ದಾಂಡೇಲಿ : ಗುತ್ತಿಗೆದಾರ ಆರ್.ಡಿ.ಜನ್ನು ಅವರ ಸಾವಿಗೆ ಸರಕಾರದ ಅವ್ಯವಸ್ಥೆಯೇ ಕಾರಣವೆಂದು ಕುಟುಂಬದವರ ಹೇಳಿಕೆಯ ಕುರಿತು ಮತ್ತು ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಗರಸಭೆಯ ಮುಂಭಾಗದಲ್ಲಿ ಬುಧವಾರ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಗುತ್ತಿಗೆದಾರರು ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತರಾದ ವಿವೇಕ ಬನ್ನೆ ಅವರ ಮೂಲಕ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ನೀಡಿತು. ಮನವಿಯಲ್ಲಿ ಗುತ್ತಿಗೆದಾರರಾದ ಆರ್.ಡಿ.ಜನ್ನು ಅವರು ತೀವ್ರ ಹೃದಯಘಾತದಿಂದ ಮರಣ ಹೊಂದಿದ್ದು, ಅದಕ್ಕೆ ಕಾರಣ ಕಾಮಗಾರಿಗಳ ಬಿಲ್ ಬಟವಾಡೆಯಾಗದಿರುವುದೇ ಆಗಿದೆ. ನಾಡಕಚೇರಿ ಕಟ್ಟಡ ನಿರ್ಮಾಣವಾಗಿ ಏಳು ವರ್ಷ ಕಳೆದರೂ ಕಾಮಗಾರಿಯ ಬಿಲ್ ಪೂರ್ಣ ಬಟವಾಡೆಯಾಗಿಲ್ಲ. ಜೋಯಿಡಾ ತಾಲೂಕಿನ ಜಗಲ್ಪೇಟ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಂಬೋಲಿಯಲ್ಲಿ ನಿರ್ವಹಿಸಿದ ರಸ್ತೆ ಕಾಮಗಾರಿಯ ಬಿಲ್ 35 ರಿಂದ 40 ಲಕ್ಷ ರೂಪಾಯಿ ಹಣ ಕಳದೆರಡು ವರ್ಷಗಳಿಂದ ಬಾಕಿ ಇದೆ. ನಗರಸಭೆಯ 2019-20 ನೇ ಸಾಲಿನ ಎಸ್ ಎಫ್ ಸಿ ವಿಶೇಷ ಅನುದಾನ ನಿರ್ವಹಿಸಿದ ಕಾಮಗಾರಿಯ ಬಿಲ್ ಬಾಕಿ ಇರುತ್ತದೆ. ಈ ಎಲ್ಲ ಕಾಮಗಾರಿಗಳ ಬಿಲ್ಲುಗಳು ಬಾಕಿ ಇರುವುದರಿಂದ ಆರ್. ಡಿ.ಜನ್ನು ಅವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅತ್ತ ಬ್ಯಾಂಕಿನಲ್ಲಿ ಬಡ್ಡಿಯ ಸಾಲ ತುಂಬಲಾಗದೆ ಹಾಗೂ ಕುಟುಂಬ ನಿರ್ವಹಣೆಗಾಗಿ ಬೇರೆ ಕಾಮಗಾರಿಯನ್ನು ಪಡೆದುಕೊಳ್ಳಲಾಗದ ಸ್ಥಿತಿಯಿಂದ ಮಾನಸಿಕ ಒತ್ತಡವನ್ನು ತಡೆದುಕೊಳ್ಳಲಾಗದೆ ಅವರಿಗೆ ಹೃದಯಘಾತವಾಗಿದೆ ಎಂದು ಅವರ ಕುಟುಂಬಸ್ಥರ ಆರೋಪವಾಗಿದೆ. ಇದೇ ಪರಿಸ್ಥಿತಿಯಲ್ಲಿ ಎಲ್ಲ ಗುತ್ತಿಗೆದಾರರು ಇದ್ದು, ಆರ್ಥಿಕವಾಗಿ ತೀವ್ರ ಕಂಗಲಾಗಿದ್ದೇವೆ. ಹಾಗಾಗಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಳ ಬಿಲ್ ಪಾವತಿಗೆ ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಆರ್.ಡಿ. ಜನ್ನು ಅವರಿಗೆ ಬರಬೇಕಾದ ಕಾಮಗಾರಿಗಳ ಬಿಲ್ ಹಣವನ್ನು ನೀಡಲು ತ್ವರಿತ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಸಾಲ- ಸೋಲ ಮಾಡಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಈ ನಿಟ್ಟಿನಲ್ಲಿ ಕೂಡಲೇ ಗುತ್ತಿಗೆದಾರರ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ಪೌರಾಯುಕ್ತರಾದ ವಿವೇಕ ಬನ್ನೆ ಅವರು ಆರ್.ಡಿ.ಜನ್ನು ಅವರು ಒಬ್ಬ ಪ್ರಾಮಾಣಿಕ ಗುತ್ತಿಗೆದಾರರಾಗಿದ್ದರು. ನಾನು ಅಧಿಕಾರವಹಿಸಿ ನಾಲ್ಕು ತಿಂಗಳಾಗಿದ್ದು, ಈ ನಾಲ್ಕು ತಿಂಗಳಲ್ಲಿ 68 ಕಾಮಗಾರಿ ಬಿಲ್ಲುಗಳ ಒಟ್ಟು 5,32,00,000/- ಹಣವನ್ನು ಪಾವತಿಸಲಾಗಿದೆ. ಇವತ್ತು ನೀಡಿದ ಮನವಿಯನ್ನು ಸರಕಾರಕ್ಕೆ ಕಳುಹಿಸಲಾಗುವುದು ಹಾಗೂ ನಾನು ವಿಶೇಷ ಪ್ರಯತ್ನ ಮೀರಿ ಗುತ್ತಿಗೆದಾರರ ಸ್ಥಳೀಯವಾಗಿರುವ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ದಿ.ಆರ್ ಡಿ ಜನ್ನು ಅವರ ಪತ್ನಿ, ಪುತ್ರಿ ಹಾಗೂ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್ ಶಶಿಧರನ್, ಪ್ರಧಾನ ಕಾರ್ಯದರ್ಶಿ ಬಿ.ಎಲ್. ಲಮಾಣಿ, ಕೋಶಾಧಿಕಾರಿ ಸುಧಾಕರ್ ರೆಡ್ಡಿ, ಸಂಘಟನಾ ಕಾರ್ಯದರ್ಶಿ ಆರ್.ಸಿ.ದೇವಾನಂದ, ಸಹ ಕಾರ್ಯದರ್ಶಿಗಳಾದ ಎಸ್.ಎನ್. ಪಡುಕೋಣೆ, ಟಿ.ಆನಂದ್ ಮಾಧವನ್ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.