ಶಿರಸಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48 ಸೀಟ್ ಗೆಲ್ಲುವ ಮೂಲಕ ಅಭೂತಪೂರ್ವ ವಿಜಯ ದಾಖಲಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ನಾಯಕತ್ವವನ್ನು ದೆಹಲಿಯ ಜನ ಬೆಂಬಲಿಸಿದ್ದಾರೆ. ನಮ್ಮೆಲ್ಲ ನಾಯಕರು ಹಾಗೂ ದೆಹಲಿ ಬಿಜೆಪಿಯ ಕಾರ್ಯಕರ್ತರ ಶ್ರಮ ಈ ಒಂದು ಫಲಿತಾಂಶ ಬರಲು ಕಾರಣವಾಗಿದೆ ಎಂದು ಬಿಜೆಪಿ ಉತ್ತರ ಕನ್ನಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದರು. ಅವರು ಶಿರಸಿಯ ಅಂಚೆ ಕಚೇರಿ ವೃತ್ತದಲ್ಲಿ ದೆಹಲಿಯ ಬಿಜೆಪಿ ವಿಜಯದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪಕ್ಷದ ನಾಯಕತ್ವ ಹಾಗೂ ಕಾರ್ಯಕರ್ತರಿಗೆ ಗೆಲುವಿನ ಅಭಿನಂದನೆಗಳನ್ನು ಸಲ್ಲಿಸಿದರು.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಬೇಕು ಎಂದು ದೆಹಲಿಯ ಮತದಾರರು ತೀರ್ಪು ನೀಡಿದ್ದಾರೆ, ಕೇಜ್ರಿವಾಲ್ ಹಾಗೂ ಆಪ್ ಮಾಡಿರುವ ಅವಾಂತರಗಳನ್ನು ಬಿಜೆಪಿ ಸರಿಪಡಿಸಿ ಉತ್ತಮ ಆಡಳಿತವನ್ನು ಬಿಜೆಪಿ ನೀಡಲಿ ಎಂದು ಬಯಸಿ ಈ ಜನಾದೇಶ ನೀಡಿದ್ದಾರೆ ಎಂದು ಹೇಳಿದರು.
ಅಣ್ಣಾ ಹಜಾರೆ ಅವರ ಆಂದೋಲನವನ್ನು ದುರ್ಬಳಕೆ ಮಾಡಿಕೊಂಡು, ಭ್ರಷ್ಠಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಅಧಿಕಾರ ಹಿಡಿದ ಕೇಜ್ರಿವಾಲ್ ಹೇಗೆ ಸ್ವತಃ ಭ್ರಷ್ಠಾಚಾರದಲ್ಲಿ ಮುಳುಗಿದರು ಎಂಬುದನ್ನು ದೆಹಲಿಯ ಮತದಾರರು ಅರ್ಥಮಾಡಿಕೊಂಡು ಈ ತೀರ್ಪು ನೀಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಣ್ಣಾ ಹಜಾರೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ, ಕೇಜ್ರಿವಾಲ್ ಹಾಗೂ ಆಪ್ ಹೇಗೆ ಸೋಗಲಾಡಿತನ ತೋರಿದೆ ಎಂದು ಅವರು ವಿವರಿಸಿದ್ದಾರೆ ಎಂದರು. ಆಪ್ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಚುನಾವಣೆಯಲ್ಲಿ ಸೋತಿದ್ದಾರೆ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡಾ ಸೋತಿದ್ದಾರೆ ಹಾಗಾಗಿ ಈ ಗೆಲುವು ಐತಿಹಾಸಿಕ ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ ಡಬಲ್ ಜೀರೋ ಸಾಧನೆ ಮಾಡಿದೆ; ಒಂದು ಜೀರೋ ರಾಹುಲ್ ಗಾಂಧಿಗೆ, ಇನ್ನೊಂದು ಜೀರೋ ಪ್ರಿಯಾಂಕಾ ವಾದ್ರಾಗೆ ಎಂದು ಕಾಂಗ್ರೆಸ್ಸಿನ ಕಾಲೆಳೆದರು.
ಇಪ್ಪತ್ತೇಳು ವರ್ಷಗಳ ನಂತರ ಬಿಜೆಪಿ ದೆಹಲಿಯಲ್ಲಿ ಅಧಿಕಾರ ಹಿಡಿದಿದೆ, ಕಾಂಗ್ರೆಸ್ ಹಾಗೂ ಆಪ್_ನ ದುರಾಡಳಿತಗಳ ಪರಿಣಾಮದಿಂದ ದೆಹಲಿಯನ್ನು ಹೊರತಂದು, ನಮ್ಮ ಬಿಜೆಪಿಯ ಸರ್ಕಾರ ಅಲ್ಲಿ ಜನಪರವಾದ ಉತ್ತಮ ಆಡಳಿತವನ್ನು ನೀಡಲಿದೆ ಎಂದು ತಿಳಿಸಿದರು.
ಅಂಚೆ ಕಚೇರಿ ವೃತ್ತದ ಬಳಿ ಪಟಾಕಿ ಸಿಡಿಸಿ ಬಿಜೆಪಿ ಶಿರಸಿ ನಗರ ಹಾಗೂ ಗ್ರಾಮೀಣ ಮಂಡಲದ ಕಾರ್ಯಕರ್ತರು ಸಂಭ್ರಮಿಸಿದರು. ನಂತರ ತಾವೇ ಕಸವನ್ನು ಗುಡಿಸಿ ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಶಿರಸಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಶ್ರೀಮತಿ ಉಷಾ ಹೆಗಡೆ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಮಹಾಂತೇಶ ಹಾದಿಮನಿ, ಶಿರಸಿ ನಗರ ಸಭೆಯ ಅಧ್ಯಕ್ಷರಾದ ಶ್ರೀಮತಿ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷರಾದ ರಮಾಕಾಂತ ಭಟ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಕಾಂತ ಬಳ್ಳಾರಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶ್ರೀರಾಮ ನಾಯ್ಕ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾದ ರವಿಚಂದ್ರ ಶೆಟ್ಟಿ,ಗ್ರಾಮಪಂಚಾಯತ್ ಚುನಾಯಿತ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷರಾದ ನವೀನ್ ಶೆಟ್ಟಿ, ಪ್ರಮುಖರಾದ ಗಣಪತಿ ನಾಯ್ಕ, ನಂದನ ಸಾಗರ, ಶ್ರೀಮತಿ ಶಿಲ್ಪಾ ಭಾಸ್ಕರ್ ನಾಯ್ಕ, ಹರೀಶ ಪಾಲೇಕರ್, ವಿಜಯ ಶೆಟ್ಟಿ, ಆನಂದ ಗಾಂವ್ಕರ್, ರವಿ ಗಾಂವ್ಕರ್, ನಾಗರಾಜ್ ನಾಯ್ಕ, ಸುದರ್ಶನ ವೈದ್ಯ, ನಗರಸಭಾ ಸದಸ್ಯರು, ನಗರ ಹಾಗೂ ಗ್ರಾಮೀಣ ಮಂಡಲದ ಕಾರ್ಯಕರ್ತರು ಉಪಸ್ಥಿತರಿದ್ದರು.