ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ಹುಬ್ಬಳ್ಳಿಯ ಇಶಾ ಹೆಲ್ತ್ ಕೇರ್ ಇವರ ಸಹಯೋಗದೊಂದಿಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಶಿಬಿರಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಾ, ನಮ್ಮೆಲ್ಲರ ಜೀವನದ ಯಶಸ್ವಿಗೆ ಬಹುಮೂಲ್ಯ ಕೊಡುಗೆ ಸದೃಢ ಆರೋಗ್ಯ. ಆರೋಗ್ಯ ಸದೃಢವಾಗಿದ್ದರೆ ಅಂದುಕೊಂಡಿದ್ದನ್ನು ಸಾಧಿಸಲು ಸುಲಭ ಸಾಧ್ಯ. ನಾವು ಏನನ್ನಾದರೂ ಸಾಧನೆ ಮಾಡಬೇಕಾದರೆ ಹಾಗೂ ನೆಮ್ಮದಿಯ, ಸಂತೃಪ್ತಿಯ ಜೀವನ ಮಾಡಬೇಕಾದರೆ ಸದೃಢ ಆರೋಗ್ಯ ಅವಶ್ಯ. ಆರೋಗ್ಯವಂತ ಸಮಾಜದಿಂದ ಮಾತ್ರ ಸದೃಢ ರಾಷ್ಟç ನಿರ್ಮಾಣ ಸಾಧ್ಯ. ಈ ಭಾಗದ ಜನತೆಗೆ ಅನುಕೂಲವಾಗಲೆಂದು ಈ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕಾಗದ ಕಾರ್ಖಾನೆಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜ್ಞಾನದೀಪ್ ಗಾಂವಕರ ಅವರು ಮಾತನಾಡಿ ಆಸ್ಟಿಯೊಪೊರೊಸಿಸ್ ಅಂದರೆ ಮೂಳೆ ತೆಳುವಾಗಿ ಮತ್ತು ದುರ್ಬಲವಾಗಿ ಮೂಳೆ ಮುರಿತಕ್ಕೆ ಕಾರಣವಾಗುವ ಒಂದು ಸದ್ದಿಲ್ಲದ ಸ್ಥಿತಿ. ದೇಹವು ಹೊಸ ಮೂಳೆಗಳ ರಚನೆ ರೂಪಿಸಲು ವಿಫಲವಾದರೆ ಅಥವಾ ಹಳೆಯ ಮೂಳೆಗಳು ಹೆಚ್ಚಿನ ಸಂಖ್ಯೆ ಯಲ್ಲಿ ನಾಶವಾದರೆ ಈ ರೊಗವು ಸಂಭವಿಸುತ್ತದೆ. ದೇಹದ ಮೇಲೆ ಯಾವುದೇ ಗಾಯವಿಲ್ಲದೇ ಅತ್ಯಂತ ಸುಲಭದಲ್ಲಿ ಕಂಡು ಹಿಡಿಯುವ ವಿಧಾನವೇ ಮೂಳೆಯ ಖನಿಜಾಂಶಗಳ ಸಾಂದ್ರತೆ ಪರೀಕ್ಷೆಯಾಗಿದೆ ಎಂದರು.
ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ರಾಘವೇಂದ್ರ ಜೆ.ಆರ್ ಮತ್ತು ರಾಜೇಶ ತಿವಾರಿ ಅವರು ಈ ಶಿಬಿರದ ಉದ್ದೇಶವನ್ನು ವಿವರಿಸಿ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯೂ ಜನರಿಗೆ ಅತಿ ಅವಶ್ಯವಾಗಿ ಬೇಕಾಗಿರುವ ಆರೋಗ್ಯ ಶಿಬಿರಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ. ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಅವರ ಮಾರ್ಗದರ್ಶನದಡಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಗದ ಕಾರ್ಖಾನೆಯ ತಾಂತ್ರಿಕ ವಿಭಾಗದ ಅಧ್ಯಕ್ಷ ಅನೂಜ್ ತಯಾಳ್, ಹಣಕಾಸು ವಿಭಾಗದ ಹಿರಿಯ ಉಪಾಧ್ಯಕ್ಷ ಅಶೋಕ್ ಶರ್ಮ, ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕ ವಿಜಯ ಮಹಾಂತೇಶ, ಡಾ.ಜಿ.ಡಿ.ಭಂಡಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ನಗರಸಭಾ ಸದಸ್ಯ ಅನಿಲ್ ನಾಯ್ಕರ, ಇಶಾ ಹೆಲ್ತ್ ಕೇರ್ ತಜ್ಞರು, ಕಾಗದ ಕಾರ್ಖಾನೆಯ ಆಸ್ಪತ್ರೆಯ ವೈದ್ಯರುಗಳಾದ ಡಾ. ಸುಮೀತ್ ಅಗ್ನಿಹೋತ್ರಿ, ಡಾ.ಪ್ರಿಯಾಂಕಾ, ಡಾ. ನಿತೇಶ್, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಖಲೀಲ್ ಕುಲಕರ್ಣಿ, ಕಾಗದ ಕಾರ್ಖಾನೆಯ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳು, ಕಾಗದ ಕಾರ್ಖಾನೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಒಟ್ಟು 345 ಜನರು ಭಾಗವಹಿಸಿ, ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.