ಶಿರಸಿ: ಸಂಘವನ್ನು ತಮ್ಮ ವಯಕ್ತಿಕ ಲಾಭಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿರುವ ಈರ್ವರು ನಿರ್ದೇಶಕರನ್ನು ವಜಾಗೊಳಿಸಿರುವ ನ್ಯಾಯಾಲಯದ ಆದೇಶವನ್ನು ಈ ಕೂಡಲೇ ಜಾರಿ ಮಾಡುವಂತೆ ಆಗ್ರಹಿಸಿ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಸದಸ್ಯ ಶಾಂತಕುಮಾರ ಭಟ್ಟ ಆಗ್ರಹಿಸಿದರು.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸೊಸೈಟಿಯ ಹಿಂದಿನ ಅಧ್ಯಕ್ಷ ಸುಬ್ರಾಯ ನಾರಾಯಣ ಭಟ್ಟ ಗಡಿಹಿತ್ಲು ಹಾಗು ನಿರ್ದೇಶಕ ವಿವೇಕ ಸುಬ್ರಾಯ ಭಟ್ಟ ಗಡಿಹಿತ್ಲು ಇವರ ವಿರುದ್ಧ ಸಂಘದಲ್ಲಿ ಹಾನಿ ಮಾಡಿದ ಆರೋಪದ ಮೇಲೆ ಸಹಕಾರ ಸಂಘದ ಕಾಯ್ದೆ ಕಲಂ 29(ಸಿ) ಅನ್ವಯ ಸಹಾಯಕ ನಿಬಂಧಕರು 2024 ಅಕ್ಟೋಬರ್ 11ರಂದು ಈರ್ವರನ್ನು ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆ. ಈ ತೀರ್ಪನ್ನು ಪ್ರಶ್ನಿಸಿ ಎದುರುದಾರರು ಉಪನಿಬಂಧಕರಲ್ಲಿ ಮೇಲ್ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಅಕ್ಟೋಬರ್ 27 ರಂದು ಸಹಾಯಕ ನಿಬಂಧಕರ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆ ಪಡೆದಿದ್ದರು. ಉಪನಿಬಂಧಕರ ಆದೇಶವನ್ನು ಪ್ರಶ್ನಿಸಿ, ಧಾರವಾಡದ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದು, ಈ ವಿಷಯಕ್ಕೆ ಸಂಬಂಧಿಸಿ ಕಳೆದ ಏ.29 ರಂದು ಹೈಕೋರ್ಟ್ ಸಹಕಾರಿ ಉಪನಿಬಂಧಕರ ಆದೇಶವನ್ನು ರದ್ದುಗೊಳಿಸಿ ಆದೇಶ ನೀಡಿದೆ ಎಂದರು.
ಈಗ ಹೈಕೋರ್ಟ್ ಆದೇಶ ನೀಡಿ ತಿಂಗಳು ಒಂದಾದ ಮೇಲೂ ಇನ್ನೂ ಅನರ್ಹಗೊಂಡಿರುವ ಈರ್ವರು ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ. ಇದು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಹೀಗಿದ್ದರೂ ಸಹ ಸಂಸ್ಥಯಲ್ಲಿ ತಮ್ಮ ಅಧಿಕಾರ ಬಳಸಿ ಹಣಕಾಸಿನ ವ್ಯವಹಾರಗಳಿಗೆ ಮತ್ತು ಇನ್ನಿತರ ವ್ಯವಹಾರಗಳಿಗೆ ಸಹಿ ಮಾಡುತ್ತಿದ್ದಾರೆ. ಇದು ಕಾನೂನು ಬಾಹಿರವಾಗಿರುವುದರಿಂದ, ಈ ಕುರಿತಂತೆ ಈಗಾಗಲೇ ಸೂಕ್ತ ಕ್ರಮವಿಡಲು ಸಹಾಯಕ ನಿಬಂಧಕರಿಗೆ ಮತ್ತು ಕೆಡಿಸಿಸಿ ಬ್ಯಾಂಕ್ ಗೆ ಮನವಿ ನೀಡಲಾಗಿದೆ. ಈಗಾಗಲೇ ಅವರನ್ನು ವಜಾಗೊಳಿಸುವ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಈ ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಜಿಲ್ಲೆಯ ಪ್ರಭಾವಿಗಳ ಹೆಸರನ್ನೂ ಇವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಇದೂ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.
ಈ ವೇಳೆ ದೊಡ್ಮನೆ ಗ್ರೂಪ್ ಗ್ರಾಮಗಳ ಸಹಕಾರಿ ಸಂಘದ ಸದಸ್ಯರಾದ ಪ್ರಕಾಶ ರಾಮಚಂದ್ರ ಹೆಗಡೆ, ಆನಂದ ಗೌಡ ದೊಡ್ಮನೆ, ಮಹೇಶ ನಾಯ್ಕ ದೊಡ್ಮನೆ ಇದ್ದರು.