ಆಕರ್ಷಿಸಲಿರುವ ವಿವಿಧ ಕಲಾಕೃತಿ ಮಾದರಿಗಳು: ಹಲವು ಸ್ಪರ್ಧೆಗಳ ಆಯೋಜನೆ
ಶಿರಸಿ: ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಆಶ್ರಯದಲ್ಲಿ ಮಾ.1ರಿಂದ 3ರವರೆಗೆ ನಗರದ ತೋಟಗಾರಿಕಾ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಜಿಲ್ಲಾ ಮಟ್ಟದ ಫಲ ಪುಷ್ಪ ಪ್ರದರ್ಶನ ಮತ್ತು ಸಾವಯವ ಸಿರಿಧಾನ್ಯ ಮೇಳವನ್ನು ನಡೆಸಲು ಸಿದ್ಧತೆ ಕೈಗೊಂಡಿದ್ದೇವೆ ಎಂದು ತೋಟಗಾರಿಕಾ ಉಪನಿರ್ದೇಶಕ ಡಾ.ಬಿ.ಸತೀಶ ಮಾಹಿತಿ ನೀಡಿದ್ದಾರೆ.
ಅವರು ಶುಕ್ರವಾರ ನಗರದ ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಾ.1 ರಂದು ಮಧ್ಯಾಹ್ನ 4 ಗಂಟೆಗೆ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಲಿದ್ದು, ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿತಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಎಂ.ಸಿ.ಎ ಅಧ್ಯಕ್ಷ ಸತೀಶ ಸೈಲ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ್, ದಿನಕರ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರು, ಶಾಂತಾರಾಮ ಸಿದ್ದಿ, ಗಣಪತಿ ಉಳ್ವೇಕರ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಉಪಸ್ಥಿತರಿರಲಿದ್ದಾರೆ.
ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನಕ್ಕೆ ವಿವಿಧ ಯೋಜನೆಗಳಲ್ಲಿ 13.19 ಲಕ್ಷ ರೂ. ಅನುದಾನ ಲಭ್ಯವಿದ್ದು, ರೈತರನ್ನು ಮತ್ತು ಸಾರ್ವಜನಿಕರನ್ನು ಆಕರ್ಷಿಸಲು ಎಂಟಿರಿನಮ್, ಇಂಪೆಶನ್ಸ್, ವಿವಿಧ ಬಣ್ಣದ ಚೆಂಡು ಹೂವು, ಪ್ಯಾನ್ಸಿ, ವಿವಿಧ ಬಣ್ಣದ ಪೆಟುನಿಯಾ, ಸಾಲ್ವಿಯಾ, ಝಿನಿಯಾ, ವಿವಿಧ ತಳಿಯ ಸೇವಂತಿಗೆ, ಕೋಲಿಯಸ್, ಸೂರ್ಯಕಾಂತಿ, ಕೆಲೆಂಡುಲಾ, ಕೊಸ್ಮೊಸ್, ಗಜೇನಿಯಾ ಸೇರದಂತೆ 15 ಸಾವಿರ ಹೂವುಗಳ ಸಸಿಗಳನ್ನು ತಂದು ತೋಟಗಾರಿಕಾ ಉಪನಿರ್ದೇಶಕರ ಕಚೇರಿ ಆವರಣ ಮತ್ತು ಪಾಲೆಬ್ಯಾಗ್ಗಳಲ್ಲಿ ನಾಟಿ ಮಾಡಲಾಗಿದ್ದು, ೨ ತಿಂಗಳಿನಿಂದ ಪೋಷಿಸಿ ಬೆಳೆಸಲಾಗಿದೆ. ಸೇವಂತಿಗೆ, ಪೆಟುನಿಯಾ, ಚೆಂಡುಹೂವು, ಡಯಾಂತಸ್, ಜೆರೆನಿಯಂ, ಆಸ್ಟರ್, ಪಿಲೋಡೆನಡ್ರಾನ್, ಸಿಂಗೋನಿಯಂ ಸೇರಿದಂತೆ ಅಂದಾಜು 1660 ಹೂವುಗಳ ಕುಂಡಗಳಿಂದ ಅಲಂಕೃತಗೊಳಿಸಲಾಗುವುದು. ವಿಶೇಷ ಆಕರ್ಷಣೆಗಳಲ್ಲಿ ವಿವಿಧ ಹೂವುಗಳಿಂದ ತಯಾರಿಸಿದ ನಂದಿ, ಈಶ್ವರ ಲಿಂಗದ ಮಾದರಿಯ ಕಲಾಕೃತಿಗಳು, ತೋಟಗಾರಿಕೆ ಉತ್ಪನ್ನಗಳ ಮಾದರಿ, ಸಿರಿಧಾನ್ಯಗಳಿಂದ ರಚಿಸಿದ ಚೆಸ್ ಪಾರ್ಕ್, ಪದ್ಮಶ್ರೀ ಪುರಸ್ಕೃತ ದಿ.ತುಳಸಿ ಗೌಡ ಹಾಗೂ ಸುಕ್ರಿ ಗೌಡ ಅವರ ಮತ್ತು ಕುಂಭಮೇಳವನ್ನು ಬಿಂಬಿಸುವ ರಂಗೋಲಿ, ಸಾವಯವ ಸಿರಿಧಾನ್ಯಗಳ ಪ್ರದರ್ಶನ ಮಳಿಗೆಗಳು, ಪುಷ್ಪ ರಂಗೋಲಿ ಸ್ಪರ್ಧೆ, ತೋಟದ ಬೆಳೆಗಳು, ಸಾಂಬಾರು ಬೆಳೆಗಳ ಉತ್ಪನ್ನಗಳಿಂದ ರಂಗೋಲಿ ಸ್ಪರ್ಧೆ, ಬಾಳೆಯಿಂದ ತಯಾರಿಸಿದ ಖಾದ್ಯಗಳ ಸ್ಪರ್ಧೆ, “ನಮ್ಮ ಸಸಿ ನಿಮ್ಮ ಮನೆ ಅಂಗಳದಲ್ಲಿ” ಎನ್ನುವ ಪರಿಕಲ್ಪನೆಯಡಿ ಸಸ್ಯ ಸಾಮಗ್ರಿಗಳ ಮಾರಾಟ, ತೋಟಗಾರಿಕೆ ಬೆಳೆಗಳ ಮೌಲ್ಯವರ್ಧಿತ ಉತ್ಪನ್ನಗಳ ಮಳಿಗೆಗಳು, ತೋಗಾರಿಕಾ ಹಾಗೂ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿವಿಧ ಮಾದರಿಯ ಹೂವಿನ ಜೋಡಣೆ ಸ್ಪರ್ಧೆ, ವಿವಿಧ ವಿನ್ಯಾಸಗಳಲ್ಲಿ ಹೂಕುಂಡಗಳ ಜೋಡಣೆ, ವಿವಿಧ ಕಲಾಕೃತಿಗಳ ತರಕಾರಿ ಕೆತ್ತನೆ, ಮನೋರಂಜನಾತ್ಮಕ ಸೆಲ್ಪಿ ಫೊಟೋ ಪಾಯಿಂಟ್ ಗಳು, ಕೃಷಿ ಸಂಬಂಧಿತ ಇಲಾಖೆಗಳ ವಸ್ತು ಪ್ರದರ್ಶನ, ಕೃಷಿ ಪರಿಕರಗಳು ಮತ್ತು ಯಂತ್ರೋಪಕರಣದ ಮಹಿಳೆಗಳು ಇರುತ್ತವೆ ಎಂದರು.
ಮಾ.1 ರಂದು ಬೆಳಿಗ್ಗೆ 8 ರಿಂದ ಪುಷ್ಪ ರಂಗೋಲಿ ಸ್ಪರ್ಧೆ, ಸ್ಥಳೀಯವಾಗಿ ಬೆಳೆದ ತೋಟದ ಬೆಳೆಗಳು ಮತ್ತು ಸಾಂಬಾರು ಬೆಳೆಗಳ ಉತ್ಪನ್ನಗಳಿಂದ ರಂಗೋಲಿ ಸ್ಪರ್ಧೆ, ತೋಟಗಾರಿಕಾ ವಿದ್ಯಾರ್ಥಿಗಳಿಗೆ ಮತ್ತು ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿವಿಧ ಮಾದರಿಗಳ ಹೂವಿನ ಜೋಡಣೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಫೆ.2 ರಂದು ಬಾಳೆಯಿಂದ ತಯಾರಿಸಿದ ಖಾದ್ಯಗಳ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಗಳಲ್ಲಿ ಭಾಗವಹಿಸುವವರು ಫೆ.28ರೊಳಗಾಗಿ ಹೆಸರನ್ನು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಶ್ವೇತಾ ಕೊಣ್ಣೂರು ( 7892137730) ಅಥವಾ ರಜನಿ ಭಟ್ಟ (8197398900) ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕೃಷಿ ಉಪನಿರ್ದೇಶಕ ಟಿ.ಎಚ್.ನಟರಾಜ, ಹಿರಿಯ ಸಹಾಯಕ ತೋಟಗಾರಿಕಾ ಇಲಾಖೆ ನಿರ್ದೇಶ ಸತೀಶ ಹೆಗಡೆ, ಸಹಾಯಕ ನಿರ್ದೇಶಕ ಗಣೇಶ ಹೆಗಡೆ ಇದ್ದರು.