ಸಿದ್ದಾಪುರ: ಬಿಜೆಪಿ ಪ್ರಮುಖ ಅನಂತಮೂರ್ತಿ ಹೆಗಡೆ ಶಿರಸಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ರಾಜ್ಯದ 224 ಶಾಸಕರನ್ನು ಮುಖ್ಯವಾಗಿ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರ ಕುರಿತು ಅವಹೇಳನಕಾರಿಯಾಗಿ ಹೇಳೀಕೆ ನೀಡಿರುವುದು ಖಂಡನೀಯ. ಈ ಹೇಳಿಕೆ ಕುರಿತು ಅವರು ಕ್ಷಮೆ ಯಾಚಿಸದಿದ್ದಲ್ಲಿ ನಾವು ತೀವ್ರವಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಪ್ರಮುಖ ವಿ.ಎನ್.ನಾಯ್ಕ ಬೇಡ್ಕಣಿ ಎಚ್ಚರಿಸಿದರು.
ಅವರು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ನಾಲ್ಕು ವರ್ಷಗಳ ಹಿಂದೆ ಅನಂತಮೂರ್ತಿ ಹೆಗಡೆ ಎಂಬ ಹೆಸರನ್ನೇ ನಾವು ಕೇಳಿರಲಿಲ್ಲ. ಧಿಡೀರ್ ಆಗಿ ಆತುರಗೆಟ್ಟವನಿಗೆ ಬುದ್ಧಿ ಮಂಕು ಎನ್ನುವ ಹಾಗೆ ನಾನೊಬ್ಬ ಶಾಸಕನಾಗಬೇಕು ಅಥವಾ ಎಂಪಿ ಆಗಬೇಕು, ಒಬ್ಬ ಜನಪ್ರತಿನಿಧಿ ಆಗಬೇಕು ಎಂಬ ಆತುರದಲ್ಲಿ ಬಾಯಿಗೆ ಬಂದಂತೆ ಹೇಳಿಕೆಗಳನ್ನು ಕೊಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದೇನು ಪ್ರಥಮವಲ್ಲ. ಆದರೆ ಈ ಸಾರಿ ವಿಶೇಷವಾಗಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವಂತಹ ಈ ದೇಶದಲ್ಲಿ ಕರ್ನಾಟಕ ರಾಜ್ಯದ ಮತಬಾಂಧವರು ನಮ್ಮ 224 ಶಾಸಕರನ್ನು ಆಡಳಿತ ನಡೆಸಬೇಕೆಂದು ಪ್ರಜಾಪ್ರಭುತ್ವದ ಮಾದರಿಯಲ್ಲಿ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಈ ರಾಜ್ಯದ ಜನತೆ ಇಟ್ಟಂತ ವಿಶ್ವಾಸವನ್ನು ಪ್ರಶ್ನಿಸತಕ್ಕಂಥ ಕೆಲಸವನ್ನು ಮಾಡಿದ್ದಾರೆ. ಹಾಗಾಗಿ ಈ ಮನುಷ್ಯನಿಗೆ ಬುದ್ಧಿ ಇದೆಯಾ ಇಲ್ಲವೋ ಅಥವಾ ಆತುರದಲ್ಲಿ ಏನಾದ್ರೂ ಹೇಳಿಕೆ ಕೊಟ್ಟರೆ ಸುಮ್ಮನಾಗುತ್ತಾರೆ ಎಂದು ಭಾವಿಸಿರಬಹುದು. ಅದನ್ನು ನಾವು ಈ ಪತ್ರಿಕಾಗೋಷ್ಠಿಯ ಮುಖಾಂತರ ಖಂಡಿಸುತ್ತೇವೆ.ನಮ್ಮ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕರವರು ಅತ್ಯಂತ ಪ್ರಾಮಾಣಿಕವಾಗಿ ಸಹೃದಯದಿಂದ ಜನರೊಂದಿಗೆ ಅತ್ಯಂತ ನಿರಂತರವಾದ ಸಂಪರ್ಕ ಇಟ್ಟುಕೊಂಡು ಪ್ರತಿಯೊಂದು ಜನರೊಂದಿಗೆ ಹೇಳಿ ಕೇಳಿ ಸರ್ಕಾರದೊಂದಿಗೆ, ಅಧಿಕಾರಿಗಳೊಂದಿಗೆ, ಮಂತ್ರಿಗಳ ಜೊತೆಗೆ ಪ್ರಯತ್ನ ಮಾಡಿ ಹೆಚ್ಚಿನ ಕೆಲಸವನ್ನು ತರತಕ್ಕಂಥದನ್ನು ನಾವು ನೋಡಿದ್ದೇವೆ. ಈ ಹೇಳಿಕೆ ಕುರಿತು ಈಗಾಗಲೇ ನಮ್ಮ ಪಕ್ಷದ ವತಿಯಿಂದ ಶಿರಸಿಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ಅವರು ಹೇಳಿಕೆ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಕೂಡ ಇನ್ನು ಬೃಹತ್ತರವಾದ ಪ್ರತಿಭಟನೆ ಮೂಲಕ ಎಚ್ಚರಿಸಬೇಕಾದ ಕೆಲಸ ಮಾಡಬೇಕಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಆರ್.ನಾಯ್ಕ, ಘಟಕ ಅಧ್ಯಕ್ಷ ಮಾರುತಿ ಕಿಂದ್ರಿ, ಪಪಂ ನಾಮನಿರ್ದೇಶಿತ ಸದಸ್ಯರಾದ ಕೆ.ಟಿ.ಹೊನ್ನೆಗುಂಡಿ, ಕಿರಣ ಕಾನಡೆ, ಮುಖಂಡರಾದ ಸೀತಾರಾಮ ಗೌಡ, ಉಮೇಶ ನಾಯ್ಕ ಕಡಕೇರಿ ಅನಂತಮೂರ್ತಿ ಹೆಗಡೆಯವರ ಹೇಳಿಕೆಯನ್ನು ಖಂಡಿಸಿದರು. ಬಾಲಕೃಷ್ಣ ನಾಯ್ಕ, ನಟರಾಜ ಜಿಡ್ಡಿ, ಅಣ್ಣಪ್ಪ ನಾಯ್ಕ ಶಿರಳಗಿ ಮುಂತಾದವರಿದ್ದರು.