ಶಿರಸಿ: ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಅಸಂವಿಧಾನಿಕ ಪದ ಬಳಸಿ ನಿಂದನೆ ಮಾಡಿರುವದನ್ನು ನಾವೆಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಹಳ ಕಠೋರವಾಗಿ ಖಂಡಿಸುತ್ತೇವೆ ಎಂದು ಕೆಪಿಸಿಸಿ ಸಂಯೋಜಕ ನಾಗರಾಜ ಮಡಿವಾಳ ಹೇಳಿದ್ದಾರೆ.
ಒಬ್ಬ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿ ನಾಲಿಗೆ ಮೇಲೆ ಹಿಡಿತವಿಲ್ಲದೆ ಅರೆ ಹುಚ್ಚನಂತೆ ಮೂರ್ಖತನದ ಹೇಳಿಕೆ ನೀಡುವದು ಎಷ್ಟರ ಮಟ್ಟಿಗೆ ಸರಿ? ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡುವದರಿಂದಲೇ ತಾನೊಬ್ಬ ನಾಯಕ ಎಂದು ಅರಿತಿರುವ ನಾರಾಯಣಸ್ವಾಮಿಯ ಹೇಳಿಕೆ ಖಂಡನಿಯವಾಗಿದೆ. ಒಂದೇ ಒಂದು ಚುನಾವಣೆ ಎದುರಿಸದ ಬಿಜೆಪಿಯ ಮೇಲ್ಮನೆ ವಿಪಕ್ಷ ನಾಯಕರಿಗೆ, ಸತತವಾಗಿ ಮೂರು ಬಾರಿ ಜನರ ವಿಶ್ವಾಸ ಪಡೆದು ಗೆದ್ದಿರುವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡುವ ಯಾವ ಯೋಗ್ಯತೆಯೂ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಮತ್ತೆ ಪ್ರಿಯಾಂಕ್ ಖರ್ಗೆ ಅವರಿಗೆ ಮತ್ತು ಅವರ ಕುಟುಂಬದವರಿಗೆ ನಿಂದಿಸಿ ಮಾತಾಡುವುದೇ ಚೆಲುವಾದಿ ನಾರಾಯಣಸ್ವಾಮಿಯ ಯೋಗ್ಯತೆ.
ಇಂಥ ಅನಾಗರೀಕ ಮತ್ತು ಯೋಗ್ಯವಲ್ಲದ ವ್ಯಕ್ತಿಯನ್ನು ವಿಧಾನ ಪರಿಷತ್ ಸ್ಥಾನದಲ್ಲಿ ಮುಂದುವರಿಸುತ್ತಿರುವ ಬಿಜೆಪಿಗೆ ನಾಚಿಕೆಯಾಗಬೇಕು.
ಮಲ್ಲಿಕಾರ್ಜುನ್ ಖರ್ಗೆ ಅವರ ಕೃಪಾಕಟಾಕ್ಷದಲ್ಲಿ ಬೆಳೆದು ಅನೇಕ ಹುದ್ದೆಗಳನ್ನು, ಅಧಿಕಾರವನ್ನು ಅನುಭವಿಸಿ ಉಂಡ ಮನೆಗೆ ದ್ರೋಹ ಬಗೆದವ ನಾರಾಯಣಸ್ವಾಮಿ.
ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸುಖಾ ಸುಮ್ಮನೆ ಆರೋಪ ಮಾಡುವುದು ಅವರನ್ನು ನಿಂದಿಸುವುದು ನಿರಂತರವಾಗಿ ಮಾಡುತ್ತಿದ್ದು, ಹೀಗೆ ನಿಂದನೆ ಮಾಡುವುದು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ನಾವೆಲ್ಲ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.