ಮುಗ್ವಾ ಸರ್ಕಾರಿ ಶಾಲೆಯಲ್ಲಿ ಕಲಿಕಾ ಹಬ್ಬ: ಗಮನ ಸೆಳೆದ ವಿವಿಧ ಚಟುವಟಿಕೆಗಳು
ಹೊನ್ನಾವರ: ತಾಲೂಕಿನ ಮುಗ್ವಾ ಕ್ಲಸ್ಟರನ ಮುಗ್ವಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಕಲಿಕಾ ಹಬ್ಬ ಯಶಸ್ವಿಯಾಗಿ ನೆರವೇರಿತು.
ಮುಗ್ವಾ ಗ್ರಾಮ ಪಂಚಾಯಿತಿದ ಅಧ್ಯಕ್ಷರಾದ ಐ.ವಿ. ನಾಯಕ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಕಲಿಕಾ ಹಬ್ಬದ ನಾಮಫಲಕ ಅನಾವರಣಗೊಳಿಸುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಮಾತನಾಡಿ, ಕಲಿಕಾ ಹಬ್ಬ ವಿದ್ಯಾರ್ಥಿಗಳ ಜೀವನಕ್ಕೆ ಬೆಳಕಾಗಲಿ. ಪಾಲಕರು ಪೋಷಕರು ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ಬೆಳೆಸಲಿ ಹಾಗೂ, ಸರ್ಕಾರಿ ಶಾಲೆಗೆ ಸೇರಿಸಿ ಎಂಬ ಕಿವಿ ಮಾತನ್ನು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ವಿನಾಯಕ ಅವಧಾನಿ ಇವರು ಕಾರ್ಯಕ್ರಮದ ಕುರಿತು ಭಯ ಮುಕ್ತ ವಾತಾವರಣ ಸಂತಸದಾಯಕ ಕಲಿಕೆ ಅತ್ಯಂತ ಪರಿಣಾಮಕಾರಿ. ಎಲ್ಲಾ ವಿದ್ಯಾರ್ಥಿಗಳು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನವನ್ನು ತಿಳಿದಿರಬೇಕು ಎಂದು ಹೇಳಿದರು. ಪ್ರೌಢ ಬಿಆರ್ಪಿಗಳಾದ ಎಂ.ಆರ್.ಭಟ್ ಮಾತನಾಡಿ ಇದೊಂದು ಶೈಕ್ಷಣಿಕವಾದಂತ ಚಟುವಟಿಕೆಯಾಗಿದ್ದು, ಪಾಲಕರು ಪೋಷಕರೊಡನೆ ಸಂಬಂಧವನ್ನು ಗಟ್ಟಿಗೊಳಿಸುವ ಅಂತ ಉತ್ತಮವಾದ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಇಂದು ಸುಸಂಸ್ಕೃತರಾಗಿ ಬೆಳೆಯಬೇಕು ಎಂಬುದನ್ನು ಅಭಿಪ್ರಾಯ ವ್ಯಕ್ತಪಡಿಸಿದರು. ಎಸ್ಡಿಎಂಸಿ ಅಧ್ಯಕ್ಷರಾದ ಮಹಾಬಲೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಂಘದ ಪದಾಧಿಕಾರಿಗಳಾದ ಶ್ರೀಮತಿ ಗೌರಿ ಭಟ್,ಶ್ರೀಮತಿ ಶಾರದಾ ಹೆಗಡೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ವೀಣಾ ನಾಯಕ್, ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಪ್ರಮೀಳಾ ಕೆ,ಎಸ್.ಇವರು ಸಭೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಪ್ರಮೀಳಾ ಕೆ.ಎಸ್. ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಹಿರಿಯ ಪ್ರಾಥಮಿಕ ಶಾಲೆ ಮುಗ್ವಾದ ಮುಖ್ಯ ಶಿಕ್ಷಕರಾದ ಶ್ರೀಮತಿ ಅವರು ಎಲ್ಲರನ್ನ ವಂದಿಸಿದರು. ಸಹ ಶಿಕ್ಷಕರಾದ ಶ್ರೀಮತಿ ನಾಗವೇಣಿ ಶೇಟ್ ಮತ್ತು ಶ್ರೀಮತಿ ಚೇತನ ಹೆಗಡೆ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ನಂತರ ಗಟ್ಟಿ ಓದು, ಕಥೆ ವಿನೋದ್ ಕೈಬರಹ ಸಂತೋಷದಾಯಕ ಗಣಿತ ಮೆಮೊರಿ ಪರೀಕ್ಷೆ ರಸಪ್ರಶ್ನೆ ಪೋಷಕರು ಮತ್ತು ಮಕ್ಕಳ ಸಹ ಸಂಬಂಧದ ವಲಯ ಹೀಗೆ ಏಳು ವಲಯಗಳಲ್ಲಿ ಅತ್ಯಂತ ಆಕರ್ಷಣೀಯವಾದ ಚಟುವಟಿಕೆಯನ್ನು ಏರ್ಪಡಿಸಲಾಗಿತ್ತು. ನಿರ್ವಾಹಕರು ತಮ್ಮ ತಮ್ಮ ವಲಯಗಳಲ್ಲಿ ಅತ್ಯಾಕರ್ಷಕ ಚಟುವಟಿಕೆಗಳನ್ನು ಮಾಡುವುದರಿಂದ ಕಲಿಕಾ ಭಾಗವನ್ನು ಯಶಸ್ವಿಗೊಳಿಸಲು ಸಹಕರಿಸಿದರು. ಈ ಸುಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕ್ರಿಯಾಶೀಲ ಅಧ್ಯಕ್ಷರಾದ ಎಂ.ಜಿ.ನಾಯ್ಕ್ ಆಗಮಿಸಿ ಕಾರ್ಯಕ್ರಮದಲ್ಲಿ ವಿಭಿನ್ನವಾದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಭಾಗವಹಿಸುತ್ತಿರುವುದನ್ನು ಕಂಡು ಹರ್ಷ ವ್ಯಕ್ತಪಡಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಸುಧೀಶ್ ನಾಯಕ್ ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳ ಸರ್ವಂಗಣ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. FLN ನೋಡಲ್ ಅಧಿಕಾರಿ ಹಾಗೂ ಬಿಆರ್ಪಿ ಗಳಾದ ವಿ.ಜಿ. ನಾಯ್ಕ್ ಆಗಮಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಕೊನೆಯಲ್ಲಿ ಪ್ರತಿ ವಲಯದಲ್ಲಿಯೂ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಹಾಗೂ ವಿವಿಧ ಶಾಲೆಗಳಿಂದ ಆರಂಭಿಸಿದಂತಹ ಎಲ್ಲ ವಿದ್ಯಾರ್ಥಿಗಳಿಗೂ ಕೂಡ ಬಹುಮಾನವನ್ನು ವಿತರಿಸಲಾಯಿತು.ಒಟ್ಟಾರೆ ಇಲಾಖೆಯ ವಿನೂತನ ಕಾರ್ಯಕ್ರಮ ಮಕ್ಕಳಲ್ಲಿ ಶೈಕ್ಷಣಿಕ ಜ್ಞಾನವನ್ನು ಹೆಚ್ಚಿಸುವುದಲ್ಲದೆ ಸಂತಸದಾಯಕ ಕಲಿಕೆಯ ಮೂಲಕ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಕಾರಣವಾಯಿತು.