಿದ್ದಕ್ಕಾಗಿ ದೂರನ್ನು ನೀಡಿದ್ದರು. ಆ ದೂರನ್ನು ಆಧರಿಸಿ ಶಿರಸಿಯ ಗ್ರಾಮೀಣ ಠಾಣೆಯಲ್ಲಿ ಗುನ್ನಾ ನಂ. 123/1990 ಅನ್ವಯ ಸದ್ರಿ ಬಿ.ಕೆ.ರಾ ರಾವ್ ಇವರ ವಿರುದ್ಧ ಕಲಂ. 420 ಐ.ಪಿ.ಸಿ. ಅನ್ವಯ ಪ್ರಕರಣ ದಾಖಲೆ ಆಗಿತ್ತು. ಅದರಲ್ಲಿ ತನಿಖೆ ನಡೆಸಿದ ತನಿಖಾಧಿಕಾರಿಗಳು ಆರೋಪಿಯ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಅದು ಶಿರಸಿಯ ಜೆ.ಎಂ.ಎಫ್.ಸಿ. ನ್ಯಾಯಾಲಯದ ಸಿ.ಸಿ. ನಂ. 63/91ರಡಿಯಲ್ಲಿ ಪ್ರಕರಣ ದಾಖಲ ಆಗಿತ್ತು.
ಆ ನಂತರ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಆರೋಪಿಯ ವಿರುದ್ಧ ಎಲ್.ಪಿ.ಸಿ. (ಲೋಂಗ್ ಪೆಂಡಿಂಗ್ ಕೇಸ್) ಪ್ರಕರಣ ಸಂಖ್ಯೆ 3/97ನೇದು ದಾಖಲ್ ಆಗಿ ಆರೋಪಿ ಶೋಧನೆಗೆ ಮಾನ್ಯ ನ್ಯಾಯಾಲಯ ವಾರೆಂಟ್ ಹೊರಡಿಸಿ ಅದನ್ನು ಆಧ್ಯತೆಯ ಮೇರೆಗೆ ಜ್ಯಾರಿ ಮಾಡುವಂತೆ ಆದೇಶ ಮಾಡಿದ್ದರು. ಅದರಂತೆ ಶಿರಸಿ ಗ್ರಾಮೀಣ ಠಾಣೆಯ ಪೋಲೀಸರು ಆರೋಪಿಯನ್ನು ಜೂ.30ರಂದು ಮಾನ್ಯ ನ್ಯಾಯಾಲಯದ ಮುಂದೆ ಹಾಜರಪಡಿಸಿದ್ದರು. ಸದ್ರಿ ಪ್ರಕರಣ ರಾಜಿ ಮಾಡಿಕೊಳ್ಳಬಹುದಾದ ಪ್ರಕರಣ ಆದ ಕಾರಣ ಮಾನ್ಯ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಶ್ರೀಮತಿ ಶಾರದಾದೇವಿ ಸಿ. ಹಟ್ಟಿ ಇವರು ಮತ್ತು ಆರೋಪಿ ಪರ ವಕೀಲರಾದ ಎಸ್.ಎನ್. ನಾಯ್ಕ ರಾಜೀ ಮಾಡಿ ಪ್ರಕರಣ ಮುಗಿಸುವ ಬಗ್ಗೆ ಕ್ರಮ ಜರುಗಿಸಿ ಫಿರ್ಯಾದುದಾರರನ್ನು ಕೋರ್ಟಿನಲ್ಲಿ ಹಾಜರ ಇಡುವಂತೆ ಸಂಬಂಧಿಸಿದ ಪೋಲೀಸರಿಗೆ ತಿಳಿಸಲಾಗಿ ಅವರು ಫಿರ್ಯಾದುದಾರರಾದ ವೆಂಕಟೇಶ ಮಾದೇವ ವೈದ್ಯ ಸಾ: ಕಬ್ಬೆ ತಾ: ಶಿರಸಿ ಇವರನ್ನು ಕೋರ್ಟಿನ ಮುಂದೆ ದಿನಾಂಕ: 1-7-2025 ರಂದು ಹಾಜರ ಇಡಲಾಗಿ ಉಭಯತರು ಅವರಲ್ಲಿ ಚರ್ಚಿಸಿ ಈ ಪ್ರಕರಣವನ್ನು ರಾಜಿಯಂತೆ ನಿಖಾಲೆ ಮಾಡಿ ಆರೋಪಿಯನ್ನು ಮಾನ್ಯ ನ್ಯಾಯಾಲಯದಿಂದ ಬಿಡುಗಡೆಗೊಳಿಸಿದರು. ಇದರಿಂದ 2ನೇ ದಿನದಲ್ಲಿ 35 ವರ್ಷಗಳ ಹಿಂದಿನ ಪ್ರಕರಣವೊಂದು ರಾಜಿ ಸಂಧಾನದ ಮೂಲಕ ನಿಖಾಲೆಯಾಯಿತು. ಇದರಿಂದ ರಾಜೀ ಸಂದಾನದ ಮಹತ್ವವನ್ನು ಸಾರಿದಂತಾಗಿದೆ. ಆರೋಪಿಪರ ಎಸ್. ಎನ್. ನಾಯ್ಕ ವಕೀಲರು ಪ್ರತಿನಿಧಿಸಿದ್ದರು.
35 ವರ್ಷಗಳ ಹಿಂದಿನ ಪ್ರಕರಣ ರಾಜಿಯಿಂದ ನಿಖಾಲೆ
