Slide
Slide
Slide
previous arrow
next arrow

ಧರ್ಮಾಧಾರಿತ ರಾಜಕೀಯದಿಂದ ಕೋಮು ಸಾಮರಸ್ಯ ಕದಡಿದೆ: ಮೀನಾಕ್ಷಿ ಸುಂದರಂ

300x250 AD

ದಾಂಡೇಲಿ: ಎರಡು ದಿನಗಳ ಉತ್ತರ ಕನ್ನಡ ಜಿಲ್ಲಾ 10ನೇ ಸಿಐಟಿಯು ಸಮ್ಮೇಳನಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ಅಖಿಲ ಬಾರತ ಸಿಐಟಿಯು ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾರ್ಯದರ್ಶಿಯು ಆಗಿರುವ ಮೀನಾಕ್ಷಿ ಸುಂದರಂ ಶನಿವಾರ ಚಾಲನೆ ನೀಡಿದರು.
ಆರಂಭದಲ್ಲಿ ನಗರದ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ಐನೂರಕ್ಕೂ ಹೆಚ್ಚು ಸಿಐಟಿಯು ಕಾರ್ಯಕರ್ತರು, ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಅಂಬೇಡ್ಕರ್ ಭವನದಲ್ಲಿ ಸಮಾವೇಶಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಮೀನಾಕ್ಷಿ ಸುಂದರಂ, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಉದ್ಯೋಗಾಧಾರಿತ ಉದ್ಯಮಗಳನ್ನು ಸ್ಥಾಪಿಸಲು ವಿಫಲಗೊಂಡಿವೆ. ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಡುಗೆ ಅನಿಲ ದರ ದುಪಟ್ಟಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರು ಸರ್ಕಾರಗಳಿಗೆ ಹಿಡಿಶಾಪ ಹಾಕುವಂತಾಗಿದೆ. ಬಿಜೆಪಿ ಸರ್ಕಾರವು ಧರ್ಮಾಧಾರಿತ ರಾಜಕೀಯಕ್ಕೆ ಪ್ರಾಶಸ್ತ್ಯ ನೀಡುತ್ತಿರುವುದರಿಂದ ಕೋಮು ಸಾಮರಸ್ಯ ಕದಡುವಂತಾಗಿದೆ. ರಾಜ್ಯದ ಮತ್ತು ಕೇಂದ್ರದ ಬಿಜೆಪಿ ಸರಕಾರ ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತಿ ಜನರನ್ನು ದಾರಿ ತಪ್ಪಿಸುವ ಕಾರ್ಯದಲ್ಲಿ ಮಗ್ನವಾಗಿದೆ. ಧರ್ಮದ ಹೆಸರಿನಲ್ಲಿ ದ್ವೇಷದ ರಾಜಕಾರಣ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಪರ ಚಟುವಟಿಕೆಗಳನ್ನು ಅನುಷ್ಟಾನ ಪಡಿಸುವಲ್ಲಿ ಹಿನ್ನಡೆ ಸಾಧಿಸಿದೆ ಎಂದು ಕಿಡಿಕಾರಿದರು. ಲಿಂಗತಾರತಮ್ಯ ನಿರಂತರವಾಗಿ ನಡೆಯುತ್ತಿದೆ. ಮಹಿಳೆಯರ ಸಶಕ್ತಿಕರಣಕ್ಕೆ ಯಾವುದೇ ಯೋಜನೆಗಳನ್ನು ಜಾರಿ ಮಾಡದೇ ದಾರಿತಪ್ಪಿಸುತ್ತಿದೆ. ಎಲ್ಲರನ್ನು ಗುತ್ತಿಗೆ ಪದ್ದತಿಯಲ್ಲಿ ದುಡಿಸಿಕೊಳ್ಳುವ ದುಷ್ಟ ಆಲೋಚನೆಯಲ್ಲಿ ಈ ಬಿಜೆಪಿ ಸರಕಾರವಿದೆ ಎಂದು ಕಟುವಾಗಿ ಟೀಕಿಸಿದರು.
ಸಿಐಟಿಯು ಜಿಲ್ಲಾ ಸಮಿತಿಯ ಅಧ್ಯಕ್ಷ ತಿಲಕಗೌಡ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಆರ್.ಶಾನಭಾಗ ಪ್ರಾಸ್ತಾವಿಸಿ ಮಾತನಾಡಿದರು. ಅಂಬೇಡ್ಕರ ಭನವದ ಆವರಣದಲ್ಲಿ ಕಾಮೆಡ್ ನೇತ್ರಾವತಿ ಅಂಕೊಲೇಕರ ಮತ್ತು ಶಿಲ್ಪಾ ಅವರ ನೆನಪಿನಲ್ಲಿ ಸಿಐಟಿಯ ಚಳುವಳಿಯ ಇತಿಹಾಸ ಮತ್ತು ಫಲಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು ವೇದಿಕೆಯಲ್ಲಿ ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ರಾಜ್ಯ ಕಾರ್ಯದರ್ಶಿ ಯುಮುನಾ ಗಾಂವಕರ, ಉದಯನಾಯ್ಕ, ಜಯಶ್ರೀ ಹಿರೇಕೆರ ಜಗದೀಶ ನಾಯ್ಕ ಇದ್ದರು. ಕಾರ್ಯಕ್ರಮದಲ್ಲಿ ಮುಖಂಡರಾದ ಸಲೀಂ ಸೈಯದ್, ಡಿ. ಸ್ಯಾಮಸನ್, ಪದ್ಮಾ ಕಾಳೆ, ಕೃಷ್ಣ ಭಟ್ಟ ಹಾಗೂ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top