Slide
Slide
Slide
previous arrow
next arrow

ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 1.36 ಲಕ್ಷ ರೂ. ಲಾಭ

300x250 AD

ಶಿರಸಿ: ತಾಲೂಕಿನ ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯು ಸೆ.10 ರ ಭಾನುವಾರದಂದು ಜರುಗಿತು. ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್‌ ಲಿ., ಶಿರಸಿಯ ನಿರ್ದೇಶಕರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಹಾಗೂ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರಾದಂತಹ ಶಂಕರ ಪರಮೇಶ್ವರ ಹೆಗಡೆ ಮುಖ್ಯ ಅತಿಥಿಗಳಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಶಿನ್ಮನೆ, ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘವು ಕಾರ್ಯಾರಂಭವಾಗಿ ಕೇವಲ ಎರಡೇ ವರ್ಷದಲ್ಲಿ ರೂ.1.36 ಲಕ್ಷ ಲಾಭಗಳಿಸಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಆಡಳಿತ ಮಂಡಳಿಯ ಜವಾಬ್ದಾರಿಯುತವಾದ ಕೆಲಸ, ಈ ಭಾಗದ ರೈತರು ಸಂಘಕ್ಕೆ ಗುಣಮಟ್ಟದ ಹಾಲು ಪೂರೈಸಿದ್ದು ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕರ ಸಮಯಕ್ಕೆ ಸರಿಯಾದ ಮಾಡಲ್ಪಟ್ಟ ಲೆಕ್ಕ ಪತ್ರ ನಿರ್ವಹಣೆಯಿಂದ ಬೊಪ್ಪನಳ್ಳಿ ಹಾಲು ಸಂಘವು ತಾಲೂಕಿನಲ್ಲಿ ಮಾದರಿ ಸಂಘವಾಗಿದೆ. ಈ ಭಾಗದ ಜನರು ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ಬಹಳ ಉತ್ಸುಕತೆಯಿಂದ ತೊಡಗಿಸಿಕೊಂಡಿದ್ದು ಇದರಿಂದ ತಮ್ಮ ಹಾಗೂ ಸಂಘದ ಅಭಿವೃದ್ಧಿಗೆ ಕಾರಣೀಕರ್ತರಾಗಿದ್ದಾರೆ ಎಂದರು.

ಸಂಘ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಒಳ್ಳೆಯ ಗುಣಮಟ್ಟದ ಹಾಲನ್ನು ಶೇಖರಿಸುತ್ತಾ ರೈತರಿಗೆ ಯೋಗ್ಯ ದರವನ್ನು ನೀಡುತ್ತಾ ಬಂದಿದ್ದು, ಇದರಿಂದ ಇಲ್ಲಿನ ಭಾಗದ ಜನರಿಗೆ ಇನ್ನೂ ಅತೀ ಹೆಚ್ಚಿನ ಹಾಲನ್ನು ಉತ್ಪಾದಿಸುವಲ್ಲಿ ಸಹಕಾರಿಯಾಗಿದೆ ಎಂದರು. ಸಂಘಗಳು ಗಳಿಸಿದ ಲಾಭದಲ್ಲಿ ಹಾಲು ಉತ್ಪಾದಕ ರೈತರಿಗೆ ಉತ್ತೇಜನ ನೀಡುವ ಯೋಜನೆ ಹಾಗೂ ಅನುಕೂಲಗಳನ್ನು ಹಾಲು ಸಂಘಗಳು ಕಲ್ಪಿಸಿಕೊಡುವಂತೆ ಅವರು ತಿಳಿಸಿದರು. ಕೃಷಿಗೆ ಅದರಲ್ಲೂ ನಮ್ಮ ಭಾಗದಲ್ಲಿ ರೈತರ ಕೃಷಿಗಾಗಿ ಹೈನುಗಾರಿಕೆಯು ತುಂಬಾ ಅತ್ಯಾವಶ್ಯಕವಾಗಿದ್ದು, ಇದರಿಂದ ಕೃಷಿ ಕ್ಷೇತ್ರದಲ್ಲಿ ನಾವು ಸ್ವಾವಲಂಭಿಗಳಾಗಲು ಹೈನುಗಾರಿಕೆಯ ಬಗ್ಗೆ ಹೆಚ್ಚಿನ ಒಲವು ಹೊಂದುವಂತೆ ಮಾಡಲು ಕೆ.ಡಿ.ಸಿ.ಸಿ. ಬ್ಯಾಂಕ್‌ ವತಿಯಿಂದ ಹಾಲು ಉತ್ಪಾದಕರ ಸಂಘಗಳಲ್ಲಿ ಹಾಲು ಪೂರೈಸುತ್ತಿರುವ ಉತ್ಪಾದಕರಿಗೆ ಎರಡು ಆಕಳಿಗೆ 36,000 ರಂತೆ, ಎರಡು ಎಮ್ಮೆಗಳಿಗೆ ರೂ. 42,000 ಗಳನ್ನು ಕೆ.ಸಿ.ಸಿ. ಯೋಜನೆಯ ಅಡಿಯಲ್ಲಿ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.

ಹಾಲು ಉತ್ಪಾದಕರ ಹಿತಕೊಕ್ಕಸ್ಕರ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಧಾರವಾಡ ಹಾಲು ಒಕ್ಕೂಟ ಮತ್ತು ಕಲ್ಯಾಣ ಸಂಘ ಈಗಾಗಲೇ ಕೈಗೊಂಡಿದ್ದು ಅದರಲ್ಲಿ ಜಾನುವಾರು ವಿಮೆ, ಕಲ್ಯಾಣ ಸಂಘದ ಸದಸ್ಯರ ವಿಮೆ, ಹೈನೋದ್ಯಮಕ್ಕೆ ಅನುಕೂಲಕವಾಗುವ ಮೇವು ಕತ್ರಿಸುವ ಯಂತ್ರ, ರಬ್ಬರ್‌ ಮ್ಯಾಟ್‌ ಹಾಗೂ ಸೌರ ಚಾಲಿತ ಹಾಲು ಕರೆಯುವ ತಂತ್ರಗಳನ್ನು ಜಿಲ್ಲೆಯ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಈಗಾಗಲೇ ವಿತರಿಸಲಾಗಿದೆ. ರೈತರಿಗೆ ಅನುಕೂಲವಾಗಿವ ದೃಷ್ಠಿಯಿಂದ ರಸ ಮೇವಿನ ಅಚ್ಚುಗಳನ್ನು ನೇರವಾಗಿ ಪಶು ಆಹಾರದ ಜೊತೆಗೆ ಹಾಲು ಉತ್ಪಾದಕರ ಸಂಘಗಳಿಗೆ ವಿತರಿಸಲಾಗುವುದು ಎಂದರು.

300x250 AD

ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದ ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಸೀತಾರಾಮ ಭಟ್, ಸಂಘವು ಕಾರ್ಯಾರಂಭವಾದ 2022-2023 ನೇ ಸಾಲಿನಲ್ಲಿ ರೂ. 15,74,568 ಮೊತ್ತದ 60,222 ಲೀ. ಹಾಲನ್ನು ಉತ್ಪಾದಕರಿಂದ ಖರೀದಿಸಿ ಧಾರವಾಡ ಸಹಕಾರ ಹಾಲು ಒಕ್ಕೂಟಕ್ಕೆ ರೂ. 16,50,641 ಮೊತ್ತದ 55,362 ಲೀ. ಹಾಲನ್ನು ಮಾರಾಟ ಮಾಡಿದ್ದು, 4860 ಲೀಟರ್ ನಷ್ಟು ಹಾಲನ್ನು ರೂ. 01,76,501.50 ಗೆ ಸ್ಥಳೀಯವಾಗಿ ಮಾರಾಟ ಮಾಡಿರುತ್ತದೆ. ರೂ. 11,73,385 ಗಳನ್ನು ಪಶು ಆಹಾರ ಮಾರಾಟದಿಂದ, ರೂ. 7680 ಗಳನ್ನು ಖನಿಜ ಮಿಶ್ರಣದ ಮಾರಾಟದಿಂದ ಗಳಿಸಿ ಸಂಘವು ರೂ.2,63,931 ಗಳ ವ್ಯಾಪಾರಿ ಲಾಭ ಗಳಿಸಿದ್ದು, ವ್ಯಾವಹಾರಿಕ ವರ್ಷದಲ್ಲಿ ರೂ.1,36,757 ಗಳ ನಿಕ್ಕಿ ಲಾಭವನ್ನು ಸಂಘ ಗಳಿಸಿದೆ ಎಂದರು. ಹಾಗೂ ಸಂಘದ ಸದಸ್ಯರಿಗೆ ಶೇ.10 ರಷ್ಟು ಡಿವಿಡೆಂಡ್‌ ಘೋಷಣೆ ಮಾಡಿದ್ದು, ಹಾಲು ಉತ್ಪಾದಕರಿಗೆ ರೂ. 60,461 ಗಳನ್ನು ಬೋನಸ್‌ ರೂಪದಲ್ಲಿ ನೀಡಲು ನಿರ್ಧರಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಂಘದ ಸದಸ್ಯರಿಗೆ ಶೇರು ಪ್ರಮಾಣ ಪತ್ರವನ್ನು ನೀಡಲಾಯಿತು.

ಧಾರವಾಡ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಶಂಕರ ಪರಮೇಶ್ವರ ಹೆಗಡೆ ಮಾತನಾಡಿ, ಮುಂದಿನ ದಿನಗಳಲ್ಲಿ ಬೊಪ್ಪನಳ್ಳಿ ಹಾಲು ಸಂಘವು ಇನ್ನೂ ಹೆಚ್ಚಿನ ಪ್ರಗತಿ ಹೊಂದಿ ಈ ಭಾಗದ ಹಾಲು ಉತ್ಪಾದಕ ರೈತರ ಯಶಸ್ಸಿಗೆ ಶ್ರಮಿಸುವಂತಾಗಲಿ ಎಂದು ಶುಭ ಕೋರಿದರು.
2022-2023 ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಒಳ್ಳೆಯ ಗುಣಮಟ್ಟದ ಹಾಲು ಪೂರೈಸಿದ ರವಿ ಕೃಷ್ಣ ದೇವಾಡಿಗ, ದಾಮೋದರ ಮಂಜುನಾಥ ಮೇಸ್ತ, ತಿಮ್ಮಪ್ಪ ಗಣಪತಿ ಹೆಗಡೆ ಇವರುಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಪ್ರಭಾಕರ ಶಂಕರ ಹೆಗಡೆ ಮಾತನಾಡುತ್ತಾ ಸಂಘವು ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಕಳೆದ ಎರಡು ವರ್ಷದ ಸಮಯದಲ್ಲಿ ನಮ್ಮ ಸಂಘವು ಉತ್ತಮ ಪ್ರಗತಿ ಸಾಧಿಸಿದ್ದು, ಇದು ಅತ್ಯಂತ ಖುಷಿಯ ಸಂಗತಿಯಾಗಿದೆ. ರೈತರು ಹೈನುಗಾರಿಕೆಯನ್ನು ಕೇವಲ ಲಾಭದಾಯಕ ಕಸುಬನ್ನಾಗಿ ಮಾತ್ರ ಪರಿಗಣಿಸದೇ ನಮ್ಮ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಯ ದೃಷ್ಠಿಯಿಂದ ಹೈನುಗಾರಿಕೆ ನಡೆಸಿಕೊಂಡು ಹೋಗಬೇಕು ಎಂದರು. ಸಂಘದ ಏಳೆಗೆಗೆ ಶ್ರಮಿಸಿದ ಪ್ರತೀಯೊಬ್ಬ ಹಾಲು ಉತ್ಪಾದಕ ರೈತರಿಗೆ, ಸಂಘದ ಆಡಳಿತ ಮಂಡಳಿಯ ಸರ್ವ ಸದಸ್ಯರಿಗೆ, ಮುಖ್ಯ ಕಾರ್ಯನಿರ್ವಾಹಕರಿಗೆ ಹಾಗೂ ಸಂಘದ ಕುಂದು ಕೊರತೆಗಳನ್ನು ಆಲಿಸಿ ಅವುಗಳಿಗೆ ಶೀಘ್ರ ಸ್ಪಂದಿಸಿ ಸಂಘ ಹಾಗೂ ಈ ಭಾಗದ ಹಾಲು ಉತ್ಪಾದಕರ ರೈತರ ಜೊತೆ ಸದಾ ಇರುವ ರೈತಪರ ಕೆಲಸಗಳನ್ನು ಮಾಡುತ್ತಾ ಬಂದಿರುವ ಧಾರವಾಡ ಸಹಕಾರ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್‌ ಲಿ., ಶಿರಸಿಯ ನಿರ್ದೇಶಕರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರಿಗೆ ಸಂಘ ಹಾಗೂ ಹಾಲು ಉತ್ಪಾದಕರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಸೀತಾರಾಮ ಭಟ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಘದ ಉಪಾಧ್ಯಕ್ಷರಾದ ವಿನಾಯಕ ಪ್ರಭಾಕರ ಹೆಗಡೆ ವಂದಿಸಿದರು. ಆಡಳಿತ ಮಂಡಳಿಯ ಸದಸ್ಯರಗಳು, ಹಾಲು ಉತ್ಪಾದಕರುಗಳು ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top