ಹೊನ್ನಾವರ : ರೋಟರಿ ಕ್ಲಬ್ ಹೊನ್ನಾವರ ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅತ್ಯಂತ ಉತ್ತಮ ಗುಣಮಟ್ಟದ ನೀರಿನ ಶುದ್ಧೀಕರಣ ಘಟಕವನ್ನು ನೀಡಿದರು.
ನೀರಿನ ಶುದ್ಧೀಕರಣ ಘಟಕವನ್ನು ಶಾಲೆಗೆ ಹಸ್ತಾಂತರಿಸಿ ಮಾತನಾಡಿದ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಗೌರೀಶ ದುಂಡರವರು ಮಾತನಾಡಿ ಪ್ರಭಾತನಗರ ಶಾಲೆ ಸರ್ಕಾರಿ ಶಾಲೆ ೧೪೦ ಕ್ಕಿಂತ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ಶಾಲೆಗೆ ನಮ್ಮ ಹೊನ್ನಾವರ ರೋಟರಿರವರು ಈ ಶಾಲೆಗೆ ಅತ್ಯಂತ ಅವಶ್ಯಕವಿರುವ ನೀರಿನ ಶುದ್ಧೀಕರಣ ಘಟಕವನ್ನು ನೀಡಿ ಒಂದು ಉತ್ತಮ ಕೆಲಸ ಮಾಡಿದ್ದಾರೆ. ಜಗತ್ತಿನಲ್ಲಿ ರೋಟರಿ ಪರಿವಾರದವರು ರೋಗಗಳ ವಿರುದ್ಧ ಹೋರಾಡಲು ಶುದ್ಧ ನೀರು ಮತ್ತು ನೈರ್ಮಲ್ಯ ಒದಗಿಸಲು ಶಿಕ್ಷಣವನ್ನು ಬೆಂಬಲಿಸಲು ಮತ್ತು ಪರಿಸರ ರಕ್ಷಿಸಲು ತುಂಬಾ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ. ಇಂದು ಪ್ರಭಾತನಗರ ಶಾಲೆಗೆ ಇಂತಹ ಉತ್ತಮ ಸೇವಾ ಕಾರ್ಯ ಮಾಡಿದು ನಮ್ಮ ಹೊನ್ನಾವರದ ರೋಟರಿ ಅಧ್ಯಕ್ಷರಾದ ಸೂರ್ಯಕಾಂತ ಸಾರಂಗ ಮತ್ತು ತಂಡದವರು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿ ಮುಂದಿನ ದಿನಗಳಲ್ಲಿ ಶಾಲೆಗೆ ಯಾವುದೇ ಅವಶ್ಯಕತೆ ಇದ್ದರೆ ರೋಟರಿಯನ್ನು ಸಂಪರ್ಕಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿ ಕಾರ್ಯಕ್ರಮ ಸಂಘಟನೆ ಬಗ್ಗೆ ಪ್ರಶಂಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿನಾಯಕ ಅವಧಾನಿರವರು ಮಾತನಾಡಿ ರೋಟರಿ ಕ್ಲಬ್ ಹೊನ್ನಾವರದವರು ವಿಶೇಷವಾಗಿ ಸರ್ಕಾರಿ ಶಾಲೆಗಳಿಗೆ ಅತ್ಯಗತ್ಯವಾಗಿ ಬೇಕಾಗುವ ಪರಿಕರಗಳನ್ನು ವಿಶೇಷವಾಗಿ ನೀರಿನ ಫಿಲ್ಟರ್, ಪಾಠೋಕರಣ, ಪಿಠೋಪಕರಣ, ಸ್ಮಾರ್ಟ್ ಕ್ಲಾಸ್ ಇವುಗಳನ್ನು ಒದಗಿಸಿ ನಮ್ಮ ಶಿಕ್ಷಣ ಇಲಾಖೆಗೆ ವಿಶೇಷವಾದ ಸಹಕಾರ ನೀಡುತ್ತಾ ಬಂದಿದೆ. ಈ ವರ್ಷ ನಮ್ಮ ತಾಲೂಕಿನ ೩೦ಕ್ಕೂ ಹೆಚ್ಚು ಶಾಲೆಗಳಿಗೆ ಅವರು ನೆರವುಗಳನ್ನು ನೀಡಿದ್ದಾರೆ. ಇದು ಅವರಿಗೆ ಶಿಕ್ಷಣದ ಬಗೆಗಿನ ಕಾಳಜಿಯನ್ನು ತೋರಿಸುತ್ತದೆ. ಪ್ರಭಾತನಗರ ಶಾಲೆಗೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಇತ್ತು. ಆದರೆ ಇಂದು ಅತ್ಯುತ್ತಮ ಗುಣಮಟ್ಟದ ನೂರಾರು ಮಕ್ಕಳಿಗೆ ಸಾಕಾಗುವಷ್ಟು ನೀರನ್ನು ಒದಗಿಸುವ ಸುಮಾರು ೩೦ ಸಾವಿರ ಮೌಲ್ಯದ ನೀರಿನ ಫಿಲ್ಟರ್ ನೀಡಿರುವುದು ತುಂಬಾ ಶ್ಲಾಘನೀಯ ವಿಚಾರ. ಇಲಾಖೆಯ ಪರವಾಗಿ ರೋಟರಿ ಹೊನ್ನಾವರ ಇವರನ್ನು ಅಭಿನಂದಿಸುತ್ತೇನೆ ಎಂದು ಹೇಳಿ ಮುಂದೆಯು ಕೂಡ ನಮ್ಮ ಇಲಾಖೆಯ ಬಗ್ಗೆ ಕಾಳಜಿ ಇರಲಿ ಎಂದು ಹೇಳಿದರು.
ರೋಟರಿ ಅಧ್ಯಕ್ಷರಾದ ಸೂರ್ಯಕಾಂತ ಸಾರಂಗರವರು ಮಾತನಾಡಿ ನಮಗೆ ಇಂದು ತುಂಬಾ ಖುಷಿಯ ದಿನ. ಯಾಕೆಂದರೆ ನಮ್ಮ ರೋಟರಿಯ ಉದ್ದೇಶಕ್ಕೆ ಅನುಗುಣವಾಗಿ ನಾವು ಇಂದು ಒಂದು ಉತ್ತಮವಾದ ಸೇವೆ ಮಾಡುವುದಕ್ಕೆ ಅವಕಾಶ ಸಿಕ್ಕಿದೆ. ಈ ಶಾಲೆಯಲ್ಲಿ ಕ್ರಿಯಾಶೀಲವಾದ ಎಸ್.ಡಿ.ಎಂ.ಸಿ. ಹಾಗೂ ಶಿಕ್ಷಕರಿದ್ದಾರೆ. ಇಲ್ಲಿ ನೀರಿನ ಶುದ್ಧೀಕರಣ ಘಟಕ ತುಂಬಾ ಅವಶ್ಯಕತೆ ಇತ್ತು. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮಂಜುನಾಥ ಮೇಸ್ತರವರು ಹಾಗೂ ಮುಖ್ಯಾಧ್ಯಾಪಕರಾದ ಎಂ. ಜಿ. ನಾಯ್ಕರವರು ತಮ್ಮನ್ನು ಸಂಪರ್ಕಿಸಿದಾಗ ವಿಚಾರ ಹೇಳಿದಾಗ ಇದಕ್ಕೆ ವ್ಯವಸ್ಥೆ ಮಾಡಿ ಹಣವನ್ನು ನೀಡುತ್ತೇವೆ ಎಂದು ಹೇಳಿದ್ದೆ. ಕೇವಲ ೪ ದಿನಗಳಲ್ಲಿ ಒಂದು ಉತ್ತಮವಾದ ನೀರಿನ ಶುದ್ಧೀಕರಣ ಘಟಕ ನೀಡಲು ನಮಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ರೋಟರಿ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ರೋಟರಿ ಕಾರ್ಯದರ್ಶಿ ಎಂ. ಎಂ. ಹೆಗಡೆ ಸರ್ವರನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮಂಜುನಾಥ ಮೇಸ್ತ, ಸ್ಥಳೀಯ ಪಟ್ಟಣ ಪಂಚಾಯತ ಸದಸ್ಯ ಶ್ರೀಮತಿ ಮೇಧಾ ನಾಯ್ಕ ಹಾಗೂ ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮುಖ್ಯಾಧ್ಯಾಪಕರಾದ ಎಂ. ಜಿ. ನಾಯ್ಕ ಸ್ವಾಗತಿಸಿದರು. ಶ್ರೀಮತಿ ವಿಜಯ ಶೇಟ್ ವಂದಿಸಿದರು. ಶಿಕ್ಷಕಿ ಗಿರಿಜಾ ಗೌಡ ಕಾರ್ಯಕ್ರಮ ನಿರೂಪಿಸಿದರು.