ಶಿರಸಿ: ನಗರಸಭೆಯ ಮೀಟಿಂಗ್ ನಡೆದ ಕೆಲದಿನಗಳಲ್ಲಿಯೇ ರೋಡ್ ರೋಲರ್ ಹೋಲುವ ಪುಟಾಣಿಯಂತ್ರವೊಂದು ನಗರಸಭಾ ವ್ಯಾಪ್ತಿಯ ಗಾಂಧಿನಗರದಲ್ಲಿ ಗೋಚರಿಸಿದೆ.
ನಗರಸಭೆಯ ವ್ಯಾಪ್ತಿಯ ಎಲ್ಲಕಡೆ ಎಲ್ಲೆಂದರಲ್ಲಿ ರಸ್ತೆಯನ್ನು ಅಗೆದು ನೂತನ ನೀರು ಸರಬರಾಜು ಕಾಮಗಾರಿಯನ್ನು ಅನುಷ್ಟಾನ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ನಡೆದ ನಗರಸಭೆಯ ಮೀಟಿಂಗನಲ್ಲಿ ನೀರು ಸರಬರಾಜು ಹಾಗೂ ಒಳಚರಂಡಿ ಇಲಾಖೆಯು ಕೇಂದ್ರ ಸರಕಾರದ 68ಕೋಟಿ ರೂ. ಕಾಮಗಾರಿಯಿಂದಾಗಿ ಸಾರ್ಜನಿಕರಿಗೆ ಆಗುವ ತೊಂದರೆಯ ಬಗ್ಗೆ ಕೋಲಾಹಲವಾಗಿದೆ. ಆಶ್ಚರ್ಯ ಎಂದರೆ ಯಾರ ಗಮನಕ್ಕೂ ಬಾರದೇ ಕಾಮಗಾರಿ ನಡೆಯುತ್ತಿದೆಯೇ? ಎಂಬುದಾಗಿದೆ. ರಸ್ತೆ ನಗರಸಭೆಯದು, ಕಾಮಗಾರಿಯ ವಿವರಣೆ ಕುರಿತಾಗಿ ಯಾವ ವಾರ್ಡನಲ್ಲಿಯೂ ಯೋಜನಾ ವಿವರಣೆಯ ಬಗ್ಗೆ ಫಲಕವಿಲ್ಲ,ತೊಂದರೆಯಾದರೆ ಯಾರನ್ನು ಸಂಪರ್ಕಿಸಬೇಕು ಎಂಬ ಬಗ್ಗೆಯೂ ಮಾಹಿತಿಯಿಲ್ಲ. ಈಗಾಗಲೇ ಇರುವ ಸಾರ್ವಜನಿಕರಿಗೂ ಅರಿವಿಲ್ಲ. ಕೆಲಸಮಾಡುವ ಕಾರ್ಮಿಕರನ್ನು ಜನರು ಕೇಳಿದಾಗ ತುಸು ಮಾಹಿತಿ ದೊರೆತಿದೆ. ತೆಗೆದ ಮಣ್ಣನ್ನು ಸರಿಯಾಗಿಲ್ಲ ಎಂದು ಕೆಲಸಗಾರರನ್ನು ಕೇಳಿದಾಗ, ಮುಚ್ಚುವ ಕೆಲಸ ಬೇರೆಯವರದು, ಅವರು ಕಾಂಕ್ರೀಟ್ ಹಾಕಿ, ಮಣ್ಣು ತುಂಬಿ ನಂತರ ನೀರುಣಿಸಿ ರೋಡ್ ರೋಲರ್ ನಿಂದ ಸಮತಟ್ಟು ಮಾಡಲಾಗುವದು ಎಂದೂ ಹೇಳಿದ್ದಾರೆ ಎನ್ನಲಾಗಿದೆ. ಈ ಅಸಮರ್ಪಕ ತೋಡಿನಿಂದಾಗಿ ಶಾಲಾವಾಹನ ಹುಗಿದು ಹೋಗಿದ್ದು, ರಿಕ್ಷಾಗಳು , ಲಘುವಾಹನಗಳ ಸಂಚಾರಕ್ಕೆ ತೊಂದರೆ, ಕಿರಿದಾದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಎಲ್ಲಿಲ್ಲದ ಸಮಸ್ಯೆಯಾಗಿದೆ ಎಂಬ ಜನರ ಸಂಕಷ್ಟಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ , ಶಾಲಾಮಕ್ಕಳು, ವೃದ್ದರು ಸೇರಿ ಸಾರ್ವಜನಿಕರು ಪ್ರತಿನಿತ್ಯ ದೂಳು ತಿನ್ನುವದು ನಡೆದೇ ಇದೆ.
ಸರಿಯಾಗಿ ಇರುವ ನೀರು ಸರಬರಾಜು ಪೈಪ್ ಲೈನ್ ಹೊರತಾಗಿ ಭವಿಷ್ಯಕ್ಕಾಗಿ, ಹಗಲು-ರಾತ್ರಿ ನೀರು ಪೂರೈಕೆಯ ಕನಸಿಗಾಗಿ ಇದು ಬೇಕಿತ್ತೇ? ಇಪ್ಪತ್ತನಾಲ್ಕು ಗಂಟೆಯೂ ನೀರು ಪೂರೈಕೆ ಗಾಗಿ ಎಲ್ಲಿಂದ ನೀರು ತರುತ್ತೀರಿ? ಅದಕ್ಕೆ ತೆರಿಗೆ ಎಷ್ಟು? ಈಗಾಗಲೇ ಜನರಿಗೆ ತೆರಿಗೆ ಭಾರವಾಗಿದೆ ಎಂಬುದು ಸಾರ್ವಜನಿಕ ರ ಪ್ರಶ್ನೆಯಾಗಿದೆ.