ನೆಡುತೋಪು ಮೌಲ್ಯಮಾಪನ ವರದಿ ಪ್ರಕಟಿಸಲು ಆಗ್ರಹ: ರವೀಂದ್ರ ನಾಯ್ಕ
ಮುಂಡಗೋಡ: ಅರಣ್ಯ ಇಲಾಖೆಯ ಆಶ್ರಯದಲ್ಲಿ ಜರುಗಿದ ನಡುತೋಪು ಮೌಲ್ಯಮಾಪನ ವರದಿ ಸಾರ್ವತ್ರಿಕವಾಗಿ ಪ್ರಕಟಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಅವರು ಮುಂಡಗೋಡ ತಾಲೂಕಿನ ಬೆಡಸಗಾಂವ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಚಿಕೊಪ್ಪದಲ್ಲಿ ದಶಲಕ್ಷ ಗಿಡನೆಡುವ ಅಭಿಯಾನದ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಮೇಲಿನಂತೆ ಹೇಳಿದರು. ಅರಣ್ಯ ಇಲಾಖೆಯು ನಡುತೋಪಿನ ನಿರ್ವಹಣೆ, ಪೋಷಣೆ ಮತ್ತು ರಕ್ಷಣೆಯ ಕ್ರಮ ಆಕ್ಷೇಪಣಾರ್ಹ. ಇಂದು ಅರಣ್ಯ ಇಲಾಖೆಯ ಈ ಕ್ರಮದ ಕುರಿತು ಸಾರ್ವಕನಿಕವಾಗಿ ವ್ಯಾಪಕವಾದ ಟೀಕೆಗೆ ಕಾರಣವಾಗಿದೆ. ವನ್ಯ ಜೀವಿ ಮತ್ತು ಪರಿಸರಕ್ಕೆ ಪೂರಕವಾದ ಗಿಡಗಳ ನೆಡುವ ಕ್ರಮ ಅರಣ್ಯ ಇಲಾಖೆ ಜರುಗಿಸಬೇಕೆಂದು ಅವರು ಹೇಳಿದರು. ಅಲ್ಲದೇ, ಗಿಡ ನೆಡುವುದು ಅರಣ್ಯ ಇಲಾಖೆಯ ಜವಬ್ದಾರಿ ಮಾತ್ರ ಅಲ್ಲ. ಪ್ರತಿಯೊಬ್ಬ ಪ್ರಜೆಯು ಗಿಡ ನೆಡುವ ಕಾರ್ಯದಲ್ಲಿ ಭಾಗಿಗಳಾಗಬೇಕೆಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಸಂಚಾಲಕರಾದ ಗಣಪತಿ ನಾಯ್ಕ ಬೆಡಸಗಾಂವ್, ಮಂಜುನಾಥ ನಾಯ್ಕ ಕಂಚಿಕೊಪ್ಪ, ಪ್ರಶಾಂತ್ ಜೈನ್ ಆಟಬೈಲ್, ಸುಧಾಕರ ನಾಯ್ಕ ಕಂಚಿಕೊಪ್ಪ, ಕೃಷ್ನ ನಾಯ್ಕ ಕಂಚಿಕೊಪ್ಪ, ದೇವೇಂದ್ರ ನಾಯ್ಕ ಬೆಡಸಗಾಂವ್ ಗೋವಿಂದ ನಾಯ್ಕ ಆಟಬೈಲ್, ಸುರೇಶ ನಾಯ್ಕ, ಚಿಕ್ಕಯ್ಯ ಕಂಚಿಕೊಪ್ಪ, ಕೃಷ್ಣಪ್ಪ ದೇವೇಂದ್ರ ಬಾಳೆಕೊಪ್ಪ, ಮಂಜುನಾಥ ಅಟಬೈಲ್, ವಿನಾಯಕ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ನೆಟ್ಟದ್ದೆಷ್ಟು, ಸತ್ತದ್ದೆಷ್ಟು ….?
ಅರಣ್ಯ ಇಲಾಖೆ ಮುತುವರ್ಜಿಯಲ್ಲಿ ಜರುಗುವ ನಡುತೋಪು ಮೌಲ್ಯಮಾಪನ ಅತೀ ಅವಶ್ಯವಾಗಿದ್ದು ಇರುತ್ತದೆ. ಮೌಲ್ಯಮಾಪನದಿಂದ ನೆಟ್ಟಿರುವ ಗಿಡ, ಸತ್ತಿರುವ ಗಿಡದ ಸಂಖ್ಯೆಗೆ ಅನುಗುಣವಾಗಿ ತುಲಾತ್ಮಾಕ ಮಾಡುವುದು ಮಹತ್ವದ ಅಂಶ. ಇಂತಹ ಅಂಶಗಳು ಸಾರ್ವತ್ರಿಕವಾಗಿ ಅರಣ್ಯ ಇಲಾಖೆಯು ಬಹಿರಂಗಗೊಳಿಸುವುದು ಪಾರದರ್ಶಕತೆ ಮತ್ತು ಇಲಾಖೆಯ ದಕ್ಷತೆಗೆ ಸಾಕ್ಷಿಯಾಗುವುದು. ಇದರಿಂದ ನೆಟ್ಟದ್ದು ಎಷ್ಟೂ, ಸತ್ತಿದ್ದು ಎಷ್ಟೂ…? ಎಂಬ ಅಂಶ ಬೆಳಕಿಗೆ ಬರುವುದು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.