ದಾಂಡೇಲಿ : ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯ ಸಭಾಭವನದಲ್ಲಿ ಸರಕಾರಿ ನೌಕರರ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಅಷ್ಪಾಕ್ ಶೇಖ್ ನಮ್ಮ ತಾಲೂಕಿನ ಸರಕಾರಿ ನೌಕರರು ಜನಮುಖಿಯಾಗಿ, ಸಮಾಜಮುಖಿಯಾಗಿದ್ದು, ಅತ್ಯುತ್ತಮವಾಗಿ ಸೇವೆಯನ್ನು ನೀಡುತ್ತಾ ಬಂದಿದ್ದಾರೆ ಎಂದು ಹೇಳಿ ಸರಕಾರಿ ನೌಕರರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಲಯ ಅರಣ್ಯ ಅಧಿಕಾರಿ ಮಹಿಮ್ ಜನ್ನು ಅವರು ಜೀವನ ಭದ್ರತೆಯ ಜೊತೆ ಜೊತೆಗೆ ಸಮಾಜ ಸೇವೆ ಮಾಡಲು ಸರಕಾರಿ ನೌಕರರಾಗಿ ನಮಗೆ ಅತ್ಯುತ್ತಮ ಅವಕಾಶ ದೊರೆತಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ಎಸ್.ಡಿ. ಬಂಟ್ ಮಾತನಾಡಿ ಸಂಘದ ಸದಸ್ಯರ ಸಮಸ್ಯೆಗಳಿಗೆ ಧ್ವನಿಯಾಗುವುದರ ಜೊತೆಗೆ ಸಮಾಜಕ್ಕೆ ಉಪಯುಕ್ತ ಸೇವೆ ನೀಡಲು ನಾವು ನೀವೆಲ್ಲರೂ ಸದಾ ಮುಂದಾಗಬೇಕೆಂದು ಕರೆ ನೀಡಿದರು.
ನಗರಸಭೆಯ ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಪೌರಾಯುಕ್ತ ವಿವೇಕ ಬನ್ನೆ, ನಗರ ಸಭಾ ಸದಸ್ಯರುಗಳಾದ ಮೋಹನ ಹಲವಾಯಿ, ಅನಿಲ್ ನಾಯ್ಕರ್, ರುಕ್ಮಿಣಿ ಬಾಗಡೆ ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಸರಕಾರಿ ನೌಕರರ ಸಂಘದ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾದ ಸುರೇಶ ನಾಯಕ ಅವರು ದಾಂಡೇಲಿ ತಾಲೂಕು ನೌಕರರ ಸಂಘ ಕ್ರಿಯಾಶೀಲವಾಗಿದ್ದು, ಮಾನವೀಯ ಕೆಲಸಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು. ಸಂಘದ ಸದಸ್ಯರು ಇಲ್ಲವೇ ಅವರ ಕುಟುಂಬಸ್ಥರಿಗೆ ಆರೋಗ್ಯ ಸಮಸ್ಯೆಗಳು ಉಂಟಾದಂತಹ ಸಂದರ್ಭದಲ್ಲಿ, ಅವಗಡಗಳಿಗೆ ತುತ್ತಾದಂತಹ ಸಂದರ್ಭದಲ್ಲಿ ಸಂಘವು ಮಾನವೀಯ ನೆಲೆಯಲ್ಲಿ ಸರ್ವರ ಸಹಕಾರವನ್ನು ಪಡೆದು ಸೇವೆಯನ್ನು ಸಲ್ಲಿಸುತ್ತಾ ಬಂದಿದೆ ಎಂದರು. ಸಂಘದ ಸರ್ವ ಸದಸ್ಯರು ಪರಸ್ಪರ ಒಗ್ಗಟ್ಟು, ಸೌಹಾರ್ದತೆಯಿಂದ ಸಂಘಟನೆಯ ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಉತ್ಪಲ ಶಿರೋಡ್ಕರ್, ಬಸವರಾಜ ಗಜಾಕೋಶ, ವಿನಾಯಕ ಪವಾರ್, ಮಂಜುನಾಥ್ ಮುನವಳ್ಳಿ, ಗೌಡಪ್ಪ ಬನಾಕದಿನ್ನಿ, ಇಮ್ರಾನ್ ಶೇಖ್, ಅನೀಲ ಅಚರಾಟ್ಟಿ, ಮೀರ್ ನಸ್ರುದ್ದೀನ್, ಲೋಕೇಶ್ ಕೆ.ಎನ್, ಮಲ್ಲಪ್ಪ ವಡ್ಡರ್, ಸುರೇಶ್ ದೊಡ್ಮನಿ, ಸುಭಾಷ್ ನಾಯಕ, ಚಂದ್ರಕಲಾ ಬಾಂದೇಕರ, ದೀಪಾಲಿ ಪೆಡ್ನೇಕರ, ಸರಸ್ವತಿ ನಾಯ್ಕ, ಸೋಮನಗೌಡ ಹಾಗೂ ಸರ್ಕಾರಿ ನೌಕರರು ಉಪಸ್ಥಿತರಿದ್ದರು. ವಿನಾಯಕ ಪವಾರ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರವೀಣ್ ನಾಯ್ಕ ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.