Slide
Slide
Slide
previous arrow
next arrow

ರಾಷ್ಟ್ರ ವಿಜ್ಞಾನ ನಾಟಕೋತ್ಸವ: ದಕ್ಷಿಣ ಭಾರತ ಪ್ರತಿನಿಧಿಸಿದ ಶಿರಸಿ ಶಾಲಾ ತಂಡ

300x250 AD

ಶಿರಸಿ: ಬೆಂಗಳೂರಿನಲ್ಲಿ ನಡೆದ ರಾಷ್ಟ್ರ‌ಮಟ್ಟದ ವಿಜ್ಞಾನ ನಾಟಕ ಉತ್ಸವದಲ್ಲಿ  ದಕ್ಷಿಣ ಭಾರತ  ಪ್ರತಿನಿಧಿಸಿದ್ದ ಶಿರಸಿಯ ಸರಕಾರಿ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಒಂದು‌ ಲಸಿಕೆ ಕಥೆ’ ರಂಗ ಪ್ರದರ್ಶನ ರಾಷ್ಟ್ರ‌ಮಟ್ಟದ ರಂಗ‌ ತಂತ್ರಜ್ಞರ, ನಿರ್ದೇಶಕರ‌ ಮೆಚ್ಚುಗೆಗೆ  ಪಾತ್ರವಾಯಿತು.

ಬೆಂಗಳೂರಿನ ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯದಲ್ಲಿ ಗುರುವಾರ ನಡೆದ ದೇಶದ ನಾಲ್ಕೂ ವಿಭಾಗಗಳಿಂದ ಪ್ರಥಮ, ದ್ವಿತೀಯ ಸ್ಥಾನ ಪಡೆದ  ವಿಜ್ಞಾನ ನಾಟಕಗಳ ನಾಟಕೋತ್ಸವದಲ್ಲಿ ಶಿರಸಿ‌ ಮಕ್ಕಳ ನಾಟಕ ಲಸಿಕೆಯ ಕಥೆ ತೆರದಿಟ್ಟಿತು.

300x250 AD

ಬೆಂಗಳೂರಿನ ರಂಗ ಶಂಕರದ ಸಂಸ್ಥಾಪಕಿ, ನಟಿ ಅರುಂಧತಿ‌ ನಾಗ್ ಅವರೂ ಶಿರಸಿ ಮಕ್ಕಳು ಪ್ರದರ್ಶನ ನೀಡಿದ‌ ನಾಟಕಕ್ಕೆ ಮೆಚ್ಚುಗೆ ಸೂಚಿಸಿ, ನಾಟಕದೊಳಗೆ ಬಳಸಿಕೊಂಡ ರಂಗ ಪದ್ಯಗಳಿಗೂ ತಲೆದೂಗಿದರು.
ಕೇವಲ 8 ವಿದ್ಯಾರ್ಥಿಗಳು 29 ಪಾತ್ರ ನಿರ್ವಹಿಸಿದ  ನಾಟಕವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಕನ್ನಡ ಶಿಕ್ಷಕ ನಾರಾಯಣ‌ ಭಾಗ್ವತ್ ನಿರ್ದೇಶಿಸಿದ್ದು, ವಿಜ್ಞಾನ ಶಿಕ್ಷಕಿ ಜಯಲಕ್ಷ್ಮಿ ಗುನಗಾ ನಿರ್ವಹಿಸಿದ್ದಾರೆ. ಈ ನಾಟಕವು
ಸಾಂಕ್ರಾಮಿಕ ರೋಗಗಳ ವಿರುದ್ಧದಲ್ಲಿ ಕೆಲಸ‌ ಮಾಡುವ ಲಸಿಕೆಗಳ ಹುಟ್ಟು, ಅವುಗಳ ಬೆಳವಣಿಗೆ, ಜನರ ವಿರೋಧ ಇದ್ದರೂ ಅದನ್ನು ಎದುರಿಸಿ ಜನತೆಯ ಆರೋಗ್ಯ ರಕ್ಷಣೆಗೆ ಕಟಿಬದ್ಧರಾದ ವಿಜ್ಞಾನಿಗಳು ಹಾಗೂ ಅವರು ನೀಡಿದ ಕೊಡುಗೆಯ ಕುರಿತಾದ ಚಿತ್ರಣವನ್ನು ಪರಿಣಾಮಕಾರಿಯಾಗಿ ಬಿಂಬಿಸಿತು. ಒಂದು‌ ಲಸಿಕೆಯ ಕಥೆ ಮೂವತ್ತು‌ ನಿಮಿಷದಲ್ಲಿ ಶತಮಾನದ ಒಟ್ಟೂ ವೈದ್ಯಕೀಯ ಸಾಧನೆ ಬಿಚ್ಚಿಟ್ಟಿತು.  ವಿದ್ಯಾರ್ಥಿಗಳ ಭಾವಪೂರ್ಣ ಲವಲವಿಕೆಯ ಅಭಿನಯವು ನಾಟಕ ಉತ್ಸವದಲ್ಲಿ ಉಲ್ಲೇಖಿತಗೊಂಡಿತು.
ಪಾತ್ರಧಾರಿಗಳಾಗಿ  ತುಳಸಿ ಹೆಗಡೆ, ಸ್ಪಂದನಾ ಭಟ್ಟ, ಜಯಶ್ರೀ ಭಟ್ಟ, ನವ್ಯಾ ಹೆಗಡೆ, ಶ್ರೀಜಾ ಭಟ್ಟ, ಮಾನ್ಯ ಹೆಗಡೆ, ಕಿಶನ್ ಕುಮಾರ ಹೆಗಡೆ , ದರ್ಶನ್ ಎಸ್. ಭಟ್, ಪ್ರತ್ವಿಕ್ ಮೋಹನದಾಸ ನಾಯಕ ಅಚ್ಚುಕಟ್ಟಾಗಿ ನಿರ್ವಹಿಸಿ ನಾಟಕ ಪರಿಣಾಮಕಾರಿಯಾಗಿಸಿದರು.   ನಾಗರಾಜ ಭಂಡಾರಿ ಬೆಳಕಿ‌ನ ಸಹಕಾರ ನೀಡಿದರು.
ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ಪ್ರತಿನಿಧಿಸಿ ಗೆದ್ದು ರಾಷ್ಟ್ರೀಯ ನಾಟಕ ಉತ್ಸವದಲ್ಲಿ ದಕ್ಷಿಣ ಭಾರತದ ಪರವಾಗಿ  ಪಾಲ್ಗೊಂಡು ಗಮನ ಸೆಳೆಯಿತು. ಮಾರಿಕಾಂಬಾದ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು  ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಆರ್.ಡಿ.ಹೆಗಡೆ, ಡಿಡಿಪಿಐ ಬಸವರಾಜು, ಬಿಇಓ ಎಂ.ಎಸ್.ಹೆಗಡೆ, ಮಾರಿಕಾಂಬಾ ಪ್ರೌಢಶಾಲೆಯ ಪ್ರಭಾರಿ‌ ಮುಖ್ಯ ಶಿಕ್ಷಕ ಆರ್.ವಿ.ನಾಯ್ಕ, ಶಾಲಾಭಿವೃದ್ದಿ ಸಮಿತಿ ಪದಾಧಿಕಾರಿಗಳು,  ಶಿಕ್ಷಕ ವೃಂದ  ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top