ಬೆಂಗಳೂರು: ನಗರದ ಚಾಮರಾಜಪೇಟೆಯ ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಮಹಾಸ್ವಾಮಿಗಳ ಚಾತುರ್ಮಾಸ್ಯ ಬೆಂಗಳೂರಿನ ಶ್ರೀಮಠದಲ್ಲಿ ನಡೆಯಲಿದ್ದು, ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನವಾದ ಜು.19, ಗುರುವಾರದಿಂದ ಆರಂಭಗೊಳ್ಳಲಿದೆ.
ಅಂದು ಬೆಳಿಗ್ಗೆ ಶ್ರೀಕೃಷ್ಣ ಪಂಚಕಾದಿ ವ್ಯಾಸ ಪೂಜೆಯೊಂದಿಗೆ ಶ್ರೀಗಳು ಚಾತುರ್ಮಾಸ್ಯ ವ್ರತ ಆರಂಭಿಸಲಿದ್ದು, ಹತ್ತು ಹಲವು ಧಾರ್ಮಿಕ ವಿಧಿ ವಿಧಾನ ಕಾರ್ಯಗಳು ಜರುಗಲಿದ್ದು, ಅಪರಾಹ್ನ 1.00 ಗಂಟೆಗೆ ಶ್ರೀಗಳಿಂದ ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ವಿತರಣೆ ನಡೆಯಲಿದೆ.
ಶ್ರೀ ಶಂಕರ ಭಗವತ್ಪಾದರಿಂದ ಪ್ರತಿಷ್ಠಾಪಿತ ಪೀಠ ಪರಂಪರೆಯ ಶ್ರೀಮಠದ ಅವಿಚ್ಛಿನ್ನ ಪರಂಪರಾ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಹನ್ನೊಂದನೆಯ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ಶ್ರೀವಿದ್ಯಾವಿಶ್ವೇಶ್ವರ ಭಾರತೀ ಮಹಾಸ್ವಾಮಿಗಳವರ ಸನ್ಯಾಸ ಹಾಗೂ ಪೀಠಾರೋಹಣದ ಚತುರ್ಥ ವಾಷಿಕೋತ್ಸವದ ಸಮಾರಂಭವು ಸಹ ಇದೇ ಸಂದರ್ಭದಲ್ಲಿ ಜರುಗಲಿದೆ. ಭಕ್ತ ಮಹಾಜನರು ಶ್ರೀಗಳಿಗೆ ಭಿಕ್ಷಾವಂದನೆ ಹಾಗೂ ಪಾದಪೂಜಾದಿ ಸೇವೆಗಳನ್ನು ಸಮರ್ಪಿಸಲಿದ್ದಾರೆ.
ಭಾದ್ರಪದ ಮಾಸದ ಶುಕ್ಲ ಪಕ್ಷದ ಸೆಪ್ಟಂಬರ್ 7 ರ ಅನಂತನ ಹುಣ್ಣಿಮೆ ದಿನದಂದು ಜಗದ್ಗುರುಗಳು ಸೀಮೊಲ್ಲಂಘನ ಮಾಡುವ ಮೂಲಕ ಚಾತುರ್ಮಾಸ್ಯ ವ್ರತ ಮುಕ್ತಾಯಗೊಳಿಸಲಿದ್ದಾರೆ. ಚಾತುರ್ಮಾಸ್ಯದ ವ್ರತಾಚರಣೆ ಸಂದರ್ಭದಲ್ಲಿ ಜಗದ್ಗುರುಗಳು ವಿವಿಧ ಧಾರ್ಮಿಕ ಹೋಮ-ಹವನ, ಅನುಷ್ಠಾನ, ಪ್ರವಚನಾದಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ.
ಎರಡು ತಿಂಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಮಹಾಸ್ವಾಮೀಜಿ ಚಾಮರಾಜ ಪೇಟೆಯ 5ನೇ ಮುಖ್ಯರಸ್ತೆಯ ದೇವನಾಥಾಚಾರಿ ಬೀದಿಯಲ್ಲಿರುವ ಶ್ರೀಮಠದಲ್ಲಿಯೇ ವಾಸ್ತವ್ಯವಿದ್ದು ಭಕ್ತರಿಗೆ ದರ್ಶನ ನೀಡಲಿದ್ದಾರೆ. ಗುರುವಾರದಿಂದ ಆರಂಭಗೊಳ್ಳುವ ಚಾತುರ್ಮಾಸ್ಯ ವ್ರತ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಏರ್ಪಡಿಸಲಾಗಿದ್ದು ಭಕ್ತಾದಿಗಳು ಪಾಲ್ಗೊಳ್ಳುವಂತೆ ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಮಹೇಶ ವಾಳ್ವೇಕರ್ ವಿನಂತಿಸಿದ್ದಾರೆ.