— ಮುಕ್ತಾ ಹೆಗಡೆ
ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡಂತಹ ರಾಷ್ಟ್ರ. ಜ್ಞಾನವನ್ನು ಬಯಸಿ ಬಂದವರಿಗೆ ಸರಸ್ವತಿಯಾಗಿ, ಹಸಿವು ಎಂದವರಿಗೆ ಅನ್ನಪೂರ್ಣೇಶ್ವರಿಯಾಗಿ, ಶತ್ರುಗಳನ್ನು ಕಾಳಿಯಾಗಿ ಸದೆಬಡಿದವಳು ಮಾತೆ ಭಾರತಿ. ಇವುಗಳೆಲ್ಲದರ ಸಮ್ಮಿಲನ ಈಗ ನಡೆಯುತ್ತಿರುವ ‘ಮಹಾಕುಂಭಮೇಳ’.
ಗುರು ಗ್ರಹವು ಸೂರ್ಯನನ್ನು ಒಂದು ಸುತ್ತು ಹಾಕಿದಾಗ ಭರತಭೂಮಿಯಲ್ಲಿ ಮಹಾಕುಂಭವೆಂಬ ಸಂಭ್ರಮ ನಡೆಯುತ್ತದೆ. ಅಮೃತ ಮಂಥನದ ಸಂದರ್ಭದಲ್ಲಿ ಅಮೃತ ಅಸುರರಿಗೆ ಸಿಗಬಾರದು ಎಂದು ದೇವತೆಗಳು ಅಮೃತದ ಕುಂಭವನ್ನು ತೆಗೆದುಕೊಂಡು ಹೋಗುವಾಗ ನಾಲ್ಕು ಹನಿಗಳು ಪ್ರಯಾಗರಾಜ್, ಹರಿದ್ವಾರ, ಉಜ್ಜಯಿನಿ, ನಾಸಿಕ್ ಈ ಸ್ಥಳಗಳಿಗೆ ಬೀಳುತ್ತವೆ. ಈ ಕ್ಷೇತ್ರಗಳಲ್ಲಿ ಕುಂಭಮೇಳಗಳು ನಡೆಯುತ್ತವೆ. ಮಹಾಕುಂಭಮೇಳವು ಗಂಗೆ, ಯಮುನೆ, ಸರಸ್ವತಿ ನದಿಗಳ ಸಂಗಮದಲ್ಲಿ 144 ವರ್ಷಗಳಿಗೊಮ್ಮೆ ನಲವತ್ತೈದು ದಿನಗಳು ನಡೆಯುತ್ತದೆ.
ಜಗತ್ತಿನ ಅತ್ಯಂತ ಶಕ್ತಿಶಾಲಿಗಳೆಂದು ಕರೆಯಲ್ಪಡುವ ನಾಗಾಸಾಧುಗಳು ಕುಂಭಮೇಳಕ್ಕೆ ಆಗಮಿಸುತ್ತಾರೆ. ಹಿರಿಯರ, ವಿದ್ವಾಂಸರ, ಸಾಧುಸಂತರ ನೇತೃತ್ವದಲ್ಲಿ ಅನೇಕ ಧರ್ಮ ಸಭೆಗಳು ನಡೆಯುತ್ತವೆ. ಈ ದಿವ್ಯ ಕಾಲದಲ್ಲಿ ಸ್ನಾನ ಮಾಡಿದರೆ ಪಾಪ ವಿಮೋಚನೆಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಜಗತ್ತಿನೆಲ್ಲೆಡೆಯಿಂದ ಸಾಕಷ್ಟು ಆಸ್ತಿಕ ಬಂಧುಗಳು ತೀರ್ಥಸ್ನಾನದಿಂದ ಪುನೀತರಾಗುತ್ತಾರೆ. ಮತ್ತು ಪುಷ್ಯ ಪೂರ್ಣಿಮಾ,ಮಕರ ಸಂಕ್ರಾಂತಿ, ವಸಂತ ಪಂಚಮಿ, ಮೌನಿ ಅಮಾವಾಸ್ಯೆ, ಮಾಘ ಪೂರ್ಣಿಮ ಮತ್ತು ಕೊನೆಯ ದಿನವಾದ ಶಿವರಾತ್ರಿಯ ಸಂಗಮದ ಜಲಸ್ಪರ್ಶದಿಂದ ಪುಣ್ಯ ದ್ವಿಗುಣವಾಗುತ್ತದೆ ಎಂಬ ನಂಬಿಕೆಯೂ ಇದೆ.
ಇನ್ನು ಈ ವರ್ಷದ ಮಹಾಕುಂಭಮೇಳದಲ್ಲಿ ಈವರೆಗೆ ನಲವತ್ತೆಂಟು ಕೋಟಿ ಭಕ್ತರು ಭಾಗವಹಿಸಿದ್ದಾರೆ. ಅಷ್ಟೊಂದು ಮಹಾನ್ ಸಂಖ್ಯೆಯಲ್ಲಿ ಜನರು ಸೇರಿದ್ದರೂ ಅಚ್ಚುಕಟ್ಟಾಗಿ ವಸತಿ ಮತ್ತು ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.
ಭಕ್ತಿಗಷ್ಟೇ ಅಲ್ಲದೆ ಭಾರತದ ಆರ್ಥಿಕತೆ, ನಿರ್ಹವಣಾ ಸಾಮರ್ಥ್ಯಕ್ಕೂ ಸಾಕ್ಷಿಯಾದ ಮಹಾ ಕುಂಭಮೇಳದ ಪುಣ್ಯಫಲ ಭರತಖಂಡಕ್ಕೆ ಇನ್ನಷ್ಟು ಒಳಿತನ್ನು ಮಾಡಲಿ..