ಏ.11ರಿಂದ ‘ಭಾರತೀಯ ಜೀವನ ಶಿಕ್ಷಣ’ ವಿಶೇಷ ಶಿಬಿರ: ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ
ಯಲ್ಲಾಪುರ : ಇಂದಿನ ವಿದ್ಯಾರ್ಥಿಗಳು ಓದಿನ ಭರದಲ್ಲಿ ನಮ್ಮ ಭಾರತೀಯ ಶಿಕ್ಷಣ, ಸಂಸ್ಕಾರದಿಂದ ದೂರ ಹೋಗುತ್ತಿದ್ದಾರೆ. ಅದಕ್ಕಾಗಿ ಭಾರತೀಯ ಜೀವನ ಶಿಕ್ಷಣ ಎಂಬ ಒಂದು ವಿಶಿಷ್ಟವಾದ ವಿಷಯ ತಜ್ಞರನ್ನು ಸೇರಿಸಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾದ ಶಿಬಿರವನ್ನು ಏ.೧೧ ರಿಂದ ೧೮ ರವರೆಗೆ ವಿಶ್ವದರ್ಶನದಲ್ಲಿ ಆಯೋಜಿಸಿದ್ದೇವೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.
ಅವರು, ಫೆ.೧೯ ರಂದು ವಿಶ್ವದರ್ಶನದಲ್ಲಿ ವಿಶ್ವದರ್ಶನ ಸೇವಾ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಗೋವರ್ಧನ ಗೋಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ೮ ದಿನಗಳ ಶಿಬಿರದ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡುತ್ತಿದ್ದರು. ಈ ಶಿಬಿರದ ೮ ದಿನದಲ್ಲಿ ಯೋಗ, ಮನೆಯಲ್ಲಿ ದೇವರ ಪ್ರಾರ್ಥನೆ, ಪೂಜೆ, ಹಿರಿಯರಿಗೆ ಗೌರವ ನೀಡುವುದು, ದೇಶಾಭಿಮಾನ ಬೆಳೆಸುವುದು ಮತ್ತು ೪ ಪುರಾಣ ಪುರುಷರು, ೪ ಕ್ರಾಂತಿ ಪುರುಷರ ಚರಿತ್ರೆ, ಮಕ್ಕಳ ಜೊತೆ ಗುಂಪು ಚರ್ಚೆ, ಸಂಜೆ ಆಟ, ಓಟ, ಹಿರಿಯ ವಿಷಯ ತಜ್ಞರಿಂದ ಶಾರೀರಿಕ, ಬೌದ್ಧಿಕ, ಮಾನಸಿಕ, ದೈಹಿಕವಾಗಿ ಸದೃಢರಾಗಲು ಚಿಂತನೆಗಳನ್ನು ನೀಡುವುದು. ಅದರಲ್ಲೂ ಕೃಷಿ ಜೀವನದ ಅವಿಭಾಜ್ಯ ಅಂಗವಾಗಿದೆ. ಹಾಗೆಯೇ ಗೋವು ಕೂಡ ನಮ್ಮ ಬದುಕಿಗೆ ಅಷ್ಟೇ ಮಹತ್ವದ್ದು. ಪ್ರಾತ್ಯಕ್ಷಿಕೆ ನೀಡಿ, ತಜ್ಞರಿಂದ ಕುಟುಂಬ ವ್ಯವಸ್ಥೆಯ ನೈತಿಕ ಮೌಲ್ಯ, ಇತಿಹಾಸ, ವಿಜ್ಞಾನ ಪರಂಪರೆ, ಶ್ರದ್ಧೆ, ನಂಬಿಕೆಯನ್ನು ಬೆಳೆಸುವ ಕುರಿತು ಸರಿಯಾದ ಮಾರ್ಗದರ್ಶನದ ಜೊತೆ ವಸತಿ ರಹಿತ ಶಿಬಿರವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ ಸರಿಯಾಗಿ ೮ ಗಂಟೆಗೆ ಪ್ರಾರ್ಥನೆಯೊಂದಿಗೆ ಶಿಬಿರ ಪ್ರಾರಂಭಗೊಂಡು, ಸಂಜೆ ೬ ರ ಹೊತ್ತಿಗೆ ಸಮಾಪ್ತಿಯಾಗಲಿದೆ. ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ, ಸಂಜೆ ಲಘು ಉಪಹಾರದ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದೇವೆ. ಶಿಬಿರದಲ್ಲಿ ೨೦೦ ಮಕ್ಕಳಿಗೆ ಮಾತ್ರ ಅವಕಾಶ. ೫ ನೇ ತರಗತಿ ಪಾಸಾದ ೯ನೇ ತರಗತಿ ಉತ್ತೀರ್ಣರಾದ ಮಕ್ಕಳಿಗೆ (ಅದರಲ್ಲಿ ಗಂಡು ಮತ್ತು ಹೆಣ್ಣು ತಲಾ ೧೦೦ ರಂತೆ) ಪ್ರವೇಶಕ್ಕೆ ಅವಕಾಶ ನೀಡಿದ್ದೇವೆ. ಈಗಾಗಲೇ ಶೇ.೫೦ ರಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ವಿಶ್ವದರ್ಶನ ಕಚೇರಿಯಲ್ಲಿ ತಮ್ಮ ಮಕ್ಕಳಿಗಾಗಿ ನೋಂದಾವಣಿ ಮಾಡಿಕೊಳ್ಳಬಹುದಾಗಿದೆ. ನೋಂದಾವಣಿಗಾಗಿ ೭೩೩೭೮೭೫೨೭೯ ಸಂಪರ್ಕಿಸಬಹುದು.
ಇಲ್ಲಿ ಹಲವು ವಿಷಯಗಳನ್ನು ಅದರಲ್ಲೂ ಹೆಣ್ಣುಮಕ್ಕಳಿಗಾಗಿ ವಿಶೇಷ ತಜ್ಞರಿಂದ ಅವರ ನಿತ್ಯಜೀವನದ ಅನೇಕ ಅಗತ್ಯತೆಗಳ ಕುರಿತು ತಜ್ಞ ವೈದ್ಯರಿಂದ ಮಾಹಿತಿ ನೀಡುವುದು, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ, ಆಧುನಿಕ ಶಿಕ್ಷಣಕ್ಕೂ ಭದ್ರ ಬುನಾದಿ ಹಾಕಬಲ್ಲ ಜೀವನ ಪರ್ಯಂತ ಪಾಲಿಸಬಲ್ಲ ಸುಸಂಸ್ಕೃತವಾದ ಪಠ್ಯಕ್ರಮವನ್ನು ಸಿದ್ಧಪಡಿಸಿದ್ದೇವೆ. ಸಂಘದ ಪ್ರಮುಖರಾದ ನರೇಂದ್ರರವರು, ಕುಟುಂಬ ಪ್ರಬೋಧನ ಮುಖ್ಯಸ್ಥ ಸು.ರಾಮಣ್ಣ ಸೇರಿದಂತೆ ಅನೇಕ ಹಿರಿಯರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾರ್ಗದರ್ಶಕರಾದ ಎಂ.ಎನ್.ಹೆಗಡೆ ಹಳವಳ್ಳಿ, ಅ.ಭಾ.ಸಾ.ಪ. ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ, ಶಿಬಿರ ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ, ಸಹಸಂಚಾಲಕ ದೋಂಡು ಪಾಟೀಲ, ಸಮಿತಿಯ ಶ್ರೀರಾಮ ಲಾಲಗುಳಿ ಮತ್ತು ವಿಶ್ವದರ್ಶನದ ಸಿ.ಇ.ಓ. ಅಜೇಯ ಭಾರತೀಯ ಉಪಸ್ಥಿತರಿದ್ದರು.