ಹಳಿಯಾಳ : ಪ್ರಧಾನಿ ನರೇಂದ್ರ ಮೋದಿ ಅವರ 11 ವರ್ಷಗಳ ಅಭಿವೃದ್ಧಿ ಕುರಿತು ವಿಕಸಿತ ಭಾರತದ ಮಂಡಲ ಮಟ್ಟದ ಕಾರ್ಯಾಗಾರವು ನಗರದ ಶ್ರೀ ರಾಮಚಂದ್ರ ಸಮುದಾಯ ಭವನದಲ್ಲಿ ನಡೆಯಿತು.
ತಾಯಿ ಭಾರತಮಾತೆ, ಪಂಡಿತ್ ದೀನದಯಾಳ ಉಪಾಧ್ಯಾಯ ಹಾಗೂ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಮಾಜಿ ವಿ.ಪ ಸದಸ್ಯರಾದ ಎಸ್.ಎಲ್. ಘೋಟ್ನೇಕರ ಸ್ವಾರ್ಥಕ್ಕೆ ಆಸೆ ಪಡದೇ, ನಿಸ್ವಾರ್ಥದಿಂದ ಭಾರತೀಯರ ಉಜ್ವಲ ಭವಿಷ್ಯಕ್ಕೆ ಹಗಲಿರುಳು ಎನ್ನದೆ ನಿರಂತರ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಇಡೀ ವಿಶ್ವವೇ ಕಂಡ ಅಪರೂಪದ ಪ್ರಜಾಪ್ರಭುತ್ವ ಆಳ್ವಿಕೆಯಾಗಿದೆ. ಕೇಂದ್ರ ಸರ್ಕಾರ ಬಡವರ, ದೀನದಲಿತರ ಏಳಿಗೆಗೆ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ದಶಕವನ್ನು ಪೂರೈಸಿ ಸಾಧನೆ ಮಾಡಿದೆ ಎಂದು ತಿಳಿಸಿದರು.
ಮಾಜಿ ಶಾಸಕರಾದ ಸುನೀಲ್ ಹೆಗಡೆ ಮಾತನಾಡಿ ಸದಾಕಾಲ ರಾಷ್ಟ್ರದ ಹಿತಕ್ಕಾಗಿ ದುಡಿಯುತ್ತಿರುವ ಪ್ರಧಾನ ಮಂತ್ರಿ ಮೋದಿ ಜೀ ಅವರು ಭಾರತಾಂಬೆಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುತ್ತಿರುವ ವಿಚಾರ ಎಲ್ಲೆಡೆ ಪಸರಿಸಬೇಕಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಾಜಿ ನರಸಾನಿ ಮಾತನಾಡಿ ಮೋದಿ ಸರ್ಕಾರದ 11 ವರ್ಷದ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಪ್ರಮುಖವಾಗಿ 4 ಕಾರ್ಯಕ್ರಮಗಳ ಆಯೋಜನೆ, ಮಂಡಲ ತಂಡಗಳ ರಚನೆ ಹಾಗೂ ಮುಂದಿನ ದಿನಗಳಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ವಿಠ್ಠಲ ಸಿದ್ಧನ್ನವರ, ಜಿಲ್ಲಾ ಪದಾಧಿಕಾರಿಗಳಾದ ಗಣಪತಿ ಕರಂಜೇಕರ, ಬಸಣ್ಣಾ ಕುರುಬಗಟ್ಟಿ, ಹನುಮಂತ ಚಿನಗಿನಕೊಪ್ಪ, ಹಿರಿಯರಾದ ಮಂಗೇಶ ದೇಶಪಾಂಡೆ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಿ.ಎಂ.ಪಾಟೀಲ್, ಸಂತೋಷ ಘಟಕಾಂಬಳೆ, ಪ್ರಮುಖರಾದ ತಾನಾಜಿ ಪಟ್ಟೇಕರ, ವಿಜಯ ಬೋಬಾಟಿ, ಯಲ್ಲಪ್ಪ ಹೊನ್ನೋಜಿ, ಆನಂದ ಕಂಚನಾಳಕರ, ರಾಘವೇಂದ್ರ ಛಲವಾದಿ, ಕಾರ್ಯಕರ್ತರು, ಮೊದಲಾದವರು ಇದ್ದರು.