ಕಾರವಾರ: ಎನ್.ಪಿ.ಸಿ.ಎಲ್ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಅಣು ವಿಕಿರಣ ಸೋರಿಕೆಯಾದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಉತ್ತರ ಕನ್ನಡ ಜಿಲ್ಲಾಡಳಿತ, ಕೈಗಾ ಅಣು ವಿದ್ಯುತ್ ಸ್ಥಾವರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಮತ್ತು ಅಣುಶಕ್ತಿ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಅಣಕು ಕಾರ್ಯಚರಣೆಯು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ 11 ಗಂಟೆಗ ಕೈಗಾ ಅಣು ವಿದ್ಯುತ್ ಸ್ಥಾವರದ 4 ನೇ ಘಟಕದಲ್ಲಿ ವಿಕಿರಣ ಸೋರಿಕೆಯಾದ ಸಂದರ್ಭವನ್ನು ಸೃಷ್ಠಿಸಿಕೊಂಡು ನಡೆಸಿದ ಈ ಕಾರ್ಯಚರಣೆಯಲ್ಲಿ , ವಿಕಿರಣ ಸೋರಿಕೆ ಕುರಿತು ಕೈಗಾ ಕೇಂದ್ರದ ನಿರ್ದೇಶಕರಿಂದ ಮಾಹಿತಿ ಸ್ವೀಕೃತಿಯಾದ ಕೂಡಲೇ, ಜಿಲ್ಲಾಧಿಕಾರಿಗಳು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ನಡೆಸಿ, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ತುರ್ತು ಅಗತ್ಯ ಕಾರ್ಯಚರಣೆ ಕೈಗೊಳ್ಳುವಂತೆ ಸೂಚನೆ ನೀಡಿ, ಜಿಲ್ಲಾಧಿಕಾರಿ ಕಚೇರಿಯಲ್ಲಿನ ಜಿಲ್ಲಾ ತುರ್ತು ಕಾರ್ಯಚರಣಾ ಕೇಂದ್ರದಲ್ಲಿ ತುರ್ತು ಇಲಾಖೆಗಳ ಸಿಬ್ಬಂದಿಗಳು ಕೂಡಲೇ ಹಾಜರಾಗಿ ತಕ್ಷಣದಿಂದಲೇ ಸಕ್ರಿಯವಾಗಿ ಕಾರ್ಯಚರಣೆಯಲ್ಲಿ ತೊಡಗಿಕೊಂಡು , ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಪೊಲೀಸ್ ಇಲಾಖೆ ವತಿಯಿಂದ ಕೈಗಾ ಸಂಪರ್ಕಿಸುವ ರಸ್ತೆಗಳಲ್ಲಿ ಬಾರಿಕೇಡ್ಗಳನ್ನು ಅಳವಡಿಸಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಯಿತು. ಅಣು ವಿಕಿರಣವು ವಾತಾವರಣದಲ್ಲಿ ಗಾಳಿಯ ಮೂಲಕ ಹರಡುತ್ತಿದ್ದ ಕೈಗಾ, ಬಾಳೆಮನೆ, ಹರಟುಗ, ದಾಸನಹಳ್ಳಿ, ಕೊಚೆಗಾರ್, ವಿರ್ಜೆ ಪ್ರದೇಶದಲ್ಲಿನ ಸಾರ್ವಜನಿಕರಿಗೆ, ಸ್ಥಳೀಯ ಗ್ರಾöçಮ ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗ ಮೂಲಕ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಲಾಯಿತು.
ಅಣು ವಿದ್ಯುತ್ ಸ್ಥಾವರದಲ್ಲಿ ಸೋರಿಕೆಯಾದ ಅಣು ವಿಕಿರಣದ ಪ್ರಮಾಣವು ಅತ್ಯಂತ ಕಡಿಮೆ ಇದ್ದು , ಇದು ಸಾರ್ವಜನಿಕರಿಗೆ ಹೆಚ್ಚಿನ ಅಪಾಯ ಒಡ್ಡುವುದಿಲ್ಲ. ಈ ಸೋರಿಕೆಯನ್ನು ನಿಯಂತ್ರಿಸಲು ತಂತ್ರಜ್ಞರು ಎಲ್ಲಾ ರೀತಿಯ ಗರಿಷ್ಠ ಪ್ರಯತ್ನಗಳನ್ನು ಕೈಗೊಳ್ಳುತ್ತಿದ್ದು, ಜಿಲ್ಲಾಡಳಿತದೊಂದಿಗೆ ಕೈಗಾ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಸಾರ್ವಜನಿಕರು ಸೋಷಿಯಲ್ ಮೀಡಿಯಾಗಳಲ್ಲಿ ಬರುತ್ತಿರುವ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ , ಜಿಲ್ಲಾಡಳಿತವು ಅಧಿಕೃತವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ನೀಡುವ ಪತ್ರಿಕಾ ಪ್ರಕಟಣೆಗಳನ್ನು ಮತ್ತು ಮುನ್ಸೂಚನೆಗಳನ್ನು ಪಾಲಿಸುವ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಲಾಯಿತು.
ಅಣು ವಿಕಿರಣವು ಹರಡುತ್ತಿದ್ದ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ಆರೋಗ್ಯ ಇಲಾಖೆವತಿಯಿಂದ ವಿಕಿರಣದ ಅಪಾಯವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದೇಹದಲ್ಲಿ ವಿಕಿರಣದ ಪ್ರಭಾವ ಹರಡುವುದನ್ನು ತಡೆಯಲು ಅಗತ್ಯವಿರುವ ವಿಕಿರಣ ನಿಯಂತ್ರಕ ಮಾತ್ರೆಗಳನ್ನು ವಿತರಿಸಲಾಯಿತು. ಈ ಪ್ರದೇಶಗಳ ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ಸ್ಥಳೀಯವಾಗಿ ಸಿದ್ದಪಡಿಸಿದ ಆಹಾರ ಮತ್ತು ನೀರು ಸೇವನೆ ಮಾಡದಂತೆ ಸೂಚನೆ ನೀಡಿ, ಅವರಿಗೆ ಸಿದ್ದಪಡಿಸಿದ ಆಹಾರದ ಪ್ಯಾಕೇಟ್ಗಳನ್ನು ಮತ್ತು ಕುಡಿಯುವ ನೀರಿನ ಬಾಟೆಲ್ ಗಳನ್ನು ಸರಬರಾಜು ಮಾಡಲಾಯಿತು.
ವಿಕಿರಣ ಹರಡುತಿದ್ದ ಪ್ರದೇಶಗಳಿಗೆ ಸಿಬ್ಬಂದಿಗಳು ತೆರಳಿ ಕಾರ್ಯಚರಣೆ ನಡೆಸಲು , ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡಲು ಮತ್ತು ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಮತ್ತು ಕ.ರಾ.ರ.ಸಾ.ಸಂಸ್ಥೆ ವತಿಯಿಂದ ಸೂಕ್ತ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.
ಮಧ್ಯಾಹ್ನ 4 ಗಂಟೆಯ ವೇಳೆಗೆ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಇಂದು ಬೆಳಗ್ಗೆ ಸೋರಿಕೆಯಾಗಿದ್ದ ಅಣು ವಿಕಿರಣದ ಹರಡುವಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣಗೊಳಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ವಿಕಿರಣ ಹರಡಿದ್ದ ವಿರ್ಜೆ ಮತ್ತು ಬಾಳೆಮನೆ ಗ್ರಾಮದ ನಿವಾಸಿಗಳನ್ನು ಕ್ರಮವಾಗಿ ಕಾರವಾರ ಪಾಲಿಟೆಕ್ನಿಕ್ ಕಾಲೇಜು ಮತ್ತು ಚಿತ್ತಾಕುಲ ಪ್ರಾಥಮಿಕ ಶಾಲೆಗಳಿಗೆ ಸ್ಥಳಾಂತರಿಸಿ, ವಿಕಿರಣ ಪ್ರಸಾರಗೊಂಡಿದ್ದ ಇತರೇ ಗ್ರಾಮಗಳಾದ ಕೈಗಾ, ಹರಟುಗ, ದಾಸನಹಳ್ಳಿ, ಕೊಚೆಗಾರ್ ಗ್ರಾಮಗಳಲ್ಲಿನ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಮೂಲಕ ತಪಾಸಣೆ ನಡೆಸುವಂತೆ ಸೂಚನೆ ನೀಡಿ, ಅನಾವಶ್ಯಕವಾಗಿ ಹೊರಗಡೆ ಓಡಾಟ ನಡೆಸದಂತೆ ಮತ್ತು ಸ್ಥಳೀಯವಾಗಿ ಸಿದ್ದಪಡಿಸಿದ ಆಹಾರ ಮತ್ತು ನೀರು ಸೇವನೆ ಮಾಡದಂತೆ ಸೂಚನೆ ನೀಡಲಾಯಿತು.
ಕಾರ್ಯಚರಣೆಯ ಪ್ರತೀ ಹಂತದಲ್ಲೂ ಮಾಧ್ಯಮಗಳಿಗೆ ಜಿಲ್ಲಾಡಳಿತ ಮತ್ತು ಎನ್.ಪಿ.ಸಿ.ಎಲ್ ಕೈಗಾ ದ ಮೂಲಕ ಕೈಗೊಂಡಿರುವ ವಿವರಗಳನ್ನು ಸಕಾಲದಲ್ಲಿ ಒದಗಿಸುವ ಮೂಲಕ ಸಾರ್ವಜನಿಕರು ಯಾವುದೇ ಸುಳ್ಳು ಸುದ್ದಿಗಳನ್ನು ನಂಬಿ ಅನಗತ್ಯ ಭಯ ಮತ್ತು ಆತಂಕಗಳಿಗೆ ಒಳಗಾಗದಂತೆ ಎಚ್ಚರ ವಹಿಸಲಾಯಿತು.
ಅಣಕು ಕಾರ್ಯಾಚರಣೆಗೆ ನಿಯೋಜಿಸಿದ್ದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ನಿಗಧಿತ ಅವಧಿಯೊಳಗೆ ತಮಗೆ ವಹಿಸಲಾದ ಜವಾಬ್ದಾರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ ಈ ಕಾರ್ಯಚರಣೆಯನ್ನು ಯಶಸ್ವಿಗೊಳಿಸಿದರು.
ಸಂಜೆ 6 ಗಂಟೆಯ ವೇಳೆಗೆ ಕೈಗಾದ ನಿರ್ದೇಶಕರಿಂದ, ಕೈಗಾ ಪರಿಸರದಲ್ಲಿ ಅಣು ವಿಕಿರಣ ಪ್ರಸರಣವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದು , ಈ ಪರಿಸರದಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಕುರಿತಂತೆ ಬಂದ ಮಾಹಿತಿಯಂತೆ ಅಣಕು ಕಾರ್ಯಚರಣೆಯ ಚಟುವಟಿಕೆಯನ್ನು ಮುಕ್ತಾಯಗೊಳಿಸಲಾಯಿತು.
ನಂತರ ಅಣಕು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದ ಎಲ್ಲಾ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಪ್ರತಿಯೊಂದು ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಪರಸ್ಪರ ಸಮನ್ವಯದಿಂದ , ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿರುವ ಕಾರಣ, ಈ ಕಾರ್ಯಚರಣೆ ಯಶಸ್ವಿಯಾಗಿದೆ. ನೈಜ ಸಂದರ್ಭದಲ್ಲಿ ಅಣು ವಿಕಿರಣ ಸೋರಿಕೆ ಸೇರಿದಂತೆ ಜಿಲ್ಲೆಯಲ್ಲಿ ಸಂಭವಿಸುವ ಯಾವುದೇ ರೀತಿಯ ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ, ಸಾರ್ವಜನಿಕರ ರಕ್ಷಣೆಗೆ ಮುಂದಾಗುವAತೆ ತಿಳಿಸಿದರು.
ಅಣಕು ಕಾರ್ಯಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಎನ್.ಡಿ.ಆರ್.ಎಫ್. ಪೊಲೀಸ್, ಅಗ್ನಿಶಾಮಕ , ಗೃಹರಕ್ಷಕ, ಕಂದಾಯ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಎನ್.ಪಿ.ಸಿ.ಎಲ್ ಕೈಗಾ ದ ಅಧಿಕಾರಿಗಳು ಭಾಗವಹಿಸಿದ್ದರು.