ಶಿರಸಿ: ಶಿರಸಿಯ ಸರಕಾರಿ ಪಂಡಿತ್ ಆಸ್ಪತ್ರೆಯ ಬಗ್ಗೆ ನಾನು ಪ್ರಶ್ನೆ ಮಾಡಿದರೇ, ನನ್ನ ಪ್ರತಿಕೃತಿ ದಹಿಸಿದ್ದಾರೆ, ನನ್ನ ಮೇಲೆ ನಾನ್ ಬೇಲೆಬಲ್ ಕೇಸ್ ಹಾಕಿಸಿದ್ದಲ್ಲದೇ, ಮಾನನಷ್ಟ ಮೊಕದ್ದಮ್ಮೆ ದಾಖಲಿಸುವ ನೋಟೀಸ್ ನೀಡುವ ಮೂಲಕ ಬೆದರಿಕೆ ಒಡ್ಡುವ ತಂತ್ರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಾಡಿದ್ದಾರೆ. ನನ್ನ ಬಂಧಿಸಲು ಶತಾಯ ಗತಾಯ ಪ್ರಯತ್ನಿಸಿದ್ದಾರೆ. ಆದರೆ ಇದ್ಯಾವುದಕ್ಕೂ ನಾನು ಬಗ್ಗುವುದಿಲ್ಲ, ಇನ್ನಷ್ಟು ಕ್ಷೇತ್ರದ ಬಡವರ ಕುರಿತಾಗಿ ಬೀದಿಗಿಳಿದು ಹೋರಾಡುತ್ತೇನೆ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಮಾನ್ಯ ಶಾಸಕರಿಗೆ ಯಾವ ರೀತಿ ಪ್ರಶ್ನೆ ಮಾಡಿದರೂ, ವಿನಂತಿ ಮಾಡಿದರೂ ಈ ಕುರಿತಾಗಿ ತುಟಿ ಬಿಚ್ಚುವ ಸೌಜನ್ಯವನ್ನು ಭೀಮಣ್ಣ ಮಾಡಿಲ್ಲ. ವಿವಿಧ ಪತ್ರಿಕೆಯಲ್ಲಿ ಶಾಸಕರ ದ್ವಂದ್ವ ಹೇಳಿಕೆಯನ್ನು ಪ್ರಶ್ನಿಸಿದರೆ ನನ್ನ ಮೇಲೆ ನಾನ್ ಬೇಲೆಬಲ್ ಪ್ರಕರಣವನ್ನು ಶಾಸಕರ ಬೆಂಬಲಿಗರು ದಾಖಲಿಸಿದ್ದರು. ಆದರೆ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಡಿಲೇರಿದ್ದರ ಪರಿಣಾಮ, ಹೈಕೋರ್ಟ್ ಆ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡುವ ಮೂಲಕ ನ್ಯಾಯವನ್ನು ಕೋರ್ಟ್ ಎತ್ತಿಹಿಡಿದಿದೆ. ಇದರಿಂದ ಶಾಸಕರಿಗೆ ಹಿನ್ನಡೆ ಉಂಟಾದ ಬೆನ್ನಲ್ಲೇ, ನನ್ನ ಮೇಲೆ ಮಾನನಷ್ಟ ಮೊಕದ್ದಮ್ಮೆ ದಾಖಲಿಸಲು ನೋಟೀಸ್ ನೀಡಿರುವುದು ಕ್ಷೇತ್ರದ ಶಾಸಕರಿಗೆ ಶೋಭೆ ತರಲಾರದು.
ಪ್ರಶ್ನೆ ಮಾಡಿದ ಕ್ಷೇತ್ರದ ಮತದಾರನ ಮೇಲೆ ಕೇಸ್ ದಾಖಲಿಸುವುದು, ಮಾನನಷ್ಟ ಮೊಕ್ಕದ್ದಮ್ಮೆ ನೋಟೀಸ್ ಕಳುಹಿಸುವುದು ಶಾಸಕರಿಗೆ ಯೋಗ್ಯವಲ್ಲ. ಮೊದಲು ಪ್ರಶ್ನೆಗೆ ಉತ್ತರವನ್ನು ಕೊಡುವ ಕೆಲಸ ಮಾಡುವಂತಾಗಲಿ. ಕೇಸ್ ಹಾಕಿಸುವ ಬೆದರಿಕೆಗೆ, ನನ್ನ ಬಾಯಿ ಮುಚ್ಚಿಸುವ ನಿಮ್ಮ ಪ್ರಯತ್ನ ಎಂದಿಗೂ ಯಶಸ್ಸಾಗದು. ಯಾವುದೇ ಬೆದರಿಕೆಗೆ, ನೋಟೀಸಿಗೆ ನಾನು ಹೆದರುವುದಿಲ್ಲ. ಎಲ್ಲ ರೀತಿಯ ಕಾನೂನು ಹೋರಾಟಕ್ಕೆ ನಾನು ಸಿದ್ಧನಿದ್ದು, ಕಾನೂನಿನ ಮೂಲಕವೇ ಶಾಸಕರಿಗೆ ತಕ್ಕ ಉತ್ತರ ನೀಡಲಿದ್ದೇನೆ.
ಕ್ಷೇತ್ರದ ಶಾಸಕರ ಉಡಾಫೆಯ ಕಾರ್ಯವೈಖರಿ ನೋಡಿದರೆ ಇದೇನು ರಿಪಬ್ಲಿಕ್ ಆಫ್ ಶಿರಸಿನಾ ? ಕ್ಷೇತ್ರದ ಸಾಮಾನ್ಯ ಜನ ಇಲ್ಲಿ ಪ್ರಶ್ನೆ ಮಾಡಲೇಬಾರದೇ? ಎನ್ನುವ ಅಭಿಪ್ರಾಯ ಸಾರ್ವಜನಿಕರಲ್ಲಿ ಮೂಡುತ್ತಿದೆ. ಇನ್ನು ಮುಂದೆ ಬಡವರ ಪರವಾದ ಆಸ್ಪತ್ರೆ ಹೋರಾಟವನ್ನು ಇನ್ನಷ್ಟು ಜಾಸ್ತಿ ಮಾಡುತ್ತೇನೆ. ಶಾಸಕರೇ, ನೀವು ಉತ್ತರ ಕೊಡುವ ಸ್ಥಾನದಲ್ಲಿದ್ದೀರಿ. ನಾನೇನು ನಿಮ್ಮ ವಯಕ್ತಿಕ ಆಸ್ತಿಯ ಮಾಹಿತಿ ಕೇಳುತ್ತಿಲ್ಲ ಶಾಸಕರೇ. ಆಸ್ಪತ್ರೆ ಕ್ಷೇತ್ರದ ಜನರ ಆಸ್ತಿಯಾಗಿದೆ. ಹಾಗಾಗಿ ಒ್ರಶ್ನೆ ಕೇಳಿದ ಮತದಾರರಿಗೆ ಲೀಗಲ್ ನೋಟೀಸ್ ಕೊಡುವ ಬದಲು ಕ್ಷೇತ್ರದ ಜನರಿಗೆ ಉತ್ತರ ಕೊಡುವ ಕೆಲಸ ಮಾಡಿ ಎಂದು ಈ ಮೂಲಕ ಶಾಸಕರಿಗೆ ಕಿವಿಮಾತು ಹೇಳುತ್ತಿದ್ದೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಖೋಟ್ ::
ಎಲ್ಲಿದೆ ವಾಕ್ ಸ್ವಾತಂತ್ರ್ಯ ?
ಎಲ್ಲಾ ದಾಖಲೆ ಗಳನ್ನು ನಾನು ಈಗಾಗಲೇ ಮಾದ್ಯಮದೆದುರು, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದೇನೆ. ಶಾಸಕರು ಒಂದೂ ಹೇಳಿಕೆ ನೀಡದೆ ಇದ್ದದ್ದನ್ನು ನೋಡಿದರೆ ಶಾಸಕರು ಭಯಗೊಂಡಿದ್ದಾರೆ ಎನಿಸುತ್ತದೆ. ಬಸ್ಸ್ಟಾಂಡ್ ಮತ್ತು ಇಂದಿರಾ ಕ್ಯಾಂಟಿನ್ ಉದ್ಘಾಟನೆ ತಕ್ಷಣ ಆಗಲೇಬೇಕು. ಅಸ್ಪತ್ರೆಗೆ ಸಿಬ್ಬಂದಿ ನೇಮಕ ಆಗಬೇಕು, 30 ಕೋಟಿ ಹಣ ಅಸ್ಪತ್ರೆಗೆ ಸಾಮಗ್ರಿಗಳಿಗೆ ಬೇಕಾಗಿದೆ, ಅದನ್ನ ತರುವ ಕೆಲಸವಾಗಲಿ. — ಅನಂತಮೂರ್ತಿ ಹೆಗಡೆ, ಬಿಜೆಪಿ ಮುಖಂಡ