ಶಿರಸಿ: ವೃತ್ತಿಯಲ್ಲಿ ಪೋಲಿಸ್ ಆಗಿರುವ ಶಿರಸಿ ನಗರ ಠಾಣೆ ಪಿಎಸ್ಐ ನಾಗಪ್ಪ ಬಿ. ಇವರ ಸಾಧನೆಯ ಹೊತ್ತಿಗೆಗೆ ಮತ್ತೊಂದು ಪುಟ ಸೇರ್ಪಡೆಗೊಳ್ಳುತ್ತಿದೆ. 2022ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಪಿಎಸ್ಐ ನಾಗಪ್ಪ ಬಿ. ಆಯ್ಕೆಯಾಗಿದ್ದಾರೆ.
ಶಿರಸಿ ಮಾರ್ಕೆಟ್ ಠಾಣೆಯ ಪಿಎಸ್ಐ ಆಗಿ ಉತ್ತಮ ಸೇವೆ ನೀಡುತ್ತ, ಜನಸ್ನೇಹಿ ಪಿಎಸ್ಐ ನಾಗಪ್ಪ ಬಿ. ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನವರಾಗಿದ್ದಾರೆ. ಇವರು ಗುಲ್ಬರ್ಗ,ಕಾರವಾರ, ದಾಂಡೇಲಿ ನಗರ ಠಾಣೆಯ ಪಿಎಸ್ಆಯ್ ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಶಿರಸಿ ನಗರ ಠಾಣೆ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರವಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗ ಸಹ ಉತ್ತಮ ಸೇವೆ ಸಲ್ಲಿಸಿದ್ದರು. ಪಿಎಸ್ಐ ನಾಗಪ್ಪ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿರುವುದಕ್ಕೆ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು, ಸಿಬ್ಬಂಧಿಗಳು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ವೃತ್ತಿಯಲ್ಲಿ ಪೋಲಿಸ್ ಆಗಿದ್ದರೂ ತಮ್ಮ ಹವ್ಯಾಸಗಳನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿದ್ದಾರೆ. ಉತ್ತಮ ಅಧಿಕಾರಿಯಾಗಿರುವುದರ ಜೊತೆ ಇವರು ಉತ್ತಮ ಹಾಡುಗಾರರೂ ಆಗಿದ್ದಾರೆ. ಕವಿ,ಲೇಖಕರಾಗಿರುವ ಇವರು ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಇವರ ಲೇಖನಗಳು ಹಲವು ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಇವರು ಬರೆದ ‘ನೆತ್ತರಲಿ ನೆಂದ ಹೂವು’ ಕವನ ಸಂಕಲನಕ್ಕೆ ‘ದ.ರಾ.ಬೇಂದ್ರೆ ನೆನಪಿನ ದತ್ತಿ ಪ್ರಶಸ್ತಿ- 2022’ ಲಭಿಸಿದ್ದು ಉಲ್ಲೇಖನೀಯ.