- ಸಂದೇಶ್ ಎಸ್.ಜೈನ್, ದಾಂಡೇಲಿ
ದಾಂಡೇಲಿ : ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರಕಾರ ರಿಯಾಯಿತಿ ದರದಲ್ಲಿ ಪ್ರತಿವರ್ಷದಂತೆ ಬಸ್ ಪಾಸ್ ವಿತರಣೆಗೆ ಈ ವರ್ಷವೂ ಮುಂದಾಗಿದೆ. ಈಗಾಗಲೇ ಬಸ್ ಪಾಸಿಗಾಗಿ ಆನ್ಲೈನಿನಲ್ಲಿ ಅರ್ಜಿ ಸಲ್ಲಿಸಿದ ಬಳಿಕ, ಬಸ್ ಬಸ್ ಪಡೆಯಲು ಬಸ್ ನಿಲ್ದಾಣಕ್ಕೆ ಬಂದರೆ, ಕರೆಂಟಿಲ್ಲ, ಸರ್ವರ್ ಡೌನ್ ಹೀಗೆ ನಾನಾ ಕಾರಣಗಳನ್ನು ಹೇಳಿ ಬಸ್ ಪಾಸ್ ಕೊಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ಸಾರಿಗೆ ಘಟಕದ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪಾಲಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ದಾಂಡೇಲಿಯ ಬಸ್ ನಿಲ್ದಾಣದ ಬಸ್ ಪಾಸ್ ವಿತರಣೆ ಮಾಡುವ ಕೊಠಡಿಯ ಮುಂಭಾಗದಲ್ಲಿ ಸರತಿಯ ಸಾಲಿನಂತೆ ಕಳೆದ ನಾಲ್ಕೈದು ದಿನಗಳಿಂದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪಾಲಕರು ಬಸ್ ಪಾಸಿಗಾಗಿ ಜಾತಕ ಪಕ್ಷಿಯಂತೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಒಂದು ಬಸ್ ಪಾಸ್ ನೀಡಲು ಕನಿಷ್ಟ ೧೫ ರಿಂದ ೨೦ ನಿಮಿಷ ತಗಲುತ್ತದೆ. ದಾಂಡೇಲಿ ಸಾರಿಗೆ ಬಸ್ ಘಟಕದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಬೇಕಾಗುತ್ತದೆ. ದಾಂಡೇಲಿ ನಗರದ ವಿವಿದೆಡೆಗಳ, ದಾಂಡೇಲಿ ಗ್ರಾಮೀಣ ಭಾಗ ಹಾಗೂ ಜೋಯಿಡಾ ತಾಲೂಕಿನ ಜೋಯಿಡಾ, ಅಣಶಿ, ರಾಮನಗರ, ಜಗಲ್ಬೇಟ್, ಗಣೇಶಗುಡಿ ಹೀಗೆ ಮೊದಲಾದ ಕಡೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಬೇಕಾಗಿದ್ದು, ಅವರೆಲ್ಲರೂ ಕಳೆದ ನಾಲ್ಕೈದು ದಿನಗಳಿಂದ ಸರತಿಯ ಸಾಲಿನಲ್ಲಿ ಬಂದು ಬಸ್ ಪಾಸ್ಗಾಗಿ ದಿನಗಟ್ಟಲೆ ಕಾಯುವಂತಾಗಿದೆ. ಮಂಗಳವಾರ ಬೆಳಗ್ಗಿನಿಂದಲೇ ಕರೆಂಟ್ ಇಲ್ಲದಿರುವುದರಿಂದ, ಬಸ್ ಪಾಸ್ ನೀಡುವುದನ್ನು ಕರೆಂಟ್ ಬರುವವರೆಗೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಪಾಲಕರು ಮೊದಲೇ ಬಸ್ ಪಾಸ್ ನೀಡಲು ತಾಂತ್ರಿಕ ಕಾರಣದ ನೆಪವನ್ನು ಒಡ್ಡಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಅದರಲ್ಲಿಯೂ ಕರೆಂಟ್ ಇಲ್ಲದ ಸಂದರ್ಭದಲ್ಲಿ ಬಸ್ ಪಾಸ್ ನೀಡುವುದನ್ನು ಸ್ಥಗಿತಗೊಳಿಸಲಾಗುತ್ತದೆ. ಇಂತಹ ಸಮಯದಲ್ಲಿ ಕೊನೆ ಪಕ್ಷ ಬ್ಯಾಟರಿಯನ್ನಾದರೂ ಇಟ್ಟುಕೊಂಡು ಬಸ್ ಪಾಸ್ ಅನ್ನು ನೀಡಲು ಸಾರಿಗೆ ಘಟಕದವರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.
ತ್ವರಿತವಾಗಿ ಬಸ್ ಪಾಸ್ ವಿತರಣೆಗೆ ಕ್ರಮ :
ಬಸ್ ಪಾಸ್ ವಿತರಣೆ ಮಾಡುವ ಸಾರಿಗೆ ಘಟಕದ ಅಧಿಕಾರಿ ಆರ್.ಎಂ ಗಿರಿರೆಡ್ಡಿ ಅವರು ತಾಂತ್ರಿಕ ಸಮಸ್ಯೆ ಹಾಗೂ ವಿದ್ಯುತ್ ಇಲ್ಲದಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದು ಬಸ್ ಪಾಸ್ ತ್ವರಿತ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.