ಶಿರಸಿ: ಕಳೆದ ಐವತ್ತು ವರ್ಷಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿ ದೇಶದ ಪ್ರಜಾಪ್ರಭುತ್ವದಲ್ಲಿ ಇಂದಿಗೂ ಕಪ್ಪುಚುಕ್ಕೆಯಾಗಿ ಉಳಿದಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಅಂದಿನ ಕಾಂಗ್ರೆಸ್ನ ಮನಸ್ಥಿತಿಗೂ ಇಂದಿನ ಕಾಂಗ್ರೆಸ್ನ ಮನಸ್ಥಿತಿಗೂ ಯಾವುದೇ ಬದಲಾವಣೆಯಾಗಿಲ್ಲ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ವಾಗ್ದಾಳಿ ನಡೆಸಿದರು.
ಜಿಲ್ಲಾ ಬಿಜೆಪಿ ನಗರದ ದೀನದಯಾಳ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತುರ್ತು ಪರಿಸ್ಥಿತಿಯ ಕರಾಳ ಇತಿಹಾಸಕ್ಕೆ 50 ವರ್ಷ-ಭಾರತೀಯ ಪ್ರಜಾಪ್ರಭುತ್ವ ಕರಾಳ ಅಧ್ಯಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತುರ್ತು ಪರಿಸ್ಥಿತಿಯ ಮೂಲಕ 21ತಿಂಗಳು ದೇಶದ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿತ್ತು. ಇದು ಭಾರತಕ್ಕಷ್ಟೇ ಅಲ್ಲದೇ ವಿಶ್ವಮಾನವಕುಲಕ್ಕೆ ಆಘಾತಕಾರಿ ಸಂಗತಿ ಎಂದರು.
ಇಂದಿರಾ ಗಾಂಧಿಗೆ ತುರ್ತು ಪರಿಸ್ಥಿತಿ ಹೇರುವ ಅಗತ್ಯತೆ ಇರಲಿಲ್ಲ. ಯಾವುದೇ ಯುದ್ಧ, ಆಂತರಿಕ ಗಲಭೆಯಿರಲಿಲ್ಲ. ದೇಶಕ್ಕೆ ಆರ್ಥಿಕ ದುಸ್ಥಿತಿ ಬಂದಿರಲಿಲ್ಲ. ತನ್ನ ಅಧಿಕಾರ ಸ್ವಾರ್ಥಕ್ಕೆ, ಕಾಂಗ್ರೆಸ್ ಶಕ್ತಿ ಪ್ರದರ್ಶಿಸಲು, ವಿರೋಧಿಗಳನ್ನು ಹತ್ತಿಕ್ಕಲು ಇಂದಿರಾಗಾಂಧಿ ಕರಾಳ ತುರ್ತು ಪರಿಸ್ಥಿತಿ ಹೇರಿದ್ದರು ಎಂದು ಆಪಾದಿಸಿದರು.
ಇಂದಿರಾ ಗಾಂಧಿ ದಿಟ್ಟ ಮಹಿಳೆಯಾಗಿದ್ದರು. ಚೀನಾ ಯುದ್ಧದಲ್ಲಿ ದೇಶದ ಸಾಮರ್ಥ್ಯ ತೋರಿದ್ದರು. ವಾಜಪೇಯಿ ಅವರು ಇವರನ್ನು ದುರ್ಗೆ ಎಂತಲೇ ಸಂಬೋಧಿಸಿದ್ದರು. ಆದರೆ ತುರ್ತು ಪರಿಸ್ಥಿತಿ ಹೇರುವ ಮೂಲಕ ದೇಶದ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆಯಿಟ್ಟರು ಎಂದರು.
ಇದರ ವಿರುದ್ಧ ಅಂದು ಜನಸಂಘದ ಕಾರ್ಯಕರ್ತರು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಿದರು. ಇದರ ಪರಿಣಾಮ ತುರ್ತು ಪರಿಸ್ಥಿತಿಯಿಂದ ಜನ ವಿಮುಖ ಆಗುವಂತೆ ಆಯಿತು. ಇಂತಹ ಸ್ಥಿತಿ ಪ್ರಜಾಪ್ರಭುತ್ವಕ್ಕೆ ಮರುಕಳಿಸಬಾರದು ಎಂಬ ಕಾರಣಕ್ಕೆ ಈಗ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್ ಎಸ್.ಹೆಗಡೆ ಕರ್ಕಿ ಮಾತನಾಡಿ, ಕಾಂಗ್ರೆಸ್ ಸರಕಾರದಿಂದ ರಾಜ್ಯದ ಜನ ಕರಾಳ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಅಭಿವೃದ್ಧಿಯಿಲ್ಲ, ಆರ್ಥಿಕ ಪರಿಸ್ಥಿತಿ ಕುಸಿದಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಬ್ರಾಯ ವಾಳ್ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಆರ್.ಡಿ.ಹೆಗಡೆ ಜಾನ್ಮನೆ, ಉಷಾ ಹೆಗಡೆ, ಸಂತೋಷ ತಳವಾರ, ರೇಖಾ ಹೆಗಡೆ, ವಿನಾಯಕ ನಾಯ್ಕ ಮುಂತಾದವರು ಪಾಲ್ಗೊಂಡಿದ್ದರು.
ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರೇಮಕುಮಾರ ನಾಯ್ಕ ನಿರೂಪಿಸಿದರು.
ಬಾಕ್ಸ್
ಅನಂತಕುಮಾರ ವಿರುದ್ಧ ಅಪಪ್ರಚಾರ:
ದೇಶದಲ್ಲಿ 110ಕ್ಕೂ ಹೆಚ್ಚು ಸಲ ಸಂವಿಧಾನದ ತಿದ್ದುಪಡಿ ಆಗಿದೆ. ಅದರಲ್ಲಿ 80 ಬಾರಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೇ ತಿದ್ದುಪಡಿ ಮಾಡಿದೆ. ಆದರೂ ಹಿಂದೆ ಮಾಜಿ ಸಂಸದ ಅನಂತಕುಮಾರ ಅವರು ಸಂವಿಧಾನ ತಿದ್ದುಪಡಿ ಬಗ್ಗೆ ಆಡಿದ ಮಾತನ್ನು ಅರ್ಥ ಮಾಡಿಕೊಳ್ಳದೇ ಕಾಂಗ್ರೆಸ್ ಅಪಪ್ರಚಾರ ಮಾಡಿತು. ಈಗಲೂ ಅದನ್ನು ಮುಂದುವರೆಸಿದೆ ಎಂದು ಲಿಂಗರಾಜ ಪಾಟೀಲ್ ಕಿಡಿಕಾರಿದರು.
ಬಾಕ್ಸ್
ಗ್ರಾಪಂ ಎದುರು ಸತ್ಯಾಗ್ರಹ…
ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರದ ವಿರುದ್ಧ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಎದುರು ಜೂ.30ರಂದು ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ತಿಳಿಸಿದರು.