ಶಿರಸಿ: ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಲಸನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದರೆ ಅವರಿಗೆ ಮೌಲ್ಯ ವರ್ಧನೆಯ ಬಗ್ಗೆ ತಿಳಿದಿಲ್ಲ. ಅಲ್ಲಿನ ರೈತರಿಗೆ ಮೌಲ್ಯ ವರ್ಧನೆ ತರಬೇತಿ ನೀಡಿದ ನಂತರ ಅಲ್ಲಿನ ರೈತರು ಇದೀಗ ಹಲಸಿನ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಜಿಕೆವಿಕೆ ಪ್ರಾಧ್ಯಾಪಕಿ ಡಾ.ಶ್ಯಾಮಲಮ್ಮ ಹೇಳಿದರು.
ಉ.ಕ ಜಿಲ್ಲಾ ಅಡಿಕೆ ಮತ್ತು ಸಾಂಬಾರು ಬೆಳೆಗಾರರ ಸಂಘ ಶಿರಸಿ, ತೋಟಗಾರಿಕೆ ಇಲಾಖೆ ಉ.ಕ ,ಉ.ಕ ಸಾವಯವ ಒಕ್ಕೂಟ, ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘ, ಕೃಷಿ ಇಲಾಖೆ ಸಹಯೋಗದಲ್ಲಿ ಕದಂಬ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ 12ನೇ ಹಲಸಿನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಲಸಿನ ತಳಿಗಳ ರಕ್ಷಣೆ ಹಾಗೂ ಸಂಶೋಧನೆ ಮೂಲಕ ಮೌಲ್ಯ ವರ್ಧನೆ ಮಾಡುವುದೇ ಹಲಸಿನ ಮೇಳದ ಮುಖ್ಯ ಉದ್ದೇಶವಾಗಿದೆ. ರೈತರು ಪಾಲ್ಗೋಂಡರೆ ಮಾತ್ರ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎಂದರು.
ಜಿಕೆವಿಕೆ ಯಲ್ಲಿ ನರ್ಸರಿಗಳನ್ನು ನಿರ್ಮಾಣ ಮಾಡಿ ಹೊಸತಳಿಗಳನ್ನು ಬೆಳೆಯಲಾಗುತ್ತಿದೆ.ಜೊತೆಗೆ ಅಪರೂಪದ ತಳಿಗಳ ಸಂರಕ್ಷಣೆ ಮಾಡಲಾಗುತ್ತಿದೆ ಎಂದರು.
ತೋಟಗಾರಿಕೆ ಕಾಲೇಜು ವಿದ್ಯಾರ್ಥಿಗಳು ಸಂಶೋಧನೆಗೆ ಮುಂದೆ ಬಂದರೆ ಈ ಭಾಗದಲ್ಲಿ ಹಲಸಿನ ಹೊಸ ಹೊಸ ತಳಿಗಳನ್ನು ಗುರುತಿಸಲು ಸಹಾಯವಾಗುತ್ತದೆ. ಹಲಸಿನ ವೈವಿಧ್ಯತೆ ಸಾಕಷ್ಟಿದೆ. ಕದಂಬ ಮಾರ್ಕೆಟಿಂಗ್ ಸಂಸ್ಥೆಯು ಮೌಲ್ಯ ವರ್ಧನೆಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು. ಹಲಸಿನ ಬೆಳೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಸಭಲರಾಗಬಹುದು ಎಂದರು.
ಕೃಷಿ ಹಾಗೂ ತೋಟಗಾರಿಕಾ ವಿಜ್ಞಾನಿ ಡಾ.ಲಕ್ಷ್ಮೀನಾರಾಯಣ ಹೆಗಡೆ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಲಸಿನ ಕೃಷಿಯಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಲಕ್ಷ್ಮೀನಾರಾಯಣ ಹೆಗಡೆ , ಉತ್ತರ ಕನ್ನಡ ಇದೊಂದು ಚಿನ್ನದ ಗಣಿ.ಇಲ್ಲಿ ಸಾಕಷ್ಟು ಅವಕಾಶಗಳಿವೆ. ಅಡಿಕೆಗೆ ಪೂರಕ ಬೆಳೆಗಳು ಸಾಕಷ್ಟಿದೆ. ಬಹುವಾರ್ಷಿಕ ಬೆಳೆಗಳ ಸಂಶೋಧನೆಗೆ ಯಾರೂ ಮುಂದೆ ಬರುವುದಿಲ್ಲ. ಸಂಶೋಧನೆಗಳ ಅವಶ್ಯಕತೆ ಸಾಕಷ್ಟಿದೆ ಎಂದರು. ರಾಜ್ಯದಲ್ಲಿ 6 ಕೃಷಿ ವಿಶ್ವವಿದ್ಯಾಲಯಗಳಿವೆ.ಆದರೆ ಸೀಟುಗಳು ಬಹಳ ಕಡಿಮೆ ಇದೆ. ಕೃಷಿಯಲ್ಲಿ ಆಸಕ್ತಿ ತೀರಾ ಕಡಿಮೆಯಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆನಂದ ಎಂಬ ಹಲಸಿನ ತಳಿಯನ್ನು ಬಿಡುಗಡೆ ಗೊಳಿಸಲಾಯಿತು.
ಆನಂದ ತಳಿಯ ಕುರಿತು ಜಿ.ವಿ ಹೆಗಡೆ ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕದಂಬ ಮಾರ್ಕೆಟಿಂಗ್ ಸಲಹೆಗಾರ ವಿಶ್ವೇಶ್ವರ ಭಟ್, ಹಲಸಿನ ಮೇಳಗಳನ್ನು ಕಳೆದ 12ವರ್ಷಗಳಿಂದ ಆಯೋಜಿಸಲಾಗುತ್ತಿದೆ. ಈ ಮೇಳದಿಂದ ಪ್ರೆರಣಗೊಂಡು ಸಾಕಷ್ಟು ಜನರು ಹಲಸಿನ ಬೆಳೆಯನ್ನು ಬೆಳೆಯಲು ಮುಂದೆ ಬರುತ್ತಿದ್ದಾರೆ. ಹಲಸಿನ ಮೇಳದಿಂದ ಹಲವರು ಬದುಕನ್ನು ಕಟ್ಟಿಕೊಂಡಿದ್ದಾರೆ. ಹಲಸಿನ ಬೆಳೆ ಸಹ ರೈತರಿಗೆ ಆದಾಯ ತರುವ ಬೆಳೆಯಾಗಿದೆ ಎಂದರು.
ಈ ಸಂದರ್ಭದಲ್ಲಿಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಂಭುಲಿಂಗ ಹೆಗಡೆ, ಟಿ.ಎಸ್ ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ತೋಟಗಾರಿಕೆ ಇಲಾಖೆ ಅಧಿಕಾರಿ ಡಾ.ಬಿ.ಪಿ ಸತೀಶ್,ಜ್ಯೋತಿ ಬಾಯಿ ಠಾಕ್ರೆ ಮಹಾರಾಷ್ಟ್ರ, ವಿಜ್ಞಾನಿಗಳಾದ ಎ.ಎಸ್ ಚೌಹಾಣ್, ಅನಂತ ಅಶೀಸರ, ಟಿಎಂಎಸ್ ಉಪಾಧ್ಯಕ್ಷ ಜಿ.ಎಂ ಹೆಗಡೆ ಮುಳಖಂಡ , ದಿವಾಕರ ಹೆಗಡೆ ಕೆರೆಹೊಂಡ ಸೇರಿದಂತೆ ಹಲವರು ಇದ್ದರು. ನಾರಾಯಣ ಗಡಿಕೈ ಸ್ವಾಗತಿಸಿದರು. ಭಾರ್ಗವ ಹೆಗಡೆ ಶೀಗೇಹಳ್ಳಿ ನಿರ್ವಹಿಸಿದರು.