ಶಿರಸಿ: ಇಲ್ಲಿನ ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಪ್ರಧಾನ ಕಛೇರಿಯ ಆವರಣದಲ್ಲಿ ಫೆ.7, ಶುಕ್ರವಾರ ಬೆಳಿಗ್ಗೆ ಸುಗ್ಗಿ ಸಂಭ್ರಮ-ಡಿಸ್ಕೌಂಟ್ ಮೇಳ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಜರುಗಿತು. ಉದ್ಘಾಟಕರು ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎ.ಪಿ.ಎಂ.ಸಿ ಉಪನಿರ್ದೇಶಕ ಕೆ.ಎಲ್. ಜಯಕುಮಾರ್ ಇವರು ದೀಪ ಬೆಳಗುವುದರ ಮೂಲಕ ಮೂರು ದಿನಗಳ ವಿಶೇಷ “ಏನೇ ಖರೀದಿಸಿ ಎಲ್ಲದಕ್ಕೂ ಡಿಸ್ಕೌಂಟ್” ಮೇಳವನ್ನು ಉದ್ಘಾಟಿಸಿದರು. ಟಿ.ಎಸ್.ಎಸ್. ವತಿಯಿಂದ ಆಯೋಜಿಸಿರುವ ಈ ಡಿಸ್ಕೌಂಟ್ ಮೇಳವು ಯಶಸ್ವಿಯಾಗಲಿ ಎಂದು ಹಾರೈಸುವುದರ ಜೊತೆಗೆ ಎ.ಪಿ.ಎಂ.ಸಿ. ಪರವಾಗಿ ಅಗತ್ಯ ಸಹಕಾರಗಳನ್ನು ನೀಡುವುದಾಗಿ ತಿಳಿಸಿದರು.
ಟಿ.ಎಸ್.ಎಸ್. ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸುಗ್ಗಿ ಸಂಭ್ರಮದ ಉದ್ದೇಶ, ಪ್ರಯೋಜನಗಳ ಕುರಿತು ಸಭೆಗೆ ಪರಿಚಯಿಸಿ ಡಿಸ್ಕೌಂಟ್ ಮೇಳದ ಪ್ರಯೋಜನ ಸದಸ್ಯರಿಗೆ ಸಾರ್ವಜನಿಕರಿಗೆ ಲಭಿಸಲಿ ಎಂದು ಆಶಿಸಿದರು.
ಸುಗ್ಗಿ ಸಂಭ್ರಮವನ್ನು ವ್ಯಾಪಾರ ಹೆಚ್ಚಿಸುವ ನಿಟ್ಟಿನಲ್ಲಿ ಆಯೋಜಿಸಿಲ್ಲ. ಇದನ್ನೊಂದು ಹಬ್ಬದಂತೆ ಸಾಂಸ್ಕೃತಿಕ ಕರ್ಯಕ್ರಮಗಳೊಂದಿಗೆ ಆಚರಿಸುತ್ತಿದ್ದೇವೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಮಹತ್ವದ್ದು, ಸದಸ್ಯರು-ಸಿಬ್ಬಂದಿಗಳಲ್ಲಿ ಅನೇಕರು ಕಲಾವಿದರಿದ್ದು, ಅವರನ್ನು ಪ್ರೋತ್ಸಾಹಿಸುದರೊಂದಿಗೆ ಸಂಘದಲ್ಲಿ ಒಳ್ಳೆಯ ರಚನಾತ್ಮಕ ಕರ್ಯಕ್ರಮಗಳಿಗೆ ಯಾವತ್ತೂ ಆಡಳಿತ ಮಂಡಳಿಯ ಬೆಂಬಲ ವಿರುತ್ತದೆ ಎಂದು ಹೇಳಿದರು. ನಮ್ಮಲ್ಲಿ ಮೊದಲೇ ಏರಿಸಿ ನಂತರ ದರ ಇಳಿಸಿ ರಿಯಾಯತಿ ದರದ ಮಾರಾಟ ಎಂಬ ನಾಟಕವಲ್ಲ- ಹೋಲ್ಸೇಲ್ ದರದಲ್ಲಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ. ವಿವಿಧ ದರ್ಜೆಯ ಉತ್ಪನ್ನಗಳಿಗೆ ಕ್ವಾಲಿಟಿಗನುಗುಣವಾಗಿ ದರ ವ್ಯತ್ಯಾಸ ಸ್ವಾಭಾವಿಕ ಎಂದರು. ಸಾಹುಕಾರೀ ಮತ್ತು ಸಹಕಾರಿ ವ್ಯವಹಾರದಲ್ಲಿನ ಪ್ರಮುಖ ಅಂಶವೆಂದರೆ ಸಹಕಾರಿ ಸಂಘದಲ್ಲಿ ವ್ಯವಹರಿಸುವ ಗ್ರಾಹಕ ಸದಸ್ಯರಿಗೆ ವಿಕ್ರಿ ಪ್ರೋತ್ಸಾಹಧನ/ರಿಬೇಟ್ನ ಲಾಭದ ಜೊತೆ ಇನ್ನಿತರ ಅನುಕೂಲಗಳಿವೆ ಎಂದರು. ಟಿ.ಎಸ್.ಎಸ್. ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ, ಟಿ.ಎಸ್.ಎಸ್. ನ ನಿರ್ದೇಶಕರು, ಸಲಹಾ ಸಮತಿ ಸದಸ್ಯರು, ಗ್ರಾಹಕ ಸದಸ್ಯರು, ಸಿಬ್ಬಂದಿಗಳು, ಕರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ಕಂಪನಿ ಪ್ರತಿನಿಧಿಗಳು, ಪತ್ರಕರ್ತರು, ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳಾದ ಶ್ರೀಮತಿ ಲತಾ ಭಟ್ಟ, ವಿದ್ಯಾ ಹೆಗಡೆ ಹಾಗೂ ಪೃಥ್ವಿ ಹೆಗಡೆ ಪ್ರಾರ್ಥನೆ ನೆರವೇರಿಸಿದರು. ಸಂಘದ ನೌಕರರಾದ ಗೋಪಾಲ ಹೆಗಡೆ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಟಿಎಸ್ಎಸ್ ಸುಗ್ಗಿ ಸಂಭ್ರಮ- ಡಿಸ್ಕೌಂಟ್ ಮೇಳಕ್ಕೆ ಚಾಲನೆ
