Slide
Slide
Slide
previous arrow
next arrow

ಅಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ

300x250 AD

ಭಟ್ಕಳ ಸರ್ಕಾರಿ ಕಛೇರಿಗಳಲ್ಲಿ ನಿಯಮ ಉಲ್ಲಂಘಿಸಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು

ಭಟ್ಕಳ : ಭಟ್ಕಳ ತಹಶೀಲ್ದಾ‌ರ್ ಕಛೇರಿ ಮತ್ತು ಸಹಾಯಕ ಆಯುಕ್ತರ ಕಛೇರಿಗಳಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಹಳೆ ತಹಶೀಲ್ದಾರ್ ಕಛೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಶುಕ್ರವಾರದಂದು ಆರಂಭಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಆಡಳಿತ ಸೌಧದಲ್ಲಿ ಮತ್ತು ಸಹಾಯಕ ಆಯುಕ್ತ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ನಿಯಮಾವಳಿಗಳನ್ನು ಗಾಳಿಗೆ ತೂರಿ ಒಂದೇ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆದ್ದರಿಂದ ತಕ್ಷಣ ಇಂತಹ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬೇರೆ ತಾಲೂಕಿಗೆ ಅಥವಾ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿ ನಿಯಮಾವಳಿಗಳನ್ನು ಪಾಲಿಸಿ, ಸಾಮಾಜಿಕ ನ್ಯಾಯ ಒದಗಿಸುವಂತೆ ಕೇಳಿಕೊಳ್ಳುತ್ತಿದ್ದೇವೆ.

 ಇಂತಹ ಸಿಬ್ಬಂದಿಗಳು ಒಂದೇ ಸ್ಥಳದಲ್ಲಿ ಕೆಲಸ ಮಾಡುವುದರಿಂದ ಇಲಾಖೆಯ ಘನತೆ, ಗೌರವ ಹಾಳಾಗುತ್ತಿದೆ. ಮತ್ತು ಇಂತಹ ಸಿಬ್ಬಂದಿಗಳಿಂದ ಸಾರ್ವಜನಿಕರ ಕೆಲಸವೂ ಆಗುವುದಿಲ್ಲ. ಇಲ್ಲಿರುವ ಸಿಬ್ಬಂದಿಗಳು, ಸಾರ್ವಜನಿಕರ ಕೆಲಸ ಮಾಡುವುದಕ್ಕಿಂತ ದಲ್ಲಾಳಿಗಳ ಕೆಲಸಕ್ಕೆ ಸೀಮಿತವಾದಂತಿದೆ. ಮತ್ತು ಇಲ್ಲಿರುವ ಸಿಬ್ಬಂದಿಗಳ ವರ್ಗಾವಣೆಯು ಸಹಾಯಕ ಆಯುಕ್ತರ ಕಚೇರಿಯಿಂದ ತಹಶೀಲ್ದಾರ ಕಚೇರಿಗೆ, ತಹಶೀಲ್ದಾರ ಕಚೇರಿಯಿಂದ ಸಹಾಯಕ ಆಯುಕ್ತರ ಕಚೇರಿ ಮಾತ್ರ ಸೀಮಿತವಾಗಿ ವರ್ಗಾವಣೆಯಾಗಿದ್ದು, ಇವರ ನೌಕರಿಯು ಕೇವಲ ಭಟ್ಕಳ ತಾಲೂಕಿಗೆ ಮಾತ್ರ ಸೀಮಿತವಾಗಿರುತ್ತದೆ.

300x250 AD

ಕೇವಲ ಆಡಳಿತದಲ್ಲಿ ಪಾರದರ್ಶಕ ತರಲು ತಹಶೀಲ್ದಾರರನ್ನು ಮಾತ್ರ ವರ್ಗಾವಣೆ ಮಾಡಿದರೆ, ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತಂದು ಕೊಳ್ಳುವುದು ಕಷ್ಟದ ಸಂಗತಿ. ಈ ಹಿಂದೆ ಸಹಾಯಕ ಆಯುಕ್ತ ಕಚೇರಿಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಚುನಾವಣಾ ಅಧಿಕಾರಿಗಳಿಗೆ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಲೆಕ್ಕಿಸದೇ ಸಾರ್ವಜನಿಕರ ಪರವಾಗಿ ಕ್ರಮ ಕೈಗೊಳ್ಳದೇ ಇಲಾಖೆಯ ಅಧಿಕಾರಿಗಳ ಪರವಾಗಿಯೇ ವರ್ತಿಸುತ್ತಿರುವ ಜಿಲ್ಲಾಡಳಿತದ ಧೋರಣೆಯನ್ನು ವಿರೋಧಿಸಿ ನಾವು ಈ ಧರಿಣಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶಂಕರ ನಾಯ್ಕ ಮಾತನಾಡಿ ಕಳೆದ 10 ವರ್ಷಗಳಿಂದ ಮೇಲ್ಪಟ್ಟ ಸಿಬ್ಬಂದಿಗಳನ್ನು  ವರ್ಗಾವಣೆ ಮಾಡುವಂತೆ ಈಗಾಗಲೇ ಮನವಿಯನ್ನು ನೀಡಿದ್ದೇವೆ. ಆದರೆ ನಮ್ಮ ನಮ್ಮ ಮನವಿಯನ್ನು ಪುರಸ್ಕರಿಸದೆ, ವರ್ಗಾವಣೆ ನಿಯಮಾವಳಿಯನ್ನು ಪಾಲನೆ ಮಾಡದೆ. ಅಧಿಕಾರಿಗಳೇ ನಮ್ಮನ್ನು ಈ ಹೋರಾಟಕ್ಕೆ ಇಳಿಯುವಂತೆ ಮಾಡಿದ್ದಾರೆ. ಕಾರಣ ಅವರ ಬೇಜವಾಬ್ದಾರಿ ತನ ಹಾಗೂ ಅವರ ಆಡಳಿತ ನಿರ್ಲಕ್ಷ್ಯ ಎಂದು ಹೇಳಬಹುದು.  ಗಾಂಧಿ ಮಾರ್ಗ ಹಾಗೂ ಅಂಬೇಡ್ಕರ್ ಅವರ ನೀತಿ ಪಾಠದ ಅಡಿಯಲ್ಲಿ ಇಂದಿನ ಈ ಹೋರಾಟ ಮಾಡುತ್ತಿದ್ದೇವೆ ಎಂದರು.

ಹೋರಾಟದಲ್ಲಿ ಪಾಲ್ಗೊಂಡಿದ್ದ ರಾಜ್ಯ ಅಧ್ಯಕ್ಷ ಚೆನ್ನಯ್ಯ ವಸ್ತ್ರದ್ ಮಾತನಾಡಿ ಪ್ರತಿಭಟನೆ ಮಾಡಲು ಅಧಿಕಾರಿಗಳೇ ನಮಗೆ ಅವಕಾಶ ಮಾಡಿಕೊಟ್ಟಿದ್ದೀರಾ. ಮಾಡುವ ಕೆಲಸವನ್ನು ನೀವು ಸರಿಯಾಗಿ ಮಾಡಿದ್ದರೆ. ನಾವು ಇಲ್ಲಿ ಬಂದು ಕುಳಿತುಕೊಳ್ಳುವ ಅವಶ್ಯಕತೆ ಬರುತ್ತಿರಲಿಲ್ಲ. ನಾವು ಸಂವಿಧಾನದ ಪರವಾಗಿ ಕೆಲಸ ಮಾಡುತ್ತಿದ್ದೇವೆ. 10 ವರ್ಷಗಳಿಂದ ಮೇಲ್ಪಟ್ಟ ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವ ತನಕ ಈ ಹೋರಾಟವನ್ನು ನಾವು ನಿಲ್ಲಿಸುವುದಿಲ್ಲ. ನಾವು ಯಾರು ಇಲ್ಲಿ ಹಣಕ್ಕೆ ಬಂದು  ಪ್ರತಿಭಟನೆಯಾಗಲಿ ಹೋರಾಟವಾಗಲಿ ಮಾಡುತ್ತಿಲ್ಲ. ಅಧಿಕಾರಿಗಳು ವರ್ಗಾವಣೆ ಮಾಡಿಸಿದರೆ ನಮಗೆ ಯಾರು ಹಣ ನೀಡುವುದಿಲ್ಲ. ಸ್ವಇಚ್ಛೆಯಿಂದ ಸಂವಿಧಾನವನ್ನು ಕಾಪಾಡಬೇಕು, ಕಾನೂನು ಪಾಲನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯುತ್ತಿದೆ. ಇಂದು ನಮ್ಮ ಹೋರಾಟ ಪ್ರಾರಂಭವಾಗಿದೆ. ನೀವು ಇಲ್ಲಿ ತನಕ ನಮ್ಮ ಬೇಡಿಕೆಯನ್ನು ಈಡೇರಿಸಿ ನೀವು ಸೂಕ್ತ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ರಾಜು ನಾಯ್ಕ, ಭಟ್ಕಳ ತಾಲೂಕು ಅಧ್ಯಕ್ಷ ನಾಗೇಂದ್ರ ನಾಯ್ಕ , ಉಪಾಧ್ಯಕ್ಷ ವಸಂತ ದೇವಾಡಿಗ,ತಾಲೂಕು ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ, ಜೇವರ್ಗಿ ತಾಲೂಕು ಅಧ್ಯಕ್ಷ ವೀರೇಶ ಮಠ,  ಪ್ರಧಾನ ಕಾರ್ಯದರ್ಶಿ, ವಿಶ್ವನಾಥ ಪಾಟೀಲ, ಕಲಬುರ್ಗಿ ಜಿಲ್ಲಾ ಉಪಾಧ್ಯಕ್ಷ ಶ್ರೀಶೈಲ ಬಿಲ್ಲಾಳ ಮತ್ತು ಪದಾಧಿಕಾರಿಗಳು, ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು‌

Share This
300x250 AD
300x250 AD
300x250 AD
Back to top